ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೆಆರ್ಎಸ್ ಅಣೆಕಟ್ಟೆಯಲ್ಲಿನ ನೀರಿನ ಮಟ್ಟ ಕಡಿಮೆಯಾಗಿರುವುದು ಬೆಂಗಳೂರು, ಮಂಡ್ಯ, ರಾಮನಗರ ಮತ್ತು ಮೈಸೂರು ಭಾಗದ ರೈತರಲ್ಲಿ ಆತಂಕ ಸೃಷ್ಟಿಸಿದೆ.
“ಅಣೆಕಟ್ಟಿನ ನೀರಿನ ಮಟ್ಟವು 74 ಅಡಿಗೆ ಬಂದಿಳಿದರೆ, ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರವೇ ಬಳಸಲಾಗುವುದು” ಎಂದು ಅಣೆಕಟ್ಟಿನ ಅಧಿಕಾರಿಗಳು ಮಾಹಿತಿ ನೀಡಿದರು.
“ಜೂನ್ ಒಳಗೆ ಅಣೆಕಟ್ಟೆಗೆ ಒಳಹರಿವು ಹೆಚ್ಚಾಗದಿದ್ದರೆ ಕಬ್ಬು ಬೆಳೆಗಾರರು ಸಮಸ್ಯೆ ಎದುರಿಸಬೇಕಾಗುತ್ತದೆ” ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
“ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಗುರುವಾರ 85.84 ಅಡಿ ಇತ್ತು. ವಿಶ್ವೇಶ್ವರಯ್ಯ ನಾಲೆಯಲ್ಲಿ 1,252 ಕ್ಯೂಸೆಕ್ ನೀರು ಸೇರಿದಂತೆ ಒಳಹರಿವು 629 ಕ್ಯೂಸೆಕ್, ಹೊರಹರಿವು 2,336 ಕ್ಯೂಸೆಕ್ ಇತ್ತು. ನೀರಿನ ಮಟ್ಟ 74 ಅಡಿ ತಲುಪಿದರೆ ಮಾತ್ರ ಕುಡಿಯುವ ಉದ್ದೇಶಕ್ಕಾಗಿ ನೀರನ್ನು ಸಂರಕ್ಷಿಸಲಾಗುವುದು” ಎಂದು ಕೆಆರ್ಎಸ್ ಅಣೆಕಟ್ಟಿನ ಅಧೀಕ್ಷಕ ಆನಂದ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅಕಾಲಿಕ ಮಳೆಗೆ ಈರುಳ್ಳಿ ಬೆಳೆ ಹಾನಿ; ಕಂಗಾಲಾದ ರೈತರು
“ಮಾರ್ಚ್ 1 ರಿಂದ ಮೇ 17ರ ನಡುವೆ ಕಾವೇರಿ ನದಿಯ ಮುಖ್ಯ ಜಲಾನಯನ ಪ್ರದೇಶವಾದ ಕೊಡಗಿನಲ್ಲಿ ಶೇ.45ರಷ್ಟು ಮಳೆ ಕೊರತೆಯಾಗಿದೆ. ಕಾವೇರಿಯ ಮುಖ್ಯ ಉಪನದಿ ಹೇಮಾವತಿ ಉಗಮ ಸ್ಥಾನ ಚಿಕ್ಕಮಗಳೂರಿನಲ್ಲಿ ಶೇ.20ರಷ್ಟು ಮಳೆ ಕೊರತೆಯಾಗಿದೆ” ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ (ಕೆಎಸ್ಎನ್ಡಿಎಂಸಿ) ಅಂಕಿಅಂಶಗಳ ಪ್ರಕಾರ ತಿಳಿದುಬಂದಿದೆ.
“ನೀರಿನ ಮಟ್ಟ 74 ಅಡಿಗಿಂತ ಕಡಿಮೆಯಾದರೆ ಕೃಷಿಗೆ ನೀರು ಸಿಗುವುದಿಲ್ಲ ಎಂಬುದು ರೈತರಿಗೆ ತಿಳಿದಿದೆ. ಮುಂದಿನ ಕೆಲವು ದಿನಗಳಲ್ಲಿ ಕೊಯ್ಲು ಪ್ರಾರಂಭವಾಗುವ ಸಾಧ್ಯತೆ ಇರುವುದರಿಂದ ಭತ್ತಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಜೂನ್ನಲ್ಲಿ ನೀರು ಬಿಡದಿದ್ದರೆ ಕಬ್ಬಿನ ಬೆಳೆಗೆ ತೊಂದರೆಯಾಗುತ್ತದೆ. ಜೂನ್ನಲ್ಲಿ ಅಣೆಕಟ್ಟಿನ ನೀರು ನಿರ್ಣಾಯಕವಾಗಿದೆ” ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿದರು.