ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ದೊರೆಯದಿರುವುದಕ್ಕೆ ಸಚಿವ ಎಂ.ಬಿ ಪಾಟೀಲರನ್ನು ದೂಷಿಸುತ್ತಿರುವುದು ಸಂಪೂರ್ಣ ಅಸಮರ್ಥನೀಯ ಎಂದು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಹೇಳಿದ್ದಾರೆ.
ಮಂಗಳವಾರ ಪ್ರಕಟಣೆ ನೀಡಿರುವ ಅವರು, “ವಿಜಯಪುರ ಜಿಲ್ಲೆಯ ಕಾಂಗ್ರೆಸ್ನ ಆರು ಮಂದಿ ಶಾಸಕರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದು, ಈ ಬಾರಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಎಲ್ಲ ಕಾರ್ಯಕರ್ತರಲ್ಲೂ ಇತ್ತು. ಈ ಕುರಿತು ಸಚಿವ ಎಂ.ಬಿ. ಪಾಟೀಲರೂ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದರು. ಆದರೆ, ಈ ಬಾರಿ ಅದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಮತ್ತೊಬ್ಬ ಶಾಸಕರಿಗೆ ಉತ್ತಮ ಸ್ಥಾನಮಾನ ದೊರೆಯುವ ವಿಶ್ವಾಸವಿದೆ” ಎಂದು ಹೇಳಿದರು.
ಸಚಿವ ಸ್ಥಾನ ದೊರೆಯದಿದ್ದಕ್ಕೆ ಎಂ.ಬಿ ಪಾಟೀಲರೇ ಕಾರಣ ಎಂದು ಆರೋಪಿಸುವುದು ಸರಿಯಲ್ಲ. ಒಂದು ವೇಳೆ ಸಚಿವ ಸ್ಥಾನ ದೊರೆತಿದ್ದರೆ ‘ಎಂ.ಬಿ. ಪಾಟೀಲರ ಪ್ರಯತ್ನದಿಂದಲೇ ಸಚಿವರಾದೆವು’ ಎಂದು ಹೇಳುತ್ತಿದ್ದರೆ?, ಸ್ಥಾನ ಸಿಗದಾಗ ಹೊಣೆಗಾರರನ್ನಾಗಿ ಮಾಡುವುದು ಹಾಸ್ಯಾಸ್ಪದ” ಎಂದು ಟೀಕಿಸಿದರು.
“ಪಕ್ಷ ಸಂಘಟನೆಗಾಗಿ ತನು, ಮನ, ಧನದಿಂದ ದುಡಿಯುತ್ತಿರುವ ಎಂ.ಬಿ ಪಾಟೀಲರಿಗೂ ಹಲವು ಬಾರಿ ಸಚಿವ ಸ್ಥಾನ ಕೈತಪ್ಪಿದೆ. 2004ರಲ್ಲಿ ಧರ್ಮಸಿಂಗ್ ನೇತೃತ್ವದ ಸರ್ಕಾರದಲ್ಲೂ, 2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲೂ ಅವರಿಗೆ ಸಚಿವ ಸ್ಥಾನ ದೊರೆಯಲಿಲ್ಲ. ಆದರೂ, ಅವರು ಯಾರ ಮೇಲೂ ಆರೋಪ ಮಾಡದೆ ತಾಳ್ಮೆಯಿಂದ ಪಕ್ಷಕ್ಕಾಗಿ ಕೆಲಸ ಮುಂದುವರಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು” ಎಂದು ಹೇಳಿದರು.
ರಾಜಕೀಯ ನಾಯಕರು ವಸ್ತುಸ್ಥಿತಿಯನ್ನು ಅರಿತು ಜವಾಬ್ದಾರಿಯುತವಾಗಿ ಮಾತನಾಡಬೇಕು. ಯಾವುದೇ ಆಧಾರವಿಲ್ಲದೆ ವಿನಾಕಾರಣ ಆರೋಪ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಡಾ. ಗಂಗಾಧರ ಸಂಬಣ್ಣಿ ತಿಳಿಸಿದ್ದಾರೆ.




