ರಾಜ್ಯದಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ರೈತರಿಂದ ಪ್ರತಿವರ್ಷ ಸುಮಾರು ₹2 ಸಾವಿರ ಕೋಟಿ ಹಣ ದೋಚಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷ ಆರೋಪಿಸಿದೆ.
ಇಂದು ಪುತ್ತೂರಿನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಯೂರಿಯಾ ಮತ್ತು ಡಿಎಪಿ ಸೇರಿದಂತೆ ಸಬ್ಸಿಡಿ ರಸಗೊಬ್ಬರಗಳನ್ನು ನಿಗದಿತ ಗರಿಷ್ಠ ಚಿಲ್ಲರೆ ಮಾರಾಟ ದರ (ಎಂಆರ್ಪಿ)ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಹೆಚ್ಚುವರಿ ಆರ್ಥಿಕ ಹೊರೆ ಹೊರಿಸಲಾಗುತ್ತಿದೆ ಎಂದು ದೂರಿದರು.
ಯೂರಿಯಾ ಚೀಲದ ಅಧಿಕೃತ ಬೆಲೆ ₹266.50 ಇದ್ದರೂ ಹಲವು ಕಡೆಗಳಲ್ಲಿ ₹320 ರಿಂದ ₹600ರವರೆಗೆ ಮಾರಾಟವಾಗುತ್ತಿದೆ. ಡಿಎಪಿ ಚೀಲದ ಎಂಆರ್ಪಿ ₹1,350 ಇದ್ದರೂ ₹1,450ರಿಂದ ₹2,100ರವರೆಗೆ ವಸೂಲಿ ಮಾಡಲಾಗುತ್ತಿದೆ. ಇದರಿಂದ ರೈತರು ಅನಿವಾರ್ಯವಾಗಿ ಹೆಚ್ಚಿನ ಬೆಲೆ ತೆತ್ತು ರಸಗೊಬ್ಬರ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವು ರಾಜ್ಯಕ್ಕೆ ಅಗತ್ಯವಿರುವ ಪ್ರಮಾಣದ ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದರೂ, ನೆಲಮಟ್ಟದಲ್ಲಿ ಅಭಾವ ಮುಂದುವರಿದಿದೆ. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೆಲ ಮಾರಾಟಗಾರರು, ಕಂಪನಿಗಳು ಹಾಗೂ ಮಧ್ಯವರ್ತಿಗಳು ರೈತರನ್ನು ಶೋಷಿಸುತ್ತಿದ್ದಾರೆ ಎಂದು ಕೆಆರ್ಎಸ್ ಆರೋಪಿಸಿದೆ.
ರಸಗೊಬ್ಬರ ಖರೀದಿಸುವ ವೇಳೆ ರೈತರಿಗೆ ಅಗತ್ಯವಿಲ್ಲದ ಇತರ ಉತ್ಪನ್ನಗಳನ್ನು ‘ಲಿಂಕ್ ಪ್ರಾಡಕ್ಟ್’ ಹೆಸರಿನಲ್ಲಿ ಕಡ್ಡಾಯವಾಗಿ ಖರೀದಿಸಲು ಒತ್ತಾಯಿಸಲಾಗುತ್ತಿದೆ. ಇದರಿಂದಲೂ ರೈತರಿಗೆ ನೂರಾರು ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಅಕ್ರಮಗಳ ಕುರಿತು ಹಲವು ಬಾರಿ ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿರುವ ಕೆಆರ್ಎಸ್, ರಸಗೊಬ್ಬರಗಳನ್ನು ಎಂಆರ್ಪಿ ದರದಲ್ಲೇ ಮಾರಾಟ ಮಾಡುವುದು, ಲಿಂಕ್ ಪ್ರಾಡಕ್ಟ್ ಪದ್ಧತಿಗೆ ಕಡಿವಾಣ ಹಾಕುವುದು, ಅಂಗಡಿಗಳಲ್ಲಿ ಬೆಲೆ ಹಾಗೂ ದಾಸ್ತಾನು ವಿವರಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.
ರಸಗೊಬ್ಬರ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಕೃಷಿ ಇಲಾಖೆಗೆ ಈಗಾಗಲೇ ಒಂದು ವಾರದ ಗಡುವು ನೀಡಲಾಗಿದ್ದು, ತಕ್ಷಣ ಪರಿಣಾಮಕಾರಿ ಕ್ರಮ ಜರುಗಿಸಬೇಕು ಎಂದು ಕೆಆರ್ಎಸ್ ಆಗ್ರಹಿಸಿದೆ. ರೈತರು ತಮ್ಮ ಸಮಸ್ಯೆಗಳ ಕುರಿತು ಪಕ್ಷದ ಸಹಾಯವಾಣಿ ಸಂಖ್ಯೆ 7349577130ಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಆರ್ ಎಸ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರದ ವೇಣುಗೋಪಾಲ್ ಜಿಲ್ಲಾ ಕಾರ್ಯದರ್ಶಿ ಶಿವರಾಜ್, ಸಿಜು V.K, ಸಜಿ ನಾಗರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ನವೀನ್ ಫೇರಾವೋ, ಶಿವ ಬೆಂಗೆರೆ ಉಪಸ್ಥಿರಿದ್ದರು





