ಈ ದಿನ ವಿಶೇಷ | ಗ್ಯಾರಂಟಿ ಯೋಜನೆಗಳ ಬಗ್ಗೆ ಸಿನಿ ತಾರೆಯರ ಮಾತು

Date:

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಯ ಭರವಸೆಗಳಿಗೆ ಯೋಜನೆಯ ರೂಪ ನೀಡಿ ಜಾರಿಗೆ ತಂದಿದೆ. ಸರ್ಕಾರದ ಈ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗಗಳಿಗೆ ನೆರವಾಗುತ್ತವೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

ಉಚಿತ ಭಾಗ್ಯಗಳನ್ನು ಕೊಟ್ಟರೆ ಜನ ಸೋಮಾರಿಗಳಾಗುತ್ತಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಸದ್ಯ ಚರ್ಚೆಯಲ್ಲಿರುವ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ಯಾಂಡಲ್‌ವುಡ್‌ನ ತಾರೆಯರು ಮತ್ತು ತಂತ್ರಜ್ಞರು ಈ ದಿನ.ಕಾಮ್‌ ಜೊತೆಗೆ ಮಾತನಾಡಿದ್ದಾರೆ.

ಸರ್ಕಾರದ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ – ಮಂಸೋರೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಮಂಸೋರೆ

ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ಸರ್ಕಾರದ ನಡೆ ಒಳ್ಳೆಯದು. ಕೇವಲ ಬಿಪಿಎಲ್‌ ಕಾರ್ಡ್‌ನವರಿಗೆ ಮಾತ್ರವಲ್ಲ, ಎಪಿಎಲ್‌ ಕಾರ್ಡ್‌ನವರಿಗೂ ಅನ್ನಭಾಗ್ಯ ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಯೋಜನೆಗಳು ಎರಡು ವರ್ಷಗಳ ಕಾಲ ಇರುತ್ತವೊ ಅಥವಾ 5 ವರ್ಷಗಳ ಕಾಲ ಮುಂದುವರೆಯುತ್ತವೊ ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ. ಆದರೆ, ಜನರಿಗೆ ಇಂತಹ ಯೋಜನೆಗಳ ಅನಿವಾರ್ಯತೆ ಇತ್ತು. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಅಥವಾ 200 ಯುನಿಟ್‌ ಉಚಿತ ವಿದ್ಯುತ್‌ ಯೋಜನೆಗಳೇ ಆಗಿರಬಹುದು, ಈ ಎಲ್ಲ ಯೋಜನೆಗಳಿಗೆ ಷರತ್ತುಗಳನ್ನು ವಿಧಿಸಿ ಆರ್ಥಿಕ ಶಿಸ್ತನ್ನು ಅಳವಡಿಸಿ ಜಾರಿಗೆ ತರುತ್ತಿರುವುದು ಬಹಳ ಒಳ್ಳೆಯದು. ಯಾಕೆಂದರೆ ಸಾರ್ವಜನಿಕ ಯೋಜನೆಗಳ ದುರುಪಯೋಗ ಕೂಡ ಹೆಚ್ಚಾಗೇ ನಡೆಯುತ್ತದೆ. ಹೀಗಾಗಿ ಷರತ್ತುಗಳನ್ನು ಹಾಕುವುದು ಅನಿವಾರ್ಯ. ಈ ಯೋಜನೆಗಳಿಂದ ಸರ್ಕಾರ ದಿವಾಳಿಯಾಗುತ್ತೆ ಎಂದು ಟೀಕೆ ಮಾಡುವವರೇ ಹಿಂಬದಿಯಿಂದ ಫಲಾನುಭವಿಯಾಗುವುದಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಸರ್ಕಾರದ ಬಿಟ್ಟಿ ಯೋಜನೆ ಯಾಕೆ ಬಿಡಬೇಕು ಎಂಬ ಮನಸ್ಥಿತಿಯವರೇ ನಮ್ಮಲ್ಲಿ ಹೆಚ್ಚು. ಹೀಗಾಗಿ ಈ ಸವಲತ್ತುಗಳು ಉಳ್ಳವರ ಪಾಲಾಗದೆ ಅನಿವಾರ್ಯತೆ ಇರುವವರಿಗೆ ತಲುಪುವಂತೆ ಸರ್ಕಾರ ಎಚ್ಚರವಹಿಸಬೇಕಿದೆ. ಈ ಯೋಜನೆಗಳು ನಿಜವಾದ ಬಡವರಿಗೆ ತಲುಪುತ್ತವೆ ಎಂಬ ನಂಬಿಕೆ ಇದೆ.

ಸರ್ಕಾರದ ಈ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳು ಎನ್ನುವುದು ಅಥವಾ ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂಬ ರೀತಿಯ ಚರ್ಚೆಗಳು ರಾಜಕೀಯ ಪ್ರೇರಿತವಾದವು. ಸರ್ಕಾರದ ಯೋಜನೆಗಳನ್ನು ಉಚಿತ ಎನ್ನುವುದೇ ತಪ್ಪು. ಪ್ರಜೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸರ್ಕಾರಗಳ ಕರ್ತವ್ಯ. ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಾಗ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ ಎನ್ನಬೇಕೇ ಹೊರತು ಉಚಿತ ಎನ್ನಬಾರದು. ಉಚಿತ ಸವಲತ್ತು ಅಥವಾ ಯೋಜನೆಗಳು ಎನ್ನುವುದು ಅಸಂವಿಧಾನಿಕ. ಈ ಯೋಜನೆಗಳ ಸಾಧಕ-ಬಾಧಕಗಳು ನಮಗೆ ಈಗಲೇ ತಿಳಿಯುವುದಿಲ್ಲ. ಈ ಸವಲತ್ತುಗಳನ್ನು ನೀಡಲು ಸರ್ಕಾರ ಎಷ್ಟು ಹಣವನ್ನು ಖರ್ಚು ಮಾಡುತ್ತದೆ, ಆ ಮೊತ್ತವನ್ನು ಹೇಗೆ ಸಂಗ್ರಹಿಸುತ್ತದೆ, ಆದಾಯ ಮತ್ತು ಖರ್ಚನ್ನು ಹೇಗೆ ನಿಭಾಯಿಸುತ್ತದೆ, ಹಿಂದಿನ ಸರ್ಕಾರ ಮಾಡಿದ ಸಾಲ ಎಷ್ಟು ಎಂಬ ಎಲ್ಲ ಅಂಕಿ, ಅಂಶಗಳು ಜುಲೈ 8ರಂದು ನಡೆಯುವ ಬಜೆಟ್‌ ಅಧಿವೇಶನದಲ್ಲಿ ಬಹಿರಂಗವಾಗುತ್ತದೆ. ಅಲ್ಲಿಯವರೆಗೆ ಜನರು ತಾಳ್ಮೆಯಿಂದ ಇರಬೇಕು.

ಉಚಿತ ಯೋಜನೆಗಳು, ವಿದ್ಯುತ್‌ ದರ ಹೆಚ್ಚಳ ತರವಲ್ಲಅನಿರುದ್ಧ ಜತಕರ

ಈ ಯೋಜನೆಗಳ ಹಿಂದೆ ಒಳ್ಳೆಯ ಉದ್ದೇಶವಿರಬಹುದು. ಮೂಲ ಸೌಕರ್ಯಗಳು ಎಲ್ಲ ನಾಗರಿಕರಿಗೂ ಅತ್ಯವಶ್ಯಕ. ಆದರೆ, ಈ ರೀತಿಯ ಸೌಕರ್ಯಗಳನ್ನು ಯಾವುದೇ ಪಕ್ಷ ಅಥವಾ ಸರ್ಕಾರಗಳು ಜನರಿಗೆ ಉಚಿತವಾಗಿ ನೀಡಬಾರದು. ಹೀಗೆ ಉಚಿತವಾಗಿ ಸಿಗುವ ಯಾವುದರ ಬೆಲೆಯೂ ನಮಗೆ ತಿಳಿಯುವುದಿಲ್ಲ. ಇಂತಹ ಉಚಿತ ಯೋಜನೆಗಳಿಂದ ನಮ್ಮ ಮುಂದಿನ ಪೀಳಿಗೆಗಳು ಸೋಮಾರಿತನಕ್ಕೆ ಬೀಳುತ್ತವೆ. ಸರ್ಕಾರಗಳಿಗೆ ಜನರ ಬಗ್ಗೆ ಕಾಳಜಿ ಇದ್ದರೆ, ನಮ್ಮ ಅರ್ಥ ವ್ಯವಸ್ಥೆ ಈ ರೀತಿಯ ಯೋಜನೆಗಳ ಜಾರಿಗೆ ಅನುವು ಮಾಡಿಕೊಡುತ್ತೆ ಎನ್ನುವುದಾದರೆ, ಕನಿಷ್ಠ ದರಗಳಲ್ಲಿ ಮೂಲಸೌಕರ್ಯಗಳನ್ನು ನೀಡಲಿ. ಅದನ್ನು ಬಿಟ್ಟು ಉಚಿತ ಯೋಜನೆಗಳನ್ನು ಜಾರಿ ಮಾಡುವುದು ಸರಿಯಲ್ಲ. ಇವತ್ತು ಒಂದು ಸೌಕರ್ಯ ಉಚಿತವಾಗಿ ಸಿಕ್ಕರೆ ಅದನ್ನು ಅನುಭವಿಸಿದ ನಾವು ನಾಳೆ ಮತ್ತೊಂದು ಸೇವೆಯನ್ನು ಉಚಿತವಾಗಿಯೇ ನಿರೀಕ್ಷೆ ಮಾಡುತ್ತೇವೆ. ಒಂದು ರೂಪಾಯಿ ಶುಲ್ಕ ವಿಧಿಸಿದರೂ ಪರವಾಗಿಲ್ಲ. ಆದರೆ, ಉಚಿತ ಯೋಜನೆ ಎಂಬುದು ಸೂಕ್ತವಲ್ಲ.

200 ಯುನಿಟ್‌ಗಳ ವರೆಗೆ ವಿದ್ಯುತ್‌ ಉಚಿತ ಎಂದು ಘೋಷಿಸಿದ್ದಾರೆ. ಒಂದು ವೇಳೆ ಸರ್ಕಾರ ಉಚಿತ ಸೌಕರ್ಯಗಳನ್ನು ಕೊಡಲೇಬೇಕು ಎಂದುಕೊಂಡರೆ, ಬಳಕೆದಾರ ಬಡವನಿರಲಿ ಅಥವಾ ಶ್ರೀಮಂತನೇ ಆಗಿರಲಿ ಎಲ್ಲರಿಗೂ 200 ಯುನಿಟ್‌ಗಳ ವರೆಗೆ ವಿದ್ಯುತ್‌ ಉಚಿತವಾಗಿಯೇ ನೀಡಬೇಕು. 200 ಯುನಿಟ್‌ಗಿಂತ ಹೆಚ್ಚಿಗೆ ವಿದ್ಯುತ್‌ ಬಳಸಿದರೆ ಹೆಚ್ಚುವರಿಯಾಗಿ ಬಳಕೆಯಾಗಿರುವ ವಿದ್ಯುತ್‌ಗೆ ಶುಲ್ಕ ಕೇಳಬೇಕೇ ಹೊರತು 200 ಯುನಿಟ್‌ ಮೀರಿದರೆ ಎಲ್ಲ ಮೊತ್ತವನ್ನು ಪಾವತಿಸಬೇಕು ಎನ್ನುವುದು ಸರಿಯಲ್ಲ. 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಪ್ರತಿ ಯುನಿಟ್‌ ಮೇಲೆ 70 ಪೈಸೆ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಇದು ಅನ್ಯಾಯ ಅಲ್ಲವೇ? 200 ಯುನಿಟ್‌ಗಿಂತ ಹೆಚ್ಚಿಗೆ ವಿದ್ಯುತ್‌ ಬಳಸುವ ನನ್ನ ಕುಟುಂಬಕ್ಕೆ ವಿದ್ಯುತ್‌ ಶುಲ್ಕ ಹೆಚ್ಚಳ ಮಾಡಿರುವುದು ಹೊರೆಯಾಗುವುದಿಲ್ಲವೇ? ಸರ್ಕಾರ ಎಲ್ಲರಿಗೂ 200 ಯುನಿಟ್‌ಗಳ ವರೆಗೆ ವಿದ್ಯುತ್‌ ಅನ್ನು ಉಚಿತವಾಗಿ ನೀಡಬೇಕು. ನಿಗದಿತ 200 ಯುನಿಟ್‌ ಮೀರಿ ಯಾರಾದರೂ ಹೆಚ್ಚುವರಿಯಾಗಿ ವಿದ್ಯುತ್‌ ಬಳಸಿದರೆ, ಆ ಹೆಚ್ಚುವರಿ ಬಳಕೆಯ ಶುಲ್ಕವನ್ನು ಮಾತ್ರ ಪಡೆಯಬೇಕು. ಅದು ಕೂಡ ಹಿಂದಿನ ದರದಲ್ಲಿ. ಹೆಚ್ಚು ವಿದ್ಯುತ್‌ ಬಳಸುತ್ತೇವೆ ಎಂದ ಮಾತ್ರಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವುದು ತರವಲ್ಲ.

ಗ್ಯಾರಂಟಿ ಯೋಜನೆಗಳು ಅನಿವಾರ್ಯತೆ ಇರುವವರಿಗೆ ತಲುಪಬೇಕು ನಟ – ವಸಿಷ್ಠ ಸಿಂಹ

ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಒಲವು ಮತ್ತು ಭರವಸೆ ಎರಡೂ ಇದೆ. ಐದು ಗ್ಯಾರಂಟಿ ಯೋಜನೆಗಳು ಜನರ ಅವಶ್ಯಕತೆಗಳಿಗೆ ನೆರವಾಗುತ್ತವೆ. ಈ ಯೋಜನೆಗಳು ಆದಷ್ಟು ಬೇಗ ಕಾರ್ಯರೂಪಕ್ಕೆ ಬರಬೇಕು. ಆಗ ತಮ್ಮ ದೈನಂದಿನ ಬದುಕಿನಲ್ಲಿ ಸುಧಾರಣೆಯಾಗುತ್ತದೆ ಎಂದು ಮತ ಹಾಕಿದ್ದವರ ಆಶಯ ಗೆಲ್ಲುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಅನಿವಾರ್ಯತೆ ಇರುವ ವ್ಯಕ್ತಿಗಳಿಗೆ ಈ ಯೋಜನೆಗಳು ತಲುಪಬೇಕು. ಮಹಿಳೆಯರನ್ನು ಪ್ರಮುಖವಾಗಿ ಪರಿಗಣಿಸಿ, ಅವರ ಅನಿವಾರ್ಯತೆಗಳನ್ನು ಅರಿತು, ನಂತರ ವಿಶ್ವಾಸ ಗೆದ್ದು ಅವರಿಗಾಗಿ ಯೋಜನೆಗಳನ್ನು ಜಾರಿ ಮಾಡುತ್ತಿರುವುದು ವಿನೂತನ ಪ್ರಯತ್ನ. ಈ ಯೋಜನೆಗಳು ಎಷ್ಟರ ಮಟ್ಟಿಗೆ ಸದ್ಬಳಕೆಯಾಗುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲೇ ತಿಳಿಯಲು ಸಾಧ್ಯ.

ಉಚಿತ ಅಕ್ಕಿ ಕೊಟ್ಟರೆ ಬಡವ ಸೋಮಾರಿ ಆಗಲ್ಲ – ಧನಂಜಯ

ಧನಂಜಯ

ನಾನು ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹೇಳುವುದಾದರೆ, ಕಡಿಮೆ ಆದಾಯದಲ್ಲಿ ಬದುಕುತ್ತಿರುವವರ ಹಸಿವು ನೀಗಿಸೋಕೆ ಸರ್ಕಾರ ಅಕ್ಕಿ ಕೊಟ್ಟರೆ ನನಗದು ತಪ್ಪು ಎನ್ನಿಸಲ್ಲ. 10 ಕೆ.ಜಿ ಅಕ್ಕಿ ಕೊಡುವುದರಿಂದ ಜನ ಸೋಮಾರಿಗಳಾಗುತ್ತಾರೆ ಅನ್ನೋದು ತಪ್ಪು. ಉಚಿತವಾಗಿ ಬಡವನ ಕೈಸೇರುವ ಅಕ್ಕಿ ಹಸಿವನ್ನು ನೀಗಿಸುತ್ತೆ. ಅದರ ಹೊರತಾಗಿ ಮನುಷ್ಯ ಬೇರೆ ಅಗತ್ಯಗಳಿಗಾಗಿಯೂ ದುಡಿಯುತ್ತಾನಲ್ಲವೇ? ಅದು ಹೇಗೆ ಸೋಮಾರಿ ಆಗುತ್ತಾನೆ ಎನ್ನುತ್ತೀರಿ? ಆ ವಾದವೇ ತಪ್ಪು. ಇಲ್ಲದೆ ಇರೋರಿಗೆ ಸಹಾಯ ಮಾಡುವುದರಲ್ಲಿ ನನಗೆ ಯಾವುದೇ ತಪ್ಪು ಕಾಣಲ್ಲ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರೋಗ್ಯದಲ್ಲಿ ದಿಢೀರ್ ಏರುಪೇರು: ಬಿಗ್‌ಬಿ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲು

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಆರೋಗ್ಯದಲ್ಲಿ ದಿಢೀರ್ ಆಗಿ...

ಅಶ್ಲೀಲ ವಿಡಿಯೋ ಪ್ರಸಾರ : 18 ಒಟಿಟಿ, 19 ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಕೇಂದ್ರ

ಹಲವು ಎಚ್ಚರಿಕೆಗಳ ನಡುವೆಯೂ ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ 18 ಒಟಿಟಿ...

ತುಮಕೂರು | ತುಕಾಲಿ ಸಂತೋಷ್‌ ಕಾರು ಅಪಘಾತ; ಆಟೋ ಚಾಲಕ ಸಾವು

ಬಿಗ್‌ಬಾಸ್‌ ಸೀಸನ್ 10ರ ಸ್ಪರ್ಧಿ, ಹಾಸ್ಯ ನಟ ತುಕಾಲಿ ಸಂತೋಷ್ ಅವರ...

ದೇಶ ವಿಭಜಿಸಲು, ಸೌಹಾರ್ದತೆ ಕದಡಲು ಸಿಎಎ ಜಾರಿ: ನಟ ಕಮಲ್ ಹಾಸನ್

ಸಾರ್ವತ್ರಿಕ ಚುನಾವಣೆಗೆ ಮುನ್ನ ಜನರನ್ನು ವಿಭಜಿಸಲು ಮತ್ತು ಸಾಮರಸ್ಯವನ್ನು ನಾಶಮಾಡಲು ಕೇಂದ್ರ...