ಮಹಿಳೆಯೊಬ್ಬರನ್ನು ಆಕೆಯ ವಿಕೃತ ಪತಿ ಕೈಕಾಲುಗಳನ್ನು ಕಟ್ಟಿಹಾಕಿ, ತಲೆ ಬೋಳಿಸಿ, ಮುಖಕ್ಕೆ ಇಂಜಿನ್ ಆಯಿಲ್ ಮಸಿ ಬಳಿದು, ಕ್ರೂರವಾಗಿ ಹಲ್ಲೆ ನಡೆಸಿ, ಮಕ್ಕಳು ಭಯದಿಂದ ನೋಡುತ್ತಿರುವಾಗಲೇ ಬಲವಂತವಾಗಿ ಮೂತ್ರ ಕುಡಿಸಿರುವ ಆಘಾತಕಾರಿ ಘಟನೆ ಛತ್ತೀಸ್ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಪತಿಯನ್ನು ಜಿತೇಂದ್ರ ಘಾಸಿಯಾ ಎಂದು ಗುರುತಿಸಲಾಗಿದೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಮಹಿಳೆಯನ್ನು ತಾರಾ ಎಂದು ಹೆಸರಿಲಾಗಿದೆ. ತಾರಾ ಮತ್ತು ಜಿತೇಂದ್ರ ಸುಮಾರು 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಆರಂಭದಲ್ಲಿ ದಾಂಪತ್ಯ ಚೆನ್ನಾಗಿಯೇ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಬ್ಬರ ನಡುವೆಯೂ ಕಲಹಗಳು ಹೆಚ್ಚಾಗಿದ್ದವು. ಆರೋಪಿ ಜಿತೇಂದ್ರ ನಿರಂತರವಾಗಿ ತಾರಾ ಮೇಲೆ ದೌರ್ಜನ್ಯ ಎಸಗುತ್ತಿದ್ದನು. ಇತ್ತೀಚೆಗೆ, ಆತನನ್ನು ತೊರೆದು ತಾರಾ ತನ್ನ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಬದುಕುತ್ತಿದ್ದರು ಎಂದು ತಿಳಿದುಬಂದಿದೆ.
ಆಕೆಯ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದ ಜಿತೇಂದ್ರ, ಜೂನ್ 14 ರಂದು ಆಕೆಯಿದ್ದ ಮನೆಗೆ ನುಗ್ಗಿ ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ-ದೌರ್ಜನ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅವರ ದೂರಿನಲ್ಲಿ; “ನನ್ನನ್ನು ಹುಡುಕಿಕೊಂಡು ಬಂದ ಪತಿ, ಮನೆಯ ಹೊರಗೆ ನಿಂತು ಅವಾಚ್ಯವಾಗಿ ನಿಂದಿಸಲು ಆರಂಭಿಸಿದನು ಬಳಿಕ, ಮನೆಗೆ ನುಗ್ಗಿ, ಹಗ್ಗದಿಂದ ನನ್ನು ಕೈಕಾಲುಗಳನ್ನು ಕಟ್ಟಿಹಾಕಿ ಕ್ರೂರವಾಗಿ ಹಲ್ಲೆ ನಡೆಸಿದನು. ನನ್ನ ಕೂದಲನ್ನು ಕತ್ತರಿಸಿ, ತಲೆ ಬೋಳಿಸಿದ್ದಾನೆ, ನನ್ನ ಮುಖಕ್ಕೆ ಮಸಿ ಮತ್ತು ಇಂಜಿನ್ ಆಯಿಲ್ ಬಳಿದು, ಬಲವಂತವಾಗಿ ಮೂತ್ರ ಕುಡಿಸಿದ್ದಾನೆ. ನನ್ನನ್ನು ಜೀವಂತವಾಗಿ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ್ದಾನೆ” ಎಂದು ವಿವರಿಸಿದ್ದಾರೆ.
ಅಲ್ಲದೆ, “ತನ್ನ ಮಕ್ಕಳಿಗೆ ನನಗೆ ಕಪಾಳಕ್ಕೆ ಹೊಡೆಯುವಂತೆ ಬೆದರಿಕೆ ಹಾಕಿ, ಹೊಡೆಸಿದ್ದಾನೆ” ಎಂದು ಸಂತ್ರಸ್ತೆ ದೂರಿದ್ದಾರೆ.
“ನನ್ನ ಪತಿ ನಿರಂತರವಾಗಿ ನನ್ನ ನಡತೆಯ ಕುರಿತು ಶಂಕಿಸುತ್ತಿದ್ದನು. ಇದೇ ಶಂಕೆಯ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದನು. ವರದಕ್ಷಿಣೆಗೂ ಬೇಡಿಕೆ ಇಟ್ಟಿದ್ದನು. ನನಗೆ ನ್ಯಾಯ ಬೇಕು. ಆತನಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಆಕೆ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ವಿಶ್ವದ ಪ್ರತಿ ಐವರು ನಾವಿಕರಲ್ಲೊಬ್ಬರು ಭಾರತೀಯರು: ‘ಸಾಗರ ಯೋಧ’ರ ಕಣ್ಣೀರಿನ ಕಥನ ಬಲ್ಲಿರಾ?
ಮಹಿಳೆಯ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 85, 115(2), 296 ಹಾಗೂ 351(2) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.
ಕೊರಿಯಾ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಸುರೇಶ ಚೌಬೆ ಮಾತನಾಡಿ, “ಮಹಿಳೆ ಮೊದಲು ಪೊಲೀಸರನ್ನು ಸಂಪರ್ಕಿಸಿದಾಗ, ಆಕೆ ಪ್ರಮುಖವಾಗಿ ತನ್ನ ಪತಿ ಮದ್ಯ ಸೇವಿಸಿ ದೈಹಿಕ ಹಲ್ಲೆ ಮತ್ತು ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಿದ್ದರು. ಆದರೆ, ವಿಡಿಯೋ ಬೆಳಕಿಗೆ ಬಂದ ನಂತರ, ಆತ ಇನ್ನೂ ಭೀಕರ ಕ್ರೌರ್ಯ ಎಸಗಿರುವುದು ಕಂಡುಬಂದಿದೆ. ಈಗ, ಹೆಚ್ಚುವರಿ ಕಾನೂನು ಸೆಕ್ಷನ್ಗಳನ್ನು ಸೇರಿಸಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ರಿಮಾಂಡ್ಗೆ ಒಪ್ಪಿಸಲಾಗುವುದು” ಎಂದು ತಿಳಿಸಿದ್ದಾರೆ.



