ಆರ್ಎಸ್ಎಸ್ ಸ್ಥಾಪನೆಯಾಗಿ ನೂರು ವರ್ಷವಾದರೂ ಇನ್ನೂ ಅಧಿಕೃತವಾಗಿ ನೋಂದಣಿಯಾಗಿಲ್ಲ. ಈ ವಿಷಯ ಹಲವು ಬಾರಿ ಚರ್ಚೆಗೆ ಬಂದಿದ್ದು, ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಈ ನಿಲುವನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ. ಈ ನಡುವೆ ಆರ್ಎಸ್ಎಸ್ ನೋಂದಣಿಯಾದರೆ ಅತಿದೊಡ್ಡ ಹಣ ವರ್ಗಾವಣೆ ಮತ್ತು ಹವಾಲಾ ಜಾಲ ಬಹಿರಂಗವಾಗುತ್ತದೆ ಎಂಬ ಭಯವೇ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು 1986ರ ಬ್ಯಾಚ್ನ ಒಡಿಶಾ ಕೇಡರ್ನ ನಿವೃತ್ತ ಐಪಿಎಸ್ ಅಧಿಕಾರಿ, 2018 ಮತ್ತು 2019ರಲ್ಲಿ ಸಿಬಿಐ ಹಂಗಾಮಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಎಂ. ನಾಗೇಶ್ವರ ರಾವ್ ಪ್ರಶ್ನಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಸಂಘಟನೆಯನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಹಣಕಾಸು ಮತ್ತು ಇತರ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿ ಬಹಿರಂಗ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ ಮೋಹನ್ ಭಾಗವತ್, “ಇದು ಕೇವಲ ರಾಜಕೀಯ. ಹಿಂದೂ ಧರ್ಮವನ್ನೂ ನೋಂದಾಯಿಸಲಾಗಿಲ್ಲ. ಹಲವು ಸಂಸ್ಥೆಗಳ ನೋಂದಣಿಯಾಗಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆರ್ಎಸ್ಎಸ್ನ ಇತಿಹಾಸವನ್ನೇ ತಿರುಚುತ್ತಿರುವ ಭಾಗವತ್!
ಈ ವಿಡಿಯೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನಿವೃತ್ತ ಐಪಿಎಸ್ ಅಧಿಕಾರಿ ನಾಗೇಶ್ವರ ರಾವ್, “ಪ್ರಿಯ ಡಾ. ಮೋಹನ್ ಭಾಗವತ್ ಅವರೇ, ಆರ್ಎಸ್ಎಸ್ಗೆ ಏನಾದರೂ ಮರೆಮಾಡಬೇಕಾದ ವಿಷಯವಿದೆಯೆ? ನೋಂದಣಿ ಮಾಡಿದರೆ ಆರ್ಎಸ್ಎಸ್ನ ಅತಿದೊಡ್ಡ ಹಣ ವರ್ಗಾವಣೆ ಮತ್ತು ಹವಾಲಾ ಜಾಲ ಬಟ್ಟಬಯಲಾಗುತ್ತದೆ ಎಂಬ ಭಯ ಇದೆಯೇ” ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ, “ಸಿಐಎ ಮತ್ತು ಅಂತಾರಾಷ್ಟ್ರೀಯ ಡೀಪ್ ಸ್ಟೇಟ್ನೊಂದಿಗೆ ಆರ್ಎಸ್ಎಸ್ಗೆ ಇರುವ ಆಳವಾದ ಸಂಪರ್ಕ ಬಹಿರಂಗವಾಗುತ್ತದೆ ಎಂದು ನೀವು ಭಯಪಡುತ್ತೀರಾ? ನೋಂದಣಿಯಾದರೆ ಆರ್ಎಸ್ಎಸ್ನ ಹುಸಿ-ಹಿಂದುತ್ವ ಸಿದ್ಧಾಂತವನ್ನು ಬಹಿರಂಗವಾಗುತ್ತದೆ ಎಂಬ ಭಯವೇ” ಎಂದೂ ಕೇಳಿದ್ದಾರೆ.
“ಇದ್ಯಾವುದರ ಭಯ ಇಲ್ಲ ಎಂದಾದರೆ ನೀವು ನೋಂದಣಿಯನ್ನು ಏಕೆ ವಿರೋಧಿಸುವುದು? ಆರ್ಎಸ್ಎಸ್ ನೋಂದಣಿಯನ್ನು ಹಿಂದೂ ಧರ್ಮದೊಂದಿಗೆ ನೀವು ಹೋಲಿಕೆ ಮಾಡಿರುವುದು ಸೂಕ್ತವಲ್ಲ ಮಾತ್ರವಲ್ಲದೆ ತರ್ಕಬದ್ಧವಲ್ಲ. ಹಿಂದೂ ಧರ್ಮದಂತೆ, ಆರ್ಎಸ್ಎಸ್ ಒಂದು ಧರ್ಮವಲ್ಲ” ಎಂದು ಹೇಳಿದ್ದಾರೆ.
“ಸರ್ಕಾರಿ ಹಣವನ್ನು ಬಯಸುವ ಸಂಸ್ಥೆಗಳು ಮಾತ್ರ ನೋಂದಾಯಿಸಿಕೊಳ್ಳಬೇಕು ಎಂಬ ನಿಮ್ಮ ವಾದವು ಅಷ್ಟೇ ದೋಷಪೂರಿತ. ವಾಸ್ತವದಲ್ಲಿ, ಅಪರಾಧಿಗಳು, ವಂಚಕರು, ಹಣ ವರ್ಗಾವಣೆದಾರರು, ಮಾಫಿಯಾ ಮತ್ತು ರಾಷ್ಟ್ರ ವಿರೋಧಿ ಘಟಕಗಳು ಸಾಮಾನ್ಯವಾಗಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು ಮಾತ್ರ ನೋಂದಣಿಯಿಂದ ತಪ್ಪಿಸಿಕೊಳ್ಳುತ್ತಾರೆ. ಕಾನೂನುಬದ್ಧ ಚಟುವಟಿಕೆಗಳಲ್ಲಿ ತೊಡಗಿರುವ ಉಳಿದವರೆಲ್ಲರೂ ನೋಂದಣಿ ಮಾಡಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.




