ಜೂನ್ 21ರಂದು ನಡೆಯಲಿರುವ ನೀಟ್-ಯುಜಿ 2026ರ ಮರುಪರೀಕ್ಷೆಗಾಗಿ ನಾಗ್ಪುರದ ವಿದ್ಯಾರ್ಥಿಯೊಬ್ಬನಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿ ಮಾಡಲಾಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ಟಿಎ) ಅಭ್ಯರ್ಥಿಯನ್ನೇ ದೂರುತ್ತಿದೆ. ಅಭ್ಯರ್ಥಿಯು ಎನ್ಟಿಎ ಪೋರ್ಟಲ್ ಮೂಲಕ ತನ್ನ ಪರೀಕ್ಷಾ ಕೇಂದ್ರದ ಆದ್ಯತೆಗಳನ್ನು ತಾನೇ ಬದಲಾಯಿಸಿಕೊಂಡಿದ್ದು, ಮೊದಲ ಆಯ್ಕೆಯಾಗಿ ಅಬುಧಾಬಿ ಮತ್ತು ಎರಡನೇ ಆಯ್ಕೆಯಾಗಿ ದುಬೈ ನಗರವನ್ನು ಆರಿಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದೆ.
ಆದರೆ, ವಿದ್ಯಾರ್ಥಿಯ ತಂದೆ ಅಬ್ದುಲ್ಲಾ ತಾಲಿಬ್ ಅವರು ತಮ್ಮ ಮಗ ನೀಟ್ ಪರೀಕ್ಷೆಗಾಗಿ ನಾಗ್ಪುರ, ವರ್ಧಾ ಹಾಗೂ ಭಂಡಾರಾ ಕೇಂದ್ರಗಳನ್ನು ಆದ್ಯತೆಯಾಗಿ ಆರಿಸಿಕೊಂಡಿದ್ದರು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎನ್ಟಿಎ ಅಧಿಕಾರಿ, “ಮೇ 3ರಂದು ನಡೆದಿದ್ದ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಲು ಬಳಸಲಾದ ಅದೇ ಐಪಿ ವಿಳಾಸವನ್ನು ಬಳಸಿಕೊಂಡೇ ಎನ್ಟಿಎ ಪೋರ್ಟಲ್ನಲ್ಲಿ ಈಗಿನ ಬದಲಾವಣೆಯನ್ನು ಅಭ್ಯರ್ಥಿ ಮಾಡಿದ್ದಾರೆ. ದಾಖಲೆಗಳ ಪ್ರಕಾರ, ಮೇ 21ರಂದು ಅಭ್ಯರ್ಥಿಯು ಎನ್ಟಿಎ ಪೋರ್ಟಲ್ನಲ್ಲಿ ಲಾಗ್ಇನ್ ಆಗಿ ತನ್ನ ಪರೀಕ್ಷಾ ಕೇಂದ್ರಗಳ ಆದ್ಯತೆಗಳನ್ನು ಬದಲಾಯಿಸಿದ್ದಾರೆ” ಎಂದು ವಾದಿಸಿದ್ದಾರೆ.
ಅಭ್ಯರ್ಥಿಯ ಲಾಗಿನ್ ವಿವರಗಳನ್ನು ಬಳಸಿ ಮೂರು ಬಾರಿ ಪರೀಕ್ಷಾ ಕೇಂದ್ರವನ್ನು ಅಬುಧಾಬಿಗೆ ಬದಲಾಯಿಸಲಾಗಿತ್ತು ಮತ್ತು ಕೇಂದ್ರವು ಅಬುಧಾಬಿ ಎಂದು ಎರಡು ಬಾರಿ ಪ್ರಿವ್ಯೂ (ಪೂರ್ವ ಪರಿಶೀಲನೆ) ಕೂಡ ಮಾಡಲಾಗಿತ್ತು. ಜೂನ್ 19ರ ಸಂಜೆ ಪರೀಕ್ಷಾ ಕೇಂದ್ರವನ್ನು ನಾಗ್ಪುರಕ್ಕೆ ಬದಲಾಯಿಸುವಂತೆ ಅನೌಪಚಾರಿಕ ವಿನಂತಿ ಬಂದಿತ್ತಾದರೂ, ಅದಕ್ಕೂ ಮುನ್ನವೇ ಪೋರ್ಟಲ್ನಲ್ಲಿ ಕೇಂದ್ರವನ್ನು ಅಬುಧಾಬಿಗೆ ನಿಗದಿಪಡಿಸಲಾಗಿತ್ತು ಎಂದು ಎನ್ಟಿಎ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 16 ರಂದೇ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದರೂ, ಅಭ್ಯರ್ಥಿ ಅಥವಾ ಅವರ ಕುಟುಂಬದವರು ಎನ್ಟಿಎ ಸಂಸ್ಥೆಯನ್ನು ಅಧಿಕೃತವಾಗಿ ಸಂಪರ್ಕಿಸಲಿಲ್ಲ ಅಥವಾ ಯಾವುದೇ ಇಮೇಲ್ ಕಳುಹಿಸಿರಲಿಲ್ಲ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಎನ್ಟಿಎ ಪೋರ್ಟಲ್ನಲ್ಲಿ ಅಭ್ಯರ್ಥಿ ನಡೆಸಿರುವ ಚಟುವಟಿಕೆಗಳ ಸಂಪೂರ್ಣ ದಾಖಲೆಗಳು ಸಂಸ್ಥೆಯ ಬಳಿ ಇವೆ. ಜೂನ್ 16 ರಂದೇ ಪ್ರವೇಶ ಪತ್ರ ಕೈಯಲ್ಲಿದ್ದರೂ ಅವರು ಸುಮ್ಮನಿದ್ದು, ಪರೀಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಾಗ, ಜೂನ್ 20 ರಂದು ವಿದ್ಯಾರ್ಥಿಯ ತಂದೆ ಮಾಧ್ಯಮಗಳನ್ನು ಸಂಪರ್ಕಿಸಿದ್ದಾರೆ. ಸದ್ಯಕ್ಕೆ ಕೊನೆ ಕ್ಷಣದಲ್ಲಿ ವಿದ್ಯಾರ್ಥಿಗೆ ನಾಗ್ಪುರದಲ್ಲೇ ಕೇಂದ್ರವನ್ನು ಹಂಚಿಕೆ ಮಾಡಲಾಗುತ್ತಿದೆ. ಆದರೆ, ಈ ಬದಲಾವಣೆಗಳನ್ನು ಅಭ್ಯರ್ಥಿಯೇ ಮಾಡಿದ್ದಾನೋ ಅಥವಾ ಬೇರೆ ಯಾರಾದರೂ ಅವರ ಖಾತೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೋ ಎಂಬುದನ್ನು ಸೈಬರ್ ತಂಡವು ಪರಿಶೀಲಿಸುತ್ತಿದೆ ಎಂದು ಎನ್ಟಿಎ ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಟೆಲಿಗ್ರಾಂ – ಅಪರಾಧಿಗಳ ‘ಡಾರ್ಕ್ ವೆಬ್’ ಎಂದು ಕೇಂದ್ರ ಸರ್ಕಾರ ಹಣೆಪಟ್ಟಿ ಕಟ್ಟುತ್ತಿದೆ ಯಾಕೆ?.
ವಿದೇಶಿ ಪರೀಕ್ಷಾ ಕೇಂದ್ರ ಹಂಚಿಕೆಯಾದ ಏಕೈಕ ಪ್ರಕರಣ ನಾಗ್ಪುರದ್ದಾಗಿದ್ದು, ಬೇರೆ ಯಾವುದೇ ಇಂತಹ ಗೊಂದಲದ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ಎನ್ಟಿಎ ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ಅಭ್ಯರ್ಥಿಯ ತಂದೆ ಮೊಹಮ್ಮದ್ ತಾಲಿಬ್ ಅವರು ಮಾತನಾಡಿ, ತಮ್ಮ ಮಗನಿಗೆ ಪಾಸ್ಪೋರ್ಟ್ ಕೂಡ ಇಲ್ಲದ ಕಾರಣ ಮತ್ತು ಪ್ರಯಾಣದ ವ್ಯವಸ್ಥೆ ಮಾಡಲು ಸಮಯವಿಲ್ಲದ ಕಾರಣ ಮಗನನ್ನು ವಿದೇಶಕ್ಕೆ ಕಳುಹಿಸಲು ಸಂಪೂರ್ಣವಾಗಿ ಅಸಮರ್ಥರಾಗಿದ್ದೇವೆ ಎಂದು ಅಳಲು ತೋಡಿಕೊಂಡಿದ್ದರು.
ಈ ಘಟನೆ ಹೊರಬೀಳುತ್ತಿದ್ದಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎನ್ಟಿಎ ಸಂಸ್ಥೆಯು ದೇಶದ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.



