ಬೀದರ ನಗರದ ಕುಂಬಾರವಾಡದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ರಮಾತಾಯಿ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.
ಭಾಲ್ಕಿಯಲ್ಲಿ ಸಚಿವ ನಿವಾಸದಲ್ಲಿ ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ಕುಂಬಾರವಾಡದ ಸರ್ವೇ ನಂ. 51/1ರ 25 ಎಕರೆ ಸರ್ಕಾರಿ ಜಮೀನಿನಲ್ಲಿ 75 & 80 ಅಳತೆಯ ಖಾಲಿ ಜಾಗವಿದ್ದು, ಕಳೆದ 25 ವರ್ಷಗಳಿಂದ ಇದೇ ಸ್ಥಳದಲ್ಲಿ ಅಂಬೇಡ್ಕರ್ ಜಯಂತಿ, ಅಶೋಕ ದಶಮಿ, ಬುದ್ಧ ಪೂರ್ಣಿಮೆ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ” ಎಂದು ತಿಳಿಸಿದರು.
“ಕುಂಬಾರವಾಡದಲ್ಲಿ ವಿವಿಧ ಜಾತಿ ಮತ್ತು ಧರ್ಮದ ಸಮುದಾಯಗಳಿಗೆ ದೇವಸ್ಥಾನ, ಮಸೀದಿ ಹಾಗೂ ಚರ್ಚ್ಗಳಂತಹ ಕಟ್ಟಡಗಳಿದ್ದರೂ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಸಭೆ, ಸಮಾರಂಭಗಳು ನಡೆಸಲು ಸಮುದಾಯ ಭವನವಿಲ್ಲ. ಸದರಿ ಜಾಗವನ್ನು ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರು ಮಾಡಿ, ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ ಒಂದು ಕೋಟಿ ಅನುದಾನ ನೀಡಬೇಕು. ಜಾಗ ಮಂಜೂರಾತಿಗಾಗಿ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ತಹಸೀಲ್ದಾರ್ ಅವರಿಗೆ ಈಗಾಗಲೇ ಮೂರು ಬಾರಿ ಮನವಿ ಸಲ್ಲಿಸಿದ್ದು, ಸ್ಥಳದಲ್ಲಿಯೇ ಧರಣಿ ಸತ್ಯಾಗ್ರಹ ಸಹ ನಡೆಸಲಾಗಿದೆ” ಎಂದು ತಿಳಿಸಿದರು.
ಬೇಡಿಕೆಗೆ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿ, “ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡುತ್ತಿರುವ ತಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ಸ್ಥಳ ಮಂಜೂರು ಮಾಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವೆ” ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಭಾಲ್ಕಿ | ಭೀಮರಾಜ್ ಸೇನಾ ಸಂಘಟನೆಯಿಂದ ವೃದ್ಧರಿಗೆ ಮಾಸಿಕ ಪಿಂಚಣಿ
ರಮಾತಾಯಿ ಮಹಿಳಾ ಸಂಘದ ಪದಾಧಿಕಾರಿಗಳಾದ ಲಕ್ಷ್ಮೀ, ರಮಾಬಾಯಿ, ಸುಲೋಚನಾ, ಗಂಗಮ್ಮ, ಜ್ಯೋತಿ, ಲಕ್ಷ್ಮೀ ಕಾಳೆಕಾರ, ಶೋಭಾ, ಕಾಶಿಬಾಯಿ ಕಾಂಬ್ಳೆ, ಅಂಬವ್ವ, ಸುಮಿತ್ರಾ, ಅಂಬಿಕಾ, ನಾಗಮ್ಮ, ಶಕುಂತಲಾ, ರುಕ್ಮಿಣಿ, ಸರಸ್ವತಿ, ಪಂಚಶೀಲ, ಪ್ರಭಾವತಿ, ಸುಭಾಷ್ ವರ್ಮಾ, ಮಲ್ಲಿಕಾರ್ಜುನ ಮೊಳಕೆರೆ, ಗೌತಮ ಭೋಸ್ಲೆ, ತುಕಾರಾಮ ಕಡೆಮನಿ, ಶಿವಲಿಂಗಪ್ಪ ಕಡೆಮನಿ, ಸಿದ್ದಪ್ಪ ಕಾಂಬ್ಳೆ, ಸಾಯಿನಾಥ ಕಳೆಕಾರ, ಸದಾನಂದ ಕಳೆಕಾರ, ಸಿದ್ದಾರ್ಥ ಕಾಂಬ್ಳೆ, ಆನಂದ ಕಡೆಮನಿ, ನರಸಿಂಗ್ ನಾಗೂರೆ, ಭರತ್ ಕಾಂಬ್ಳೆ, ದಿಗಂಬರ ಹಾಗೂ ಸಂತೋಷ್ ಬೆನ್ನಕನಳ್ಳಿಕರ್ ಮತ್ತಿತರರು ಉಪಸ್ಥಿತರಿದ್ದರು.




