ರಾಜ್ಯದಾದ್ಯಂತ 5 ಮಾರ್ಗಗಳಲ್ಲಿ ಜಾಥಾಗಳನ್ನು ಮುಗಿಸಿ ನಾವು ಈ ಸಮಾವೇಶದಲ್ಲಿ ಸೇರಿದ್ದೇವೆ. ಈ ತಿಂಗಳ 30 ರಂದೇ ಚುನಾವಣಾ ಆಯೋಗ ಎಸ್ಐಆರ್ (SIR) ಪ್ರಾರಂಭಿಸಲಿದ್ದು, ಬಿಎಲ್ಒಗಳು ಮನೆಮನೆಗೆ ಬರಲಿದ್ದಾರೆ. ಎಸ್ಐಆರ್ ವಿರೋಧಿಸಿ ನಾವೆಲ್ಲರೂ ಬಿಡಿಬಿಡಿಯಾಗಿ ಹೋರಾಟ ಮಾಡುತ್ತಿದ್ದೇವೆ, ಆದರೆ ಚುನಾವಣಾ ಆಯೋಗ ನಮ್ಮ ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡದೆ ತನ್ನ ಕುತಂತ್ರದ ಕೆಲಸ ಮುಂದುವರೆಸಿದೆ. ಈಗ ಕರ್ನಾಟಕ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಡದಿದ್ದರೆ, ದೊಡ್ಡ ಅಪಾಯ ಕಾದಿದೆ ಎಂದು ಎದ್ದೇಳು ಕರ್ನಾಟಕ ತಂಡದ ನೂರ್ ಶ್ರೀಧರ್ ಎಚ್ಚರಿಸಿದರು.
ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ಮಾತನಾಡಿದ ಅವರು, “ಕರ್ನಾಟಕ ಇದನ್ನೆಲ್ಲಾ ಸಹಿಸುವುದಿಲ್ಲ ಎಂಬ ಸಂದೇಶ ಕೊಡುವುದಕ್ಕಾಗಿ ಈ ಸಮಾವೇಶ ಮಾಡಲಾಗುತ್ತಿದೆ. SIR ಷಡ್ಯಂತ್ರವನ್ನು ವಿಫಲಗೊಳಿಸುವುದಕ್ಕಾಗಿ ಕರ್ನಾಟಕ ಸರ್ಕಾರ ದಿಟ್ಟವಾಗಿ ದೊಡ್ಡ ಹೆಜ್ಜೆ ಇಡಲು ಮುಂದಾಗಬೇಕು. ರಾಜ್ಯ ಸರ್ಕಾರ ಹಾಗೆ ಮಾಡದೇ ಇದ್ದರೆ, ಸಂವಿಧಾನ ವಿರೋಧಿ ಶಕ್ತಿಗಳಿಗೆ ಸವಾಲಾಗಿ ನಿಂತಿರುವ ಕರ್ನಾಟಕ ದೊಡ್ಡ ಅಪಾಯಕ್ಕೆ ಸಿಲುಕಲಿದೆ. ಬಿಹಾರ ಮತ್ತು ಬಂಗಾಳದಲ್ಲಿ ಏನಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಕರ್ನಾಟಕವನ್ನು ಕಳೆದುಕೊಳ್ಳಬಾರದೆಂದರೆ ಸರ್ಕಾರ ದಿಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.
“ನಮ್ಮ ಯಾವ ಪ್ರಶ್ನೆಗೂ ಉತ್ತರ ಕೊಡದೆ SIR ಮಾಡುವುದನ್ನು ನೋಡಿಕೊಂಡು ನಾವು ಸುಮ್ಮನೆ ಕೂರಬೇಕಾ? ನಮ್ಮ ಯಾವ ಪ್ರಶ್ನೆಗೂ ಆಯೋಗ ಉತ್ತರ ಕೊಡುತ್ತಿಲ್ಲ ಎಂದರೆ ಅವರದ್ದು ಎಂತಹ ದುರಹಂಕಾರ? ಕಾನೂನು ಮೀರಿ ನಾವು ಯಾವುದೇ ಪ್ರಶ್ನೆಯನ್ನು ಕೇಳುತ್ತಿಲ್ಲ” ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Breaking News | ಪ್ರಧಾನ್ ರಾಜೀನಾಮೆ ನೀಡುವವರೆಗೂ ಅಹೋರಾತ್ರಿ ಧರಣಿ: ಕಾಕ್ರೋಚ್ ಪಾರ್ಟಿ ಘೋಷಣೆ
“ಪಶ್ಚಿಮ ಬಂಗಾಳದಲ್ಲಿ ಬಳಸಿದ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಸಾಫ್ಟ್ವೇರ್ ಅನ್ನು ಕರ್ನಾಟಕದಲ್ಲಿ ಬಳಸಬಾರದು. ಇದು ಚುನಾವಣಾ ಆಯೋಗದ ಮ್ಯಾನುವಲ್ನಲ್ಲೇ ಇಲ್ಲ. ಅಲ್ಲಿ 27 ಲಕ್ಷ ಜನರ ಹೆಸರನ್ನು ಈ ಸಾಫ್ಟ್ವೇರ್ ಮೂಲಕ ಡಿಲೀಟ್ ಮಾಡಲಾಯಿತು. ದಾಖಲಾತಿ ಹಿಡಿದು ಹೋದವರನ್ನು ಕೇಳುವವರು ಇರಲಿಲ್ಲ. ಆರು ತಂಡಗಳ ನ್ಯಾಯಾಧೀಕರಣವೂ ಕೇವಲ 1543 ಅರ್ಜಿಗಳನ್ನು ಮಾತ್ರ ಪರಿಶೀಲಿಸಲು ಸಾಧ್ಯವಾಯಿತು. ಅಷ್ಟೂ ಜನರನ್ನು ಹೊರಗಿಟ್ಟು ಚುನಾವಣೆ ನಡೆಸಲಾಯಿತು. ಆ ಅಕ್ರಮ ಸಾಫ್ಟ್ವೇರ್ ಅನ್ನು ಕರ್ನಾಟಕದಲ್ಲಿ ಬಳಸಬಾರದು, ಒಂದು ವೇಳೆ ಬಳಸುವುದಾದರೆ ಆ ಸಾಫ್ಟ್ವೇರ್ ಸರಿ ಇದೆ ಎಂಬುದನ್ನು ಆಯೋಗ ಸಾಬೀತುಪಡಿಸಲಿ” ಎಂದು ನೂರ್ ಶ್ರೀಧರ್ ಸವಾಲು ಹಾಕಿದರು.
“ಈ ಹೋರಾಟವನ್ನು ನಾವು ಇಲ್ಲಿಗೆ ಮುಗಿಸುವುದಿಲ್ಲ. 30ನೇ ತಾರೀಕಿನಂದು ಮನೆಮನೆಗೆ ಬರುವ ಮೊದಲು ಪ್ರತಿ ಪಂಚಾಯಿತಿ ಮತ್ತು ವಾರ್ಡ್ಗಳಲ್ಲಿ ಎಲ್ಲ ನಾಗರೀಕರು ಸೇರಿ ‘ಮತ ಕಾವಲು ಸಮಿತಿ’ಗಳನ್ನು ನೇಮಿಸಬೇಕು. ಮುಂದಿನ ತಿಂಗಳ 15ರ ಒಳಗೆ ಎಲ್ಲ ಗ್ರಾಮ ಪಂಚಾಯಿತಿಗಳನ್ನು ತಲುಪಿ ಇಂತಹ ಸಮಿತಿಗಳನ್ನು ರಚಿಸಬೇಕು” ಎಂದು ಅವರು ಕರೆ ನೀಡಿದರು.




