- ಒಟ್ಟು ಬಾಳೇವು ಬ್ಯಾರೇನ ಐತಿ ಎಂದ ಯೋಗರಾಜ್ ಭಟ್
- ಜನಪದ ಹಾಡಿಗೆ ಧ್ವನಿಯಾದ ಅಜನೀಶ್ ಲೋಕನಾಥ್
ಕನ್ನಡದ ಸ್ಟಾರ್ ನಟ ಡಾಲಿ ಧನಂಜಯ್ ಅಭಿನಯದ ʼಹೊಯ್ಸಳʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಟೀಸರ್ ಮತ್ತು ಟ್ರೈಲರ್ಗಳ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರದ “ಬ್ಯಾರೇನ ಐತಿ..” ಲಿರಿಕಲ್ ಹಾಡು ಸೋಮವಾರ ಬಿಡುಗಡೆಯಾಗಿದ್ದು, ಸಿನಿ ರಸಿಕರ ಗಮನ ಸೆಳೆಯುತ್ತಿದೆ.
ಚಿತ್ರತಂಡ ಹೇಳಿಕೊಂಡಿರುವಂತೆ ಇಡೀ ‘ಹೊಯ್ಸಳ’ ಸಿನಿಮಾದ ಕಥೆ ಸಾಗುವುದು ಗಡಿ ಜಿಲ್ಲೆ ಬೆಳಗಾವಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ. ಉತ್ತರ ಕರ್ನಾಟಕ ಭಾಗದ ಕಥೆಯಾದ ಕಾರಣಕ್ಕೆ ಚಿತ್ರದಲ್ಲಿ ಸ್ಥಳೀಯ ಸೊಗಡಿನ ಜನಪದ ಹಾಡನ್ನು ಬಳಸಿಕೊಳ್ಳಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಸುರೇಶ್ ಇಂಚಗೇರಿ ಅವರ “ಅದು ಬ್ಯಾರೇನ ಐತಿ…” ಜನಪದ ಹಾಡನ್ನೇ ಹಿರಿಯ ನಿರ್ದೇಶಕ, ಚಿತ್ರ ಸಾಹಿತಿ ಯೋಗರಾಜ್ ಭಟ್ ಸಿನಿಮಾ ಶೈಲಿಗೆ ಹೊಂದುವಂತೆ ಮರು ರಚನೆ ಮಾಡಿದ್ದಾರೆ.
“ಹುಟ್ಟಿ ಸಾಯೋದಲ್ಲ ಒಟ್ಟು ಬಾಳೇವು ಬ್ಯಾರೇನ ಐತಿ… ನೀವು ಕಂಡಂಗಲ್ಲ ನಮ್ಮ ಬಾಳೇವು ಬ್ಯಾರೇನ ಐತಿ…” ಎಂಬ ಸಾಲುಗಳು ಕೇಳುಗರಿಗೆ ಮುದ ನೀಡುವಂತಿವೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ತಾವೇ ಸಂಗೀತ ನೀಡಿ, ಧ್ವನಿಯಾಗಿರುವ ಈ ಜನಪದ ಹಾಡಿನ ಲಿರಿಕಲ್ ವಿಡಿಯೋ ಸದ್ಯ ಯಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ವಿಜಯ್ ಎನ್ ನಿರ್ದೇಶನದಲ್ಲಿ ಮೂಡಿಬಂದಿರುವ ʼಹೊಯ್ಸಳʼ ಚಿತ್ರದಲ್ಲಿ ಧನಂಜಯ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಅಮೃತಾ ಅಯ್ಯಂಗಾರ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನವೀನ್ ಶಂಕರ್, ಅವಿನಾಶ್ ಬಿಎಸ್, ರಾಜೇಶ್ ನಟರಂಗ, ಅಚ್ಯುತ್ ಕುಮಾರ್, ಮಯೂರಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ʼಕೆ ಆರ್ ಜಿ ಸ್ಟುಡಿಯೋಸ್ʼನ ಕಾರ್ತಿಕ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರ ಮಾರ್ಚ್ 30ರಂದು ತೆರೆ ಕಾಣಲಿದೆ.