ವಿಧವೆ ಮೇಲಿನ ವ್ಯಾಮೋಹಕ್ಕೆ ಇಲಿ ಪಾಷಾಣ ಕುಡಿಸಿ ಪತ್ನಿಗೆ ಚಟ್ಟಕಟ್ಟಿ ಅಪಘಾತದ ನಾಟಕವಾಡಿದ ಪತಿ ಜೈಲು ಸೇರಿದ್ದಾನೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದಲ್ಲಿ ಹೃದಯವಿದ್ರಾವಕಫ ಕೃತ್ಯ ನಡೆದಿದೆ. ಶಿಂದಿಕುರಬೇಟ ಗ್ರಾಮದ ಸಕ್ಕುಬಾಯಿ ಪಟಾಯತ್ ಕೊಲೆಯಾದ ಮಹಿಳೆ. ಸಂತೋಷ ಪಟಾಯತ್ ಎಂಬಾತನೇ ಕೊಲೆ ಆರೋಪಿ.
ಅಧಿಕ ಮಾಸವಿದೆ ಎಂದು ಪತ್ನಿ ಜೊತೆಗೆ ಬೈಲಹೊಂಗಲ ತಾಲೂಕಿನ ಮರುಕುಂಬಿ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇಗುಲಕ್ಕೆ ಹೋಗಿದ್ದರು. ಮರಳಿ ಬರುವಾಗ ತಂಪುಪಾನೀಯದಲ್ಲಿ ಇಲಿ ಪಾಷಾಣ, ಬಳೆ ಚೂರು ಬೆರೆಸಿದ್ದ ಆಸಾಮಿ, ಇದು ದೇವಿ ಪ್ರಸಾದ ಇದೆ ಎಂದು ವಿಷವಿದ್ದ ತಂಪುಪಾನೀಯ ಪತ್ನಿಗೆ ಕುಡಿಸಿದ್ದಾನೆ. ಸಕ್ಕುಬಾಯಿ ಪ್ರಜ್ಞೆ ತಪ್ಪುತ್ತಿದ್ದಂತೆ ನಡುರಸ್ತೆ ಮೇಲೆ ಕತ್ತುಹಿಸುಕಿ ಕಿರಾತಕ ಗಂಡ ಕೊಲೆಗೈದಿದ್ದಾನೆ.
ಕೊಲೆಯನ್ನೇ ಅಪಘಾತ ಎಂದು ಬಿಂಬಿಸಲು ಬೈಕನ್ನೇ ಪತ್ನಿ ಮೇಲೆ ಎತ್ತಿಹಾಕಿ ಎರಡೂರು ಗಂಟೆಗಳ ಕಾಲ ರಸ್ತೆ ಪಕ್ಕವೇ ಬಿದ್ದು ಹೈಡ್ರಾಮಾ ಮಾಡಿದ್ದ. ಬಳಿಕ ಯಾರೂ ಗಮನಿಸದೇ ಇದ್ದಾಗ ತಾನೇ ಪೊಲೀಸ್ ಕಂಟ್ರೊಲ್ ರೂಂಗೆ ಕರೆ ಸಂತೋಷ ಮಾಡಿದ್ದ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆ್ಯಂಬುಲೆನ್ಸ್ ರವಾನಿಸಿದ್ದಾರೆ. ಸಕ್ಕುಬಾಯಿ ಮೃತದೇಹ ಕಂಡು ಅನುಮಾನಗೊಂಡ ಪೊಲೀಸರು ಮರಣೋತ್ತರ ಪರೀಕ್ಷೆಗೆಂದು ಬೆಳಗಾವಿ ಬಿಮ್ಸ್ಗೆ ಸಕ್ಕುಬಾಯಿ ಮೃತದೇಹ ರವಾನಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಇದು ಕೊಲೆ ಎಂದು ಸಾಬೀತಾಗಿದ್ದು, ಸಂತೋಷನನ್ನು ವಶಕ್ಕೆ ಪಡೆದು ಗೋಕಾಕ ಗ್ರಾಮೀಣ ಪೊಲೀಸರು ವಿಚಾರಣೆ ನಡೆಸಿದ್ದಾರೆ.
9 ವರ್ಷಗಳ ಹಿಂದೆ ಧಾರವಾಡ ತಾಲೂಕಿನ ಕಲ್ಲೂರ ಗ್ರಾಮದ ಸಕ್ಕುಬಾಯಿ ಜೊತೆಗೆ ವಿವಾಹವಾಗಿದ್ದ ಸಂತೋಷ. ಕಳೆದ ನಾಲ್ಕು ವರ್ಷಗಳಿಂದ ತನ್ನದೇ ಗ್ರಾಮದ ವಿಧವೆ ಜೊತೆಗೆ ಲಡವಿ ಆಡುತ್ತಿದ್ದ. ಪ್ರೇಯಸಿ ಜೊತೆಗೆ ಉಳಿದ ದಿನಗಳನ್ನು ಕಳೆಯಲು ಪತ್ನಿ ಕೊಂದಿರುವುದಾಗಿ ಸಂತೋಷ ತಪ್ರೊಪ್ಪಿಕೊಂಡಿದ್ದಾನೆ.
ಪ್ರೇಯಸಿ ಜೊತೆಗೆ ಕಾಲ ಕಳೆಯಲು ಪತ್ನಿ ಕೊಂದ ಆಸಾಮಿ ಈಗ ಹಿಂಡಲಗಾ ಜೈಲು ಸೇರಿದ್ದಾನೆ. ಕೊಲೆ ಕೃತ್ಯದಲ್ಲಿ ವಿಧವೆ ಪಾತ್ರ ಇದೆಯೋ ಎಂಬ ಬಗ್ಗೆಯೂ ತನಿಖೆ ಮುಂದುವರೆದಿದೆ.
ಅಪಘಾತ ಎಂದು ಬಿಂಬಿಸಲು ವಿಫಲ ಯತ್ನ
ಪತ್ನಿಯ ಕೊಲೆಯನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಆರೋಪಿ ಸಂತೋಷ ಹಲವು ಗಂಟೆಗಳ ಕಾಲ ರಸ್ತೆ ಪಕ್ಕದಲ್ಲೇ ಬಿದ್ದು ನಾಟಕವಾಡಿದ್ದ. ಆದರೆ ಮರಣೋತ್ತರ ಪರೀಕ್ಷೆಯ ವರದಿ ಕೊಲೆ ಎಂಬುದನ್ನು ಬಹಿರಂಗಪಡಿಸಿದ್ದರಿಂದ ಆರೋಪಿಯ ಸಂಚು ಬಯಲಾಗಿದೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ



