ಬ್ಯಾಟರಿ ತ್ಯಾಜ್ಯ ನಿರ್ವಹಣಾ ನಿಯಮಗಳ ಸಮರ್ಪಕ ಅನುಷ್ಠಾನ ಹಾಗೂ ನಗರದಲ್ಲಿ ಉತ್ಪತ್ತಿಯಾಗುವ ಬಳಕೆಯಾದ ಬ್ಯಾಟರಿಗಳ ವೈಜ್ಞಾನಿಕ ನಿರ್ವಹಣೆಯನ್ನು ಖಚಿತಪಡಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆಯು ಎವರೆಡಿ ಬ್ಯಾಟರೀಸ್ ಸಂಸ್ಥೆಯೊಂದಿಗೆ ತಿಳಿವಳಿಕೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದೆ.
ಈ ಒಡಂಬಡಿಕೆಯ ಮುಖ್ಯ ಉದ್ದೇಶವು ಬಳಕೆಯಾದ ಬ್ಯಾಟರಿಗಳನ್ನು ಸಾಮಾನ್ಯ ಘನತ್ಯಾಜ್ಯದೊಂದಿಗೆ ಮಿಶ್ರಣ ಮಾಡದೆ ಪ್ರತ್ಯೇಕವಾಗಿ ಸಂಗ್ರಹಿಸಿ, ಅಧಿಕೃತ ಹಾಗೂ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕ ಅವುಗಳನ್ನು ಸಾಗಣೆ, ಮರುಸಂಸ್ಕರಣೆ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದಾಗಿದೆ.
ಈ ರೀತಿಯ ಒಡಂಬಡಿಕೆಗೆ ಸಹಿ ಹಾಕಿರುವ ಕರ್ನಾಟಕದ ಮೊದಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೈಸೂರು ಮಹಾನಗರ ಪಾಲಿಕೆಯೂ ಒಂದಾಗಿದ್ದು, ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು, ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪಾಲಿಕೆಯ ಬದ್ಧತೆಯನ್ನು ಈ ಉಪಕ್ರಮ ಪ್ರತಿಬಿಂಬಿಸುತ್ತದೆ.
ಒಡಂಬಡಿಕೆಯಡಿ ಸಾರ್ವಜನಿಕರು, ವಾಣಿಜ್ಯ ಸಂಸ್ಥೆಗಳು ಹಾಗೂ ವಿವಿಧ ಘಟಕಗಳಿಂದ ಉತ್ಪತ್ತಿಯಾಗುವ ಬಳಕೆಯಾದ ಬ್ಯಾಟರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಅಧಿಕೃತ ಸಂಗ್ರಹಣಾ ವ್ಯವಸ್ಥೆಯ ಮೂಲಕ ಮಾನ್ಯತೆ ಪಡೆದ ಮರುಸಂಸ್ಕರಣಾ ಸಂಸ್ಥೆಗಳಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಬ್ಯಾಟರಿ ತ್ಯಾಜ್ಯವನ್ನು ಸಾಮಾನ್ಯ ತ್ಯಾಜ್ಯದೊಂದಿಗೆ ವಿಲೇವಾರಿ ಮಾಡುವುದರಿಂದ ಉಂಟಾಗುವ ಪರಿಸರ ಹಾಗೂ ಆರೋಗ್ಯದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ.
ಈ ವಿಶೇಷ ಸುದ್ದಿ ಓದಿದ್ದೀರಾ?ಚಾಮರಾಜನಗರ ಜಿಲ್ಲೆಯ ‘SIR’ ಪ್ರಕ್ರಿಯೆ ಅಂಕಿಅಂಶಗಳ ಸಾಧನೆಯೋ, ಪ್ರಜಾಪ್ರಭುತ್ವದ ಪರೀಕ್ಷೆಯೋ?
ಮೈಸೂರು ನಗರವನ್ನು ಸ್ವಚ್ಛ, ಸುರಕ್ಷಿತ ಹಾಗೂ ಪರಿಸರಸ್ನೇಹಿ ನಗರವನ್ನಾಗಿಸುವ ನಿಟ್ಟಿನಲ್ಲಿ ಈ ಸಹಭಾಗಿತ್ವವು ಮತ್ತೊಂದು ಮಹತ್ವದ ಹೆಜ್ಜೆಯಾಗಿದ್ದು, ಬಳಕೆಯಾದ ಬ್ಯಾಟರಿಗಳನ್ನು ಸಾಮಾನ್ಯ ತ್ಯಾಜ್ಯದೊಂದಿಗೆ ಮಿಶ್ರಣ ಮಾಡದೆ ಪ್ರತ್ಯೇಕವಾಗಿ ಸಂಗ್ರಹಿಸಿ, ಪಾಲಿಕೆ ಸೂಚಿಸುವ ಅಧಿಕೃತ ವ್ಯವಸ್ಥೆಗೆ ಹಸ್ತಾಂತರಿಸುವಂತೆ ಮೈಸೂರು ಮಹಾನಗರ ಪಾಲಿಕೆ ಸಾರ್ವಜನಿಕರು ಹಾಗೂ ವಿವಿಧ ಸಂಸ್ಥೆಗಳಿಗೆ ಮನವಿ ಮಾಡಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ?ಮಾನವೀಯತೆಗೂ SIRಗೂ ಸಂಬಂಧವೇನು? ಪ್ರಜಾಪ್ರಭುತ್ವದ ಹಕ್ಕು, ದಾಖಲೆಗಳ ಗೊಂದಲ-ಉತ್ತರ ಸಿಗದ ಪ್ರಶ್ನೆಗಳು
ಒಡಂಬಡಿಕೆ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಸವಿತಾ ಎಂ.ಕೆ., ಕಾರ್ಯಪಾಲಕ ಅಭಿಯಂತರ (ಪರಿಸರ) ಮೃತ್ಯುಂಜಯ ಕೆ.ಎಸ್., ಎವರೆಡಿ ಬ್ಯಾಟರೀಸ್ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕ (ಕಾರ್ಯಾಚರಣೆ) ಪ್ರಸಾದ್ ತಂತ್ರಿ ಹಾಗೂ ವ್ಯವಸ್ಥಾಪಕ (ಮಾನವ ಸಂಪನ್ಮೂಲ, ಕೈಗಾರಿಕಾ ಸಂಬಂಧ ಮತ್ತು ಆಡಳಿತ) ನಾಗೇಶ್ ಎಸ್. ಇದ್ದರು.




