ಕರಾವಳಿ ಭಾಗದಲ್ಲಿ ನೀರು ಕೊರತೆ ಉಂಟಾಗಿದ್ದು, ದೇವಸ್ಥಾನಗಳಲ್ಲಿ ಅಭಿಷೇಕಕ್ಕೂ ನೀರಿಲ್ಲದೆ ಜಲಕ್ಷಾಮ ಎದುರಾಗಿದೆ. ಬಹುತೇಕ ದೇವಾಲಯಗಳಲ್ಲಿ ಮಳೆಗಾಗಿ ಪ್ರಾರ್ತನೆ ಮಾಡುತ್ತಿರುವುದೂ ಕಂಡುಬಂದಿದೆ.
ಮಳೆ ಆರಂಭವಾಗಬೇಕಾದ ಹೊತ್ತಲ್ಲಿ ರಣಬಿಸಿಲು ಸುಡುತ್ತಿರುವುದರಿಂದ ಶಾಲೆ, ಕಾಲೇಜುಗಳಿಗೆ ತೆರಳುವ ಮಕ್ಕಳು ಬಿಸಿಲಿಗೆ ಕೊಡೆ ಹಿಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಬಳಲಿ ಶಾಲೆಗೆ ತೆರಳಿದರೆ ಕುಡಿಯಲು ನೀರಿಲ್ಲದ ಪರಿಸ್ತಿತಿ ಇದೆ.
“ನಿತ್ಯ ಅನ್ನಪ್ರಸಾದ ನೀಡುವ ದೇವಸ್ಥಾನಗಳು ಪ್ರಯಾಸಪಟ್ಟು ಪ್ರತ್ಯೇಕವಾಗಿ ನೀರಿನ ವ್ಯವಸ್ಥೆ ಮಾಡಿಕೊಂಡಿರುವುದನ್ನು ಹೊರತುಪಡಿಸಿದರೆ, ನದಿಯನ್ನೇ ನಂಬಿಕೊಂಡಿರುವ ಕಟೀಲು ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿ ಸಮಸ್ಯೆ ಉಂಟಾಗಿದೆ” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಬತ್ತಿ ಹೋದ ನಂದಿನಿ
ಮಳೆಗಾಲವಿದ್ದಾಗ ನಂದಿನಿ ಹೊಳೆ ತುಂಬಿ ಹರಿಯುವುದರಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವು ದ್ವೀಪದಂತೆ ಕಂಗೊಳಿಸುತ್ತಿತ್ತು. ಆದರೀಗ, ನಂದಿನಿ ಬತ್ತಿ ಹೋಗಿರುವುದರಿಂದ ದೇವಾಲಯದ ಚಿತ್ರಣವೇ ಬೇರೆಯಾಗಿದೆ.
ಕಟೀಲು ದೇವಸ್ಥಾನಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತರಿಗಾಗಿ ತೀರ್ಥ, ಅನ್ನಪ್ರಸಾದಕ್ಕೆ ನದಿ ನೀರು ಬಳಕೆಯಾಗುತ್ತದೆ. ಆದರೆ ಈಗ ನದಿಯಲ್ಲಿ ನೀರಿಲ್ಲ. ಈಗಿರುವ ಸಣ್ಣ ಪ್ರಮಾಣದ ನೀರು ಅದ್ಯಾವುದಕ್ಕೂ ಸಾಕಾಗುತ್ತಿಲ್ಲ. ಹೀಗಾಗಿ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗಿದೆ.
ಮೂರು ಹೊತ್ತು ದೇವಸ್ಥಾನದಲ್ಲಿ ಅನ್ನಪ್ರಸಾದ ವಿತರಣೆಯಾಗುವ ಕಾರಣ, ಸ್ಟೀಲ್ ಬಟ್ಟಲುಗಳಲ್ಲಿ ಊಟ ವಿತರಿಸಲಾಗುತ್ತಿತ್ತು. ಇದೀಗ ಅದರ ಬದಲಿಗೆ ಅಡಕೆ ಹಾಳೆ ತಟ್ಟೆಯನ್ನು ಉಪಯೋಗಿಸಲಾಗುತ್ತಿದೆ. ಇದರಿಂದ ಎರಡು ಲಾಭವಿದೆ. ಮೊದಲನೆಯದ್ದು ನೀರಿನ ಉಳಿತಾಯ, ಎರಡನೆಯದ್ದು ಪರಿಸರ ಸಂರಕ್ಷಣೆ. ಹಾಳೆ ತಟ್ಟೆಗಳು ಪ್ಲಾಸ್ಟಿಕ್ನಂತಲ್ಲ. ಅದನ್ನು ವಿಲೇವಾರಿ ಮಾಡಲು ಸುಲಭ. ಹೀಗಾಗಿ ಊಟ ನೀಡುವ ಸಂದರ್ಭ ನೀರಿನ ಬಳಕೆ ಕಡಿಮೆ ಮಾಡಬಹುದಾದರೂ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಅಭಿಷೇಕ, ತೀರ್ಥ ಇತ್ಯಾದಿಗಳಿಗೆ ನೀರು ಬೇಕೇ ಬೇಕು. ಆದರೆ ಅದಕ್ಕೂ ಅದ್ವಾನವಾಗಿದೆ.
ಕರಾವಳಿಯಲ್ಲಿ ಇಂಥ ಬಹುತೇಕ ಸಣ್ಣಪುಟ್ಟ ನದಿ, ಹೊಳೆಯನ್ನು ನಂಬಿ ಇರುವ ದೇವಸ್ಥಾನಗಳಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ. ಅಲ್ಲಿ ಭಕ್ತರ ಸಂಖ್ಯೆ ವಿರಳವಾಗಿರುವ ಕಾರಣ ದೊಡ್ಡ ಮಟ್ಟಿನ ಸಮಸ್ಯೆ ತಲೆದೋರಿಲ್ಲ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಬಿಪರ್ಜಾಯ್ ಚಂಡಮಾರುತ; ಅರಬ್ಬಿ ಸಮುದ್ರ ತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಕಟೀಲಿನಲ್ಲಿ ಪದವಿ ಕಾಲೇಜು ಹೊರತುಪಡಿಸಿ ಒಂದನೇ ತರಗತಿಯಿಂದ ಪದವಿಪೂರ್ವ ಕಾಲೇಜಿನ ವರೆಗೆ ಮದ್ಯಾಹ್ನದವರೆಗೆ ತರಗತಿಗಳು ನಡೆಸಲಾಗುತ್ತಿದೆ. ದೇವಸ್ಥಾನದಲ್ಲಿ ಮೂರು ಬಾವಿ ಮತ್ತು ಮೂರು ಬೋರ್ವೆಲ್ಗಳು ಇವೆ. ಆದರೂ ನೀರು ಸಂಪೂರ್ಣವಾಗಿ ಬತ್ತಿದೆ. ಕಳೆದ ಏಪ್ರಿಲ್ನಲ್ಲಿ ನಡೆದ ಜಾತ್ರಾಮಹೋತ್ಸವದ ಸಂದರ್ಭದಲ್ಲೂ ನೀರಿನ ಅಭಾವ ಉಂಟಾಗಿತ್ತು.
ಕರಾವಳಿಯಲ್ಲಿ ಪ್ರತಿ ಬಾರಿ ಇಂಥ ಬರಗಾಲ ಬಂದಾಗ ಮಳೆಗಾಗಿ ದೇವರ ಮೊರೆಹೋಗುವುದು ವಾಡಿಕೆ. ಈ ಬಾರಿಯೂ ನಂದಾವರ, ಸಜಿಪ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.