2017ರ ಮಿಜೋರಾಂ ಸಾಮೂಹಿಕ ಅತ್ಯಾಚಾರ, ಆಸಿಡ್ ದಾಳಿ ಪ್ರಕರಣದಲ್ಲಿ ಮಿಜೋರಾಂನ ಐಜ್ವಾಲ್ ಜಿಲ್ಲೆಯ ನ್ಯಾಯಾಲಯವು ಮಂಗಳವಾರ ಇಬ್ಬರು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರಿಗೆ 42 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಹಾಗೆಯೇ ಕೆಲವು ದಿನಗಳ ನಂತರ ಮೃತದೇಹ ಪತ್ತೆಯಾಗಿದ್ದ ಅತ್ಯಾಚಾರ ಸಂತ್ರಸ್ತೆಯ ಸ್ನೇಹಿತನನ್ನು ಕೊಲೆ ಮಾಡಿದ ಆರೋಪದಿಂದ ನ್ಯಾಯಾಲಯ ಇಬ್ಬರನ್ನೂ ಖುಲಾಸೆಗೊಳಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿಲ್ವಿ ಜೊಮುವಾನ್ಪುಯಿ ರಾಲ್ಟೆ ಅವರು ಜೂನ್ 12ರಂದು ಬಿಎಸ್ಎಫ್ ಯೋಧರಾದ ನೀಲಂಜನ್ ದಾಸ್ ಮತ್ತು ದಿನೇಶ್ ಕುಮಾರ್ ಅವರನ್ನು ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ದೋಷಿಗಳೆಂದು ಘೋಷಿಸಿದ್ದು ಜೂನ್ 16ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಿಜೋರಾಂ ಪ್ರಚಾರಕ್ಕೆ ಮೋದಿ ಚಕ್ಕರ್; ಜನಾಕ್ರೋಶದ ಭಯವೇ?
ನ್ಯಾಯಾಲಯವು ಇಬ್ಬರೂ ಅಪರಾಧಿಗಳಿಗೆ ಸಾಮೂಹಿಕ ಅತ್ಯಾಚಾರಕ್ಕೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ, ಗಂಭೀರ ದೈಹಿಕ ಹಾನಿಗೆ ಕಾರಣವಾದ ಅತ್ಯಾಚಾರಕ್ಕೆ 10 ವರ್ಷ ಮತ್ತು ಆಸಿಡ್ ದಾಳಿಗೆ 12 ವರ್ಷ, ಒಟ್ಟು 42 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಮೂರು ಆರೋಪಗಳ ಅಡಿಯಲ್ಲಿ ನ್ಯಾಯಾಲಯವು ತಲಾ 60,000 ರೂ. ದಂಡವನ್ನೂ ವಿಧಿಸಿದೆ. ದಂಡ ಪಾವತಿಸದಿದ್ದರೆ ಪ್ರತಿ ಆರೋಪದ ಅಡಿಯಲ್ಲಿ ಹೆಚ್ಚುವರಿಯಾಗಿ ಎರಡು ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಏನಿದು ಮಿಜೋರಾಂ ಸಾಮೂಹಿಕ ಅತ್ಯಾಚಾರ, ಆಸಿಡ್ ದಾಳಿ ಪ್ರಕರಣ?
ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ನಿವಾಸಿಗಳಾದ ದಾಸ್ ಮತ್ತು ಕುಮಾರ್, 2017ರ ಜುಲೈ 16ರಂದು ಮಾಮಿತ್ ಜಿಲ್ಲೆಯ ಸಿಲ್ಸುರಿ ಪಶ್ಚಿಮ ಗ್ರಾಮದ ಗಸ್ಕತಾ ನದಿಯ ಬಳಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಹಲ್ಲೆ ನಡೆಸಿದ್ದರು. ಎರಡು ದಿನಗಳ ನಂತರ ಪೊಲೀಸರು ಸಂತ್ರಸ್ತೆಯ ಸಹೋದರ ಸಲ್ಲಿಸಿದ ದೂರಿನ ಆಧಾರದ ಮೇಲೆ ಮಾರ್ಪಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ರಂಗೋಬಿ, ಏಡಿಗಳು ಮತ್ತು ಕಾಡು ತರಕಾರಿಗಳನ್ನು ಸಂಗ್ರಹಿಸಲು ಗಸ್ಕತಾ ಹೊಳೆಯ ಬಳಿಯ ಕಾಡಿಗೆ ಹೋಗಿದ್ದರು.ಅಲ್ಲಿದ್ದ ಮಿಜೋರಾಂ-ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿರುವ ಬಿಎಸ್ಎಫ್ ಶಿಬಿರದಲ್ಲಿ ನಿಯೋಜಿಸಲ್ಪಟ್ಟಿದ್ದ ಆರೋಪಿಗಳು ಆಕೆಯನ್ನು ಬಲವಂತವಾಗಿ ಹತ್ತಿರದ ಅಡಿಕೆ ತೋಟಕ್ಕೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿ, ಮುಖದ ಮೇಲೆ ಆಸಿಡ್ ಸುರಿದಿದ್ದರು. ಇದರಿಂದಾಗಿ ತೀವ್ರ ಸುಟ್ಟಗಾಯ, ಒಂದು ಕಣ್ಣಿನ ದೃಷ್ಟಿಯನ್ನೇ ಸಂಪೂರ್ಣವಾಗಿ ಕಳೆದುಕೊಂಡಿದ್ದಳು. ಈ ಸಂಬಂಧ ಸಂತ್ರಸ್ತೆ ಸಾಕ್ಷ್ಯ ನುಡಿದಿದ್ದಳು.
ಘಟನೆ ನಡೆದ ಬಳಿಕ ಸಂತ್ರಸ್ತೆಯ ಸ್ನೇಹಿತ ಕಾಣೆಯಾಗಿದ್ದ. ಕೆಲವು ದಿನಗಳ ನಂತರ ಅಪರಾಧ ನಡೆದ ಸ್ಥಳದ ಬಳಿ ಆತನ ಮೃತದೇಹ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪರೀಕ್ಷೆಗಳು ಆತನನ್ನು ಕೊಲೆ ಮಾಡಲಾಗಿದೆ ಎಂಬುದು ಖಚಿತವಾಗಿತ್ತು. ಆತನ ಸಾವಿಗೆ ಈ ಇಬ್ಬರು ಯೋಧರೇ ನೇರ ಕಾರಣ ಎಂಬುದನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸದ ಕಾರಣ, ನ್ಯಾಯಾಲಯ ಇವರನ್ನು ಕೊಲೆ ಆರೋಪದಿಂದ ಮುಕ್ತಗೊಳಿಸಿದೆ.




