- ಮೀನುಗಾರ ಸಮುದಾಯ 70 ಲಕ್ಷ ಮಂದಿ ಜನಸಂಖ್ಯೆ ಹೊಂದಿದೆ
- ಹಿಂದುತ್ವದ ಆಧಾರದ ಮೇಲೆ ಬಿಜೆಪಿಗೆ ಮತ ಹಾಕಲಾಗುತ್ತಿತ್ತು
ಕಳೆದ 70 ವರ್ಷಗಳಿಂದ ಕರಾವಳಿ ಜಿಲ್ಲೆಗಳಲ್ಲಿ ವಾಸಿಸುವ ಮೀನುಗಾರ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ಈ ಬಾರಿಯೂ ಸಮುದಾಯಕ್ಕೆ ಟಿಕೆಟ್ ನಿರಾಕರಿಸಿದರೆ ನಾವು ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ರಾಮಚಂದ್ರ ಬೈಕಂಪಾಡಿ ಹೇಳಿದರು.
ಬಿಜೆಪಿ ವಿಶೇಷ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮೀನುಗಾರ ಸಮುದಾಯದ ಮುಖಂಡ ರಾಮಚಂದ್ರ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, “ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೊಗವೀರ ಸಮುದಾಯದ ಒಬ್ಬನೇ ಬಿಜೆಪಿ ಶಾಸಕ ಇರುವುದು” ಎಂದು ತಿಳಿಸಿದರು.
“ಹಿಂದುತ್ವದ ಆಧಾರದ ಮೇಲೆ ಸಮುದಾಯದ ಶೇ. 80ರಷ್ಟು ಮಂದಿ ಬಿಜೆಪಿಗೆ ಮತ ಹಾಕಿದ್ದಾರೆ. ಆದರೂ, ಈ ಸಮುದಾಯಕ್ಕೆ ಈವರೆಗೆ ಎಂಎಲ್ಸಿ ಅಥವಾ ಇತರ ಯಾವುದೇ ಟಿಕೆಟ್ಗಳನ್ನು ನೀಡಿಲ್ಲ” ಎಂದು ರಾಮಚಂದ್ರ ಬೈಕಂಪಾಡಿ ಆರೋಪಿಸಿದರು.
“ಕರ್ನಾಟಕದ ಮೊಗವೀರ ಸಮುದಾಯ 70 ಲಕ್ಷ ಮಂದಿ ಜನಸಂಖ್ಯೆಯನ್ನು ಹೊಂದಿದ್ದು, ಒಳನಾಡು ಮತ್ತು ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಈ ಸಮುದಾಯವನ್ನು ಬಿಜೆಪಿ ನಿರ್ಲಕ್ಷಿಸಿದರೆ ಸಮುದಾಯದ ಯಾರೊಬ್ಬರೂ ಸಚಿವರಾಗಲು ಸಾಧ್ಯವಿಲ್ಲ” ಎಂದು ವಿಷಾದಿಸಿದರು.
ಈ ಸುದ್ದಿ ಓದಿದ್ದೀರಾ? ಕತ್ತು ಕೊಯ್ದವರಿಂದ ನೀತಿ ಪಾಠ ಕಲಿಯುವ ಅಗತ್ಯ ಇಲ್ಲ: ನಾರಾಯಣಗೌಡ ವಿರುದ್ಧ ಎಚ್ಡಿಕೆ ಕಿಡಿ
“ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೊಗವೀರ ಸಮುದಾಯಕ್ಕೆ ಕನಿಷ್ಠ ಒಂದು ಸ್ಥಾನ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
“ಮೊಗವೀರ ಸಮುದಾಯದ ಕುಂದುಕೊರತೆಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ತಿಳಿಸಲಾಗುವುದು” ಎಂದು ಹೇಳಿದರು.