ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಇದೀಗ ನಾಪತ್ತೆಯಾಗಿರುವ 17 ಮಂದಿಯ DNA ಹೊಂದಾಣಿಕೆ ಪ್ರಕ್ರಿಯೆ ಆರಂಭಿಸಿದೆ.
ಎಸ್ಐಟಿ ತಂಡವು ಈ 17 ಮಂದಿಯ ಕುಟುಂಬಗಳ ಮಾಹಿತಿ ಸಂಗ್ರಹಿಸಿದೆ. ಬಂಗ್ಲೆಗುಡ್ಡೆ ಮೀಸಲು ಅರಣ್ಯದಲ್ಲಿ ಪತ್ತೆಯಾದ ಮಾನವ ಅವಶೇಷಗಳೊಂದಿಗೆ ಡಿಎನ್ಎ ಹೊಂದಾಣಿಕೆ ನಡೆಯಲಿದೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | SIT ಕೈಗೆ FSL ವರದಿ? ಹೊರಬಂದ ಮಾಹಿತಿಗಳೇನು?
ದೂರುದಾರ ಮಾಜಿ ಪೌರಕಾರ್ಮಿಕನು, ಅತ್ಯಾಚಾರ ಮತ್ತು ಕೊಲೆಗೀಡಾದ ಹಲವರ ಮೃತದೇಹಗಳನ್ನು ತಾನು ಸಮಾಧಿ ಮಾಡಿದ್ದಾಗಿ ಹೇಳಿಕೆ ನೀಡಿದ್ದನು. ಈ ದೂರಿನ ತನಿಖೆಗಾಗಿ ರಚನೆಯಾದ ಎಸ್ಐಟಿ ತಂಡವು 2025ರಲ್ಲಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಶೋಧ ನಡೆಸಿದಾಗ ಒಟ್ಟು ಏಳು ಮಾನವ ತಲೆಬುರುಡೆಗಳು ಹಾಗೂ ಇತರೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿತ್ತು. ಈ ಅವಶೇಷಗಳನ್ನು ವಶಕ್ಕೆ ಪಡೆದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿತ್ತು.
ಅದಾದ ಬಳಿಕ ಅವಶೇಷಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿತ್ತು. ಈ ಎಲ್ಲ ಅವಶೇಷಗಳು ಪುರುಷರದ್ದು ಎಂದು ತಿಳಿದುಬಂದಿತ್ತು. ಇದೀಗ ಈ ಮಾನವ ಅವಶೇಷಗಳೊಂದಿಗೆ ಧರ್ಮಸ್ಥಳದಲ್ಲಿ ನಾಪತ್ತೆಯಾದ 17 ಮಂದಿಯ ಕುಟುಂಬಸ್ಥರೊಂದಿಗೆ ಡಿಎನ್ಎ ಹೊಂದಾಣಿಕೆ ಪ್ರಕ್ರಿಯೆ ಆರಂಭಿಸಲಾಗಿದೆ.




