ಹೆಸ್ಕಾಂ ವಿದ್ಯುತ್ ವಿತರಣಾ ಸಂಸ್ಥೆಯನ್ನು ಖಾಸಗೀಕರಣಗೊಳಿಸಿ ಟಾಪ್ ಕವರ್ ಕಂಪೆನಿ ಲಿಮಿಟೆಡ್ಗೆ ಹಸ್ತಾಂತರಿಸುವ ಪ್ರಸ್ತಾವವನ್ನು ಹಿಂಪಡೆಯುವಂತೆ ಒತ್ತಾಯಿಸಿ ವಿಜಯಪುರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬಬಲೇಶ್ವರದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಬಲೇಶ್ವರ ತಹಶೀಲ್ದಾರ್ ಹಾಗೂ ಹೆಸ್ಕಾಂ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ, ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “ರಾಜ್ಯದ 15 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಸರ್ಕಾರ ತನ್ನ ನಿಲುವು ಬದಲಿಸದಿದ್ದಲ್ಲಿ ರಾಜ್ಯಾದ್ಯಂತ ಹೆದ್ದಾರಿ ತಡೆ ಸೇರಿದಂತೆ ತೀವ್ರ ಹೋರಾಟಗಳನ್ನು ಸಂಘಟಿಸುವ ಅನಿವಾರ್ಯತೆ ಎದುರಾಗಲಿದೆ” ಎಂದು ಎಚ್ಚರಿಕೆ ನೀಡಿದರು.
ತಾಲೂಕ ಘಟಕದ ಅಧ್ಯಕ್ಷ ಸುರೇಶ ಕಿರಸೂರ ಮಾತನಾಡಿ, “ರಾಜ್ಯದ ರೈತರು ಮೊದಲೇ ಲಾಭವಿಲ್ಲದ ಕೃಷಿಯ ಜತೆಗೆ ಬದುಕು ಸಾಗಿಸುತಿದ್ದೇವೆ. ಆದರೆ ಲಾಭದಾಯಕ ಬೆಲೆ ಸಿಕ್ಕಿಲ್ಲ. ಇನ್ನು ವಿದ್ಯುತ್ ಖಾಸಗೀಕರಣ ಮಾಡಿದರೆ ಎಲ್ಲರೂ ಕೃಷಿ ಮಾಡುವುದನ್ನು ಬಿಡಬೇಕಾಗುತ್ತದೆ. ಇದರಿಂದ ಮುಂದಿನ ದಿನ ತುತ್ತು ಅನ್ನಕ್ಕೂ ಪರಿತಪಿಸಬೇಕಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡಬಾರದು. ಈ ಹೋರಾಟಕ್ಕೆ ನಾಡಿನ ಸಮಸ್ತ ರೈತರ ಬೆಂಬಲವಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಸ್ಐಆರ್ ಪ್ರಕ್ರಿಯೆ ಪಾರದರ್ಶಕವಾಗಿರಲಿ; ಅಕ್ರಮ ಹೆಸರು ಸೇರ್ಪಡೆ ತಡೆಯಿರಿ: ಕಾಂಗ್ರೆಸ್ ಒತ್ತಾಯ
This video cannot be played in your browser. Open the video directly
ರೈತ ಮುಖಂಡರಾದ ಸುರೇಶ ಶಿರಬೋರ, ಬಸವಂತ ಕಾಂಬಳೆ, ಪುಟ್ಟು ಗಡದನವರ, ರಾಜು ನದಾಫ್, ಮಹಾದೇವ ಬನಸೋಡೆ, ರಾಮನಗೌಡ ಪಾಟೀಲ, ಸಂಗೀತ ರಾಠೋಡ ಇದ್ದರು.





