ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಚಿನ್ನ-ಬೆಳ್ಳಿ ಕೆಲಸಗಾರರ ಸಂಘ (ರಿ.) ವತಿಯಿಂದ 18ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು ಬಟ್ರಮಕ್ಕಿ ನಾಗಬನ ಸಮೀಪದ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಸಭಾಂಗಣದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದ ಅವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಕರ್ನಾಟಕ ಸರ್ಕಾರವು ವಿಶ್ವಕರ್ಮ ಸಮುದಾಯಕ್ಕೆ ನೀಡುತ್ತಿರುವ ವಿವಿಧ ಯೋಜನೆಗಳು ಮತ್ತು ಸವಲತ್ತುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ರಾಜಕೀಯವಾಗಿ ವಿಶ್ವಕರ್ಮ ಸಮುದಾಯ ಇನ್ನಷ್ಟು ಸದೃಢವಾಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಅವರು, “ನಮ್ಮ ಸಮಾಜದಿಂದ ಒಮ್ಮೆ ಮಾತ್ರ ದೇವರಾಜ ಅರಸ್ ಅವರು ಸಚಿವ ಸಂಪುಟದಲ್ಲಿ ಪ್ರತಿನಿಧಿತ್ವ ದೊರೆತಿದೆ. ಪ್ರಸ್ತುತ ವಿಶ್ವಕರ್ಮ ಅಭಿವೃದ್ಧಿ ನಿಗಮ ಅಸ್ತಿತ್ವದಲ್ಲಿದ್ದು, ಇದರ ಅವಕಾಶಗಳನ್ನು ಸಮುದಾಯ ಸದುಪಯೋಗಪಡಿಸಿಕೊಳ್ಳಬೇಕು. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಸಮುದಾಯದವರು ಸ್ಪರ್ಧಿಸಿ ನಾಯಕತ್ವ ವಹಿಸುವಂತಾಗಬೇಕು” ಎಂದು ಹೇಳಿದರು.

“ನಾವು ರಾಜಕೀಯವಾಗಿ ಸಬಲರಾಗಬೇಕು. ವಿಶ್ವಕರ್ಮ ಸಮುದಾಯವು ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ತನ್ನ ಶಕ್ತಿ ಮತ್ತು ಸಂಘಟಿತ ಬಲವನ್ನು ಪ್ರದರ್ಶಿಸಬೇಕು. ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಗಳಿಸುವತ್ತ ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕು” ಎಂದು ಅವರು ಕರೆ ನೀಡಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೃಷ್ಣ ಆಚಾರ್ ಒಂಕಾರ್ ಕೋಟ ಮಾತನಾಡಿ, ಕಳೆದ 18 ವರ್ಷಗಳಿಂದ ಸಂಘದ ಸಕ್ರಿಯ ಸದಸ್ಯನಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ಎಲ್ಲ ಸದಸ್ಯರ ವಿಶ್ವಾಸಕ್ಕೆ ತಾನು ಚಿರಋಣಿಯಾಗಿದ್ದೇನೆ ಎಂದು ಹೇಳಿದರು. ಚಿನ್ನ-ಬೆಳ್ಳಿ ಕೆಲಸಗಾರರ ಸಮುದಾಯವನ್ನು ಹಲವು ವರ್ಷಗಳಿಂದ ರಾಜಕೀಯವಾಗಿ ಮಾತ್ರ ಬಳಸಿಕೊಳ್ಳಲಾಗಿದೆ; ಆದರೆ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ದೊರೆತಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಹಕ್ಕುಗಳು ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆಯಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಬಹುದು. ಅದಕ್ಕಾಗಿ ಸಂಘದ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಕೈಜೋಡಿಸಿ ಸಹಕಾರ ನೀಡಬೇಕು ಎಂದು ಅವರು ಕರೆ ನೀಡಿದರು.

ಸಂಘದ ಗೌರವಾಧ್ಯಕ್ಷ ರಾಜೇಶ್ ಆಚಾರ್ಯ ಮರವಂತೆ, ಕಾರ್ಯದರ್ಶಿ ಕೃಷ್ಣ ಆಚಾರ್ಯ, ಕೋಶಾಧಿಕಾರಿ ರಘುನಾಥ ಶೇಟ್ ಸೇರಿದಂತೆ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ವಾರ್ಷಿಕ ವರದಿ ಹಾಗೂ ಆಯವ್ಯಯ ಮಂಡನೆ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ 1ರಿಂದ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಈ ಪುಸ್ತಕಗಳನ್ನು ದಿ. ಲಲಿತ ಆಚಾರ್ಯ ಕಾರ್ಕಡ ಅವರ ಸ್ಮರಣಾರ್ಥ ಪುತ್ರ ರಾಘವೇಂದ್ರ ಆಚಾರ್ಯ (ಶ್ರೀದೇವಿ ಗೋಲ್ಡ್ ಪ್ಯಾಲೇಸ್, ಸಾಲಿಗ್ರಾಮ) ಅವರ ಸಹಕಾರದಲ್ಲಿ ವಿತರಿಸಲಾಯಿತು.
ಸಮಾಜ ಸೇವೆ ಹಾಗೂ ವೃತ್ತಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಮೋಹನದಾಸ ಆಚಾರ್ಯ (ಕೋಟ), ದೇವದಾಸ್ ಶೇಟ್ (ಬಡಾಕೆರೆ), ಜನಾರ್ದನ ಆಚಾರ್ಯ (ಚೇಂಪಿ) ಹಾಗೂ ಚಂದ್ರಶೇಖರ ಶೇಟ್ (ಕೋಟೇಶ್ವರ) ಅವರನ್ನು ಗೌರವ ಸನ್ಮಾನ ಮಾಡಲಾಯಿತು. ಹಿರಿಯ ಚಿನ್ನ-ಬೆಳ್ಳಿ ಕೆಲಸಗಾರರನ್ನೂ ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಸಾಮಾಜಿಕ ಭದ್ರತಾ ಯೋಜನೆಯಡಿ ನಿಧನರಾದ ಸದಸ್ಯರ ಪುತ್ರಿಯರಿಗೆ ತಲಾ ₹10 ಸಾವಿರ ಭದ್ರತಾ ಠೇವಣಿ ವಿತರಿಸಲಾಯಿತು. ನಾಗೇಶ್ ಶೇಟ್ ಅವರ ಪುತ್ರಿ ಮಾನ್ಯ ಎನ್. ಶೇಟ್ (ಬಡಾಕೆರೆ) ಹಾಗೂ ಜಗದೀಶ್ ಆಚಾರ್ಯ ಅವರ ಪುತ್ರಿ ಇಂಚರಾ ಆಚಾರ್ಯ (ಆಲೂರು) ಅವರು ಇದರ ಪ್ರಯೋಜನ ಪಡೆದರು.

ಅಪಘಾತ ಹಾಗೂ ಅನಾರೋಗ್ಯದಿಂದ ಸಂಕಷ್ಟಕ್ಕೆ ಒಳಗಾದ ಸದಸ್ಯರಾದ ಸುರೇಂದ್ರ ಆಚಾರ್ಯ (ವಕ್ವಾಡಿ), ಪ್ರಕಾಶ ಆಚಾರ್ಯ (ಗುಂಡ್ಮಿ), ಶ್ರೀಧರ ಆಚಾರ್ಯ (ಮಧುವನ) ಸೇರಿದಂತೆ ಅರ್ಹ ಸದಸ್ಯರಿಗೆ ಆರ್ಥಿಕ ಸಹಾಯಧನ ವಿತರಿಸಲಾಯಿತು. ಇದೇ ವೇಳೆ ಸದಸ್ಯರಿಗೆ ಎಲ್ಐಸಿ ಬಾಂಡ್ಗಳು ಹಾಗೂ ಕಾರ್ಮಿಕರ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ವಿವೇಕ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಪ್ರೀತಿ ರೇಖಾ, ಕುಂದಾಪುರ ಜ್ಯುವೆಲ್ಲರಿ ಅಸೋಸಿಯೇಶನ್ ಅಧ್ಯಕ್ಷ ವೆಂಕಟೇಶ ಶೇಟ್, ವಿಶ್ರಾಂತ ಒಎನ್ಜಿಸಿ ಮಹಾಪ್ರಬಂಧಕ ಬನ್ನಾಡಿ ನಾರಾಯಣ ಆಚಾರ್ಯ ಹಾಗೂ ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಧರ್ಮದರ್ಶಿ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಸೇರಿದಂತೆ ಹಲವು ಗಣ್ಯರು ಮಾತನಾಡಿ ಸಂಘದ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಂಗವಾಗಿ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ, ಲಕ್ಷ್ಮೀ ಕೂಪನ್ ಡ್ರಾ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಘದ ಅಧ್ಯಕ್ಷ ಬಿ. ಕುಶಕುಮಾರ್ ಬನ್ನಾಡಿ ಅಧ್ಯಕ್ಷೀಯ ಭಾಷಣ ಮಾಡಿದರು. ಕಾರ್ಯದರ್ಶಿ ಕೃಷ್ಣ ಆಚಾರ್ಯ ಸ್ವಾಗತಿಸಿದರು. ರಘುನಾಥ ಶೇಟ್ ವಾರ್ಷಿಕ ವರದಿ ವಾಚಿಸಿ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು. ಕರುಣಾಕರ ಆಚಾರ್ಯ ಮತ್ತು ಸೃತಿಕಾ ಕುಂಭಾಷಿ ಕಾರ್ಯಕ್ರಮ ನಿರೂಪಿಸಿದರು.

ಬೆಳಗಿನ ಅವಧಿಯಲ್ಲಿ ಸಂಘದ ಸದಸ್ಯರಿಗಾಗಿ ವಿವಿಧ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು. ಸದಸ್ಯರ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ನಡೆಸಿ ಪ್ರತಿಭೆಯನ್ನು ಪ್ರೋತ್ಸಾಹಿಸಲಾಯಿತು. ಮಧ್ಯಾಹ್ನ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ವಾರ್ಷಿಕೋತ್ಸವವು ಒಗ್ಗಟ್ಟು, ಸಹಕಾರ ಮತ್ತು ಸಾಮಾಜಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ವೇದಿಕೆಯಾಯಿತು.






