ನಿವೃತ್ತ ಪಿಡಬ್ಲ್ಯೂಡಿ ಎಂಜಿನಿಯರ್ ಮಾಣಿಕ್ ಕನಕಟ್ಟಿ ಅವರಿಗೆ ಸೇರಿದ ಬ್ಯಾಂಕ್ ಲಾಕರ್ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಮಾನೀಕೃತ ನೋಟುಗಳು ಹಾಗೂ ಗಣನೀಯ ಪ್ರಮಾಣದ ಚಿನ್ನದ ಆಭರಣಗಳು ಪತ್ತೆಯಾಗಿರುವುದು ಲೋಕಾಯುಕ್ತ ತನಿಖೆಗೆ ಹೊಸ ತಿರುವು ನೀಡಿದೆ.
ನಗರದ ಗೊದುತಾಯಿ ನಗರದಲ್ಲಿರುವ ನಿವಾಸ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮಂಗಳವಾರ ಪರಿಶೀಲನೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, ಬುಧವಾರ ಎನ್.ವಿ. ಕಾಲೇಜು ಸಮೀಪದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿರುವ ಲಾಕರ್ ತೆರೆಯಿಸಿ ತಪಾಸಣೆ ನಡೆಸಿದರು.
ಈ ವೇಳೆ 2016ರ ನೋಟು ಅಮಾನೀಕರಣದ ಬಳಿಕ ಚಲಾವಣೆಗೆ ಅನರ್ಹಗೊಂಡ ₹1,000 ಮುಖಬೆಲೆಯ ನೂರಾರು ನೋಟುಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ₹9 ಲಕ್ಷ ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಳೆಯ ನೋಟುಗಳು ಲಾಕರ್ನಲ್ಲಿ ಸಂಗ್ರಹವಾಗಿರುವುದು ಅಧಿಕಾರಿಗಳ ಗಮನ ಸೆಳೆದಿದೆ.
ಇದರ ಜೊತೆಗೆ 20 ತೊಲೆಗೂ ಅಧಿಕ ತೂಕದ ಚಿನ್ನದ ಉಂಗುರಗಳು ಹಾಗೂ ಇತರೆ ಆಭರಣಗಳು ಪತ್ತೆಯಾಗಿದ್ದು, ಅವುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆಭರಣಗಳ ಮೌಲ್ಯ ಹಾಗೂ ಮೂಲದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಓಂನಗರ ಬಳಿ ದುರಂತ; ಬಸ್ ಹತ್ತುತ್ತಿದ್ದ ವ್ಯಕ್ತಿ ಸಾವಿನ ಬಲೆಗೆ
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಬಸವರಾಜ್, ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಕುಮಾರ್ ರಾಜಶೇಖರ ಬಡದೇಸಾರ ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
ಪತ್ತೆಯಾದ ನಗದು ಮತ್ತು ಚಿನ್ನದ ಮೂಲ, ಆಸ್ತಿ ವಿವರಗಳು ಹಾಗೂ ಇತರೆ ದಾಖಲೆಗಳ ಕುರಿತು ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಪ್ರಕರಣದ ಸಂಪೂರ್ಣ ವಿವರಗಳು ತನಿಖೆಯ ನಂತರವೇ ಸ್ಪಷ್ಟವಾಗಲಿವೆ.





