ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ನೀಡಿರುವ ಹಿನ್ನೆಲೆಯಲ್ಲಿ ಸಕಲ ಮರಾಠಾ ಸಮಾಜದ ವತಿಯಿಂದ ಬುಧವಾರ ವಿಜಯೋತ್ಸವ ಆಚರಿಸಲಾಯಿತು.
ಬೀದರ್ ನಗರದ ಶಿವಾಜಿ ಚೌಕ್ನಲ್ಲಿ ಸಮಾಜದ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.
ಸಮಾಜದ ಪೂಜ್ಯ ದಾದಾ ಮಹಾರಾಜ ನಗರಕರ್ ಮಾತನಾಡಿ, “ಅಧಿಕಾರವು ಜನಸೇವೆಗೆ ದೊರೆತ ಅವಕಾಶ ಎಂಬ ಮನೋಭಾವದೊಂದಿಗೆ ತಳಮಟ್ಟದ ಸ್ಥಳೀಯ ಸಂಸ್ಥೆಯಿಂದ ರಾಜಕೀಯ ಜೀವನ ಆರಂಭಿಸಿ ರಾಜ್ಯ ಸಚಿವ ಸ್ಥಾನದವರೆಗೆ ಬೆಳೆದಿರುವ ಸಂತೋಷ್ ಲಾಡ್ ಅವರ ರಾಜಕೀಯ ಪಯಣ ಗಮನಾರ್ಹವಾಗಿದೆ. ಜನಸೇವೆಯಲ್ಲಿ ಅವರು ಇನ್ನಷ್ಟು ಯಶಸ್ಸು ಸಾಧಿಸುವಂತಾಗಲಿ” ಎಂದು ಹಾರೈಸಿದರು.
ಪತ್ರಕರ್ತ ಪ್ರದೀಪ ಬಿರಾದಾರ ಮಾತನಾಡಿ, “2004ರಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಸಂತೋಷ್ ಲಾಡ್, ಬಳಿಕ ಕಲಘಟಗಿ ಕ್ಷೇತ್ರ ರಾಜಕೀಯ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಕಾಂಗ್ರೆಸ್ ಪಕ್ಷದಿಂದ 2008, 2013 ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಹಾಗೂ ವಿವಿಧ ಅವಧಿಗಳಲ್ಲಿ ಸಚಿವರಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆ ಸೇರಿದಂತೆ ಕಾರ್ಮಿಕ ಇಲಾಖೆಯ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ” ಎಂದು ತಿಳಿಸಿದರು.
ಸಮಾಜದ ಮುಖಂಡ ಸತೀಶ ಮುಳೆ ಮಾತನಾಡಿ, “1975ರಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಜನಿಸಿದ ಸಂತೋಷ್ ಲಾಡ್ ಅವರು ಬಿ.ಕಾಂ ಪದವೀಧರರಾಗಿದ್ದು, ಉದ್ಯಮಿಯಾಗಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು. 2002ರಲ್ಲಿ ಸಂಡೂರು ಪಟ್ಟಣ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ ಅವರು, ಹಂತಹಂತವಾಗಿ ರಾಜ್ಯ ರಾಜಕೀಯದಲ್ಲಿ ಪ್ರಮುಖ ನಾಯಕರಾಗಿ ಬೆಳೆದಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ಬೀದರ್ | ಆ.10ರವರೆಗೆ ಬೆಳೆ ವಿಮೆ ನೋಂದಾಯಿಸಲು ಅವಧಿ ವಿಸ್ತರಣೆ
ಎಪಿಎಂಸಿ ಮಾಜಿ ಅಧ್ಯಕ್ಷ ಕಿಶನರಾವ್ ಪಾಟೀಲ ಇಂಚೂರಕರ್, ಅಮರ ಜಾಧವ, ಸುರೇಶ್ ಟಾಕಳೆ, ವಿದ್ಯಾವಾನ್ ಪಾಟೀಲ, ಸಂದೀಪ್ ಪಾಟೀಲ, ಡಿಸೋಜಾ, ಸತ್ಯದೀಪ್ ಬಿರಾದಾರ, ಮೀನಾಕ್ಷಿ ಕಾಳೆ ಪಾಟೀಲ, ಅನಿತಾ ಭೋಸ್ಲೆ, ಮೀರಾತಾಯಿ ಮುಳೆ, ಉಷಾ ಸೂರ್ಯವಂಶಿ, ಸುರೇಶ್ ಹಲವಾಯಿ, ಅಶೋಕ್ ಪಾಟೀಲ, ಶಿವಾಜಿ ಪಾಟೀಲ, ರಾಜೇಶ್ವರಿ ಸೇರಿದಂತೆ ಸಮಾಜದ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.




