ಬಂಜಾರ ಸಮಾಜದಲ್ಲಿ ವರದಕ್ಷಿಣೆ ಪದ್ಧತಿ ನಿರ್ಮೂಲನೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ವಿಜಯಪುರ ನಗರದ ಬಂಜಾರ ಭವನದಲ್ಲಿ ರಾಷ್ಟ್ರೀಯ ಬಂಜಾರ ಪರಿಷತ್, ರಾಷ್ಟ್ರೀಯ ಲಕ್ಕಿಶಾ ಪರಿಷತ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜನಜಾಗೃತಿ ಸಮಾವೇಶ ನಡೆಯಿತು.
ರಾಜ್ಯಾಧ್ಯಕ್ಷ ಪ್ರಕಾಶ ಬಾಳು ಚವ್ಹಾಣ ಮಾತನಾಡಿ, “ವರದಕ್ಷಿಣೆ ಪಿಡುಗಿನಿಂದ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಮಕ್ಕಳ ಶಿಕ್ಷಣಕ್ಕೂ ಧಕ್ಕೆಯಾಗುತ್ತಿದೆ. ಈ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಸಮಾಜದ ಎಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಸಮಾವೇಶದಲ್ಲಿ ಸಮಾಜದ ಮುಖಂಡರು ವರದಕ್ಷಿಣೆ ವಿರೋಧಿ ಪ್ರತಿಜ್ಞೆ ಸ್ವೀಕರಿಸಿ, ಭವಿಷ್ಯದಲ್ಲಿ ವರದಕ್ಷಿಣೆ ಪದ್ಧತಿಯನ್ನು ಧಿಕ್ಕರಿಸುವ ಐತಿಹಾಸಿಕ ನಿರ್ಣಯ ಕೈಗೊಂಡರು.
ಚಿತ್ರದುರ್ಗದ ಬಂಜಾರ ಪೀಠದ ಧರ್ಮಗುರು ಸರ್ದಾರ ಸೇವಾಲಾಲ ಮಾತನಾಡಿ, “ವರದಕ್ಷಿಣೆ ಸಮಾಜಕ್ಕೆ ಕಂಟಕವಾಗಿದ್ದು, ಅದನ್ನು ನಿರ್ಮೂಲನೆ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂಚೂಣಿಗೆ ಬರಬೇಕು” ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಪ್ರಕಾಶ ಚವ್ಹಾಣ ಅವರ ಸಾಮಾಜಿಕ ಕಾಳಜಿಯ ಕಾರ್ಯವನ್ನು ಶ್ಲಾಘಿಸಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಧರ್ಮಗುರುಗಳು, ಮಾಜಿ ಶಾಸಕರು, ಸಮಾಜದ ಮುಖಂಡರು ಹಾಗೂ ಜಿಲ್ಲೆಯ ವಿವಿಧ ತಾಂಡಾಗಳ ನಾಯಕರು, ಕಾರಬಾರಿಗಳು ಮತ್ತು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಸಮಾಜಸೇವಕ ಸುರೇಶ ಬಿಜಾಪುರ ನೆರವೇರಿಸಿದರು.




