ಶಾಲೆಯ ಶಿಕ್ಷಕಿಯನ್ನು ಬೇರೊಂದು ಶಾಲೆಗೆ ನಿಯೋಜನೆ ಮಾಡಿದ್ದನ್ನು ವಿರೋಧಿಸಿ ಗ್ರಾಮಸ್ಥರು ಸರ್ಕಾರಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿಭಾಗದಲ್ಲಿರುವ ಕುಂದರಸನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಿದೆ. ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ತರಗತಿಗಳು ನಡೆಯುತ್ತವೆ. ಶಾಲೆಯಲ್ಲಿ ಒಟ್ಟು 32 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ, ಈ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆಯೇ ಅಲ್ಲಿನ ಖಾಯಂ ಶಿಕ್ಷಕಿಯನ್ನು ನಿಯೋಜನೆ ಮಾಡಲಾಗಿದೆ. ಇದು ಗ್ರಾಮಸ್ಥರನ್ನು ಕೆರಳಿಸಿದೆ.
ಶಾಲೆಯ ಖಾಯಂ ಶಿಕ್ಷಕಿ ಶಾಂತಮ್ಮ ಅವರನ್ನು ಶಿಕ್ಷಣ ಇಲಾಖೆ ನಿಯೋಜನೆ ಮಾಡಿದೆ. ಶಾಲೆಗೆ ಅಥಿತಿ ಶಿಕ್ಷಕರನ್ನು ನಿಯೋಜಿಸಿದೆ. ತಮ್ಮೂರಿನ ಶಾಲೆಗೆ ಅಥಿತಿ ಶಿಕ್ಷಕರು ಬೇಡ, ಪಾಠ ಮಾಡುವುದರಲ್ಲಿ ಅನುಭವಿದ್ದ ಶಾಂತಮ್ಮ ಅವರನ್ನೇ ಮರಳಿ ನಿಯೋಜನೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಶಿಕ್ಷಕಿಯ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಸ್ ಸುಕನ್ಯಾ, “ಶೈಕ್ಷಣಿಕ ವರ್ಷ ಆರಂಭವಾದ ಸಮಯದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆಧಾರದ ಮೇಲೆ ಶಿಕ್ಷಕರನ್ನು ನಿಯೋಜನೆ ಮಾಡುವುದು ಸಹಜ ಪ್ರಕ್ರಿಯೆ. ಶಿಕ್ಷಕಿ ಶಾಂತಮ್ಮ ಅವರು ನಲಿ-ಕಲಿ ತರಬೇತಿ ಪಡೆದಿದ್ದಾರೆ. ಹೀಗಾಗಿ, ಅವರನ್ನು ದೋಣಿಮಡಗು ಶಾಲೆಗೆ ನಿಯೋಜಿಸಲಾಗಿತ್ತು. ಆದರೆ, ಕುಂದರಸನಹಳ್ಳಿ ಗ್ರಾಮಸ್ಥರು ಶಿಕ್ಷಕಿ ಶಾಂತಮ್ಮ ಅವರೇ ತಮ್ಮೂರಿನ ಶಾಲೆಗೆ ನಿಯೋಜಿಸಬೇಕು ಎಂದು ಹಠಕ್ಕೆ ಬಿದ್ದಿದ್ದರಿಂದ, ಅವರನ್ನು ಮತ್ತೆ ಕುಂದರಸನಹಳ್ಳಿ ಶಾಲೆಗೆ ನಿಯೋಜಿಸಲಾಗಿದೆ” ಎಂದು ಹೇಳಿದ್ದಾರೆ.