ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗ ಮಾತ್ರವೇ ತಮಿಳುನಾಡು ಕಾವೇರಿ ನೀರು ಹಂಚಿಕೆಯ ತೀವ್ರ ಸಮಸ್ಯೆಯನ್ನು ಎದುರಿಸುತ್ತದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನಾಯಿನಾರ್ ನಾಗೇಂದ್ರನ್ ಆರೋಪಿಸಿದ್ದಾರೆ.
ಈರೋಡ್ನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ ಧೀರನ್ ಚಿನ್ನಮಲೈ ಅವರ ನೆನಪಿನ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಾಗೇಂದ್ರನ್ ಈ ಗಂಭೀರ ಆರೋಪ ಮಾಡಿದ್ದಾರೆ.
“ಈ ಬಾರಿಯ ಆದಿ ಪೆರುಕ್ಕು ಹಬ್ಬದ ವೇಳೆಗೆ ಕಾವೇರಿ ನದಿಗೆ ನಿರೀಕ್ಷಿತ ಪ್ರಮಾಣದ ನೀರು ಹರಿದುಬಂದಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಸಂಪೂರ್ಣ ಅಧಿಕಾರವಿದ್ದು, ಅದು ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡುವುದಿಲ್ಲ. ಕರ್ನಾಟಕ ಸರ್ಕಾರವು ಪ್ರಾಧಿಕಾರದ ಆದೇಶಗಳಿಗೆ ಗೌರವ ನೀಡುತ್ತಿಲ್ಲ. ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾದಾಗ ಮಾತ್ರವೇ ಹೆಚ್ಚುವರಿ ನೀರನ್ನು ಹರಿಸುತ್ತಿದೆಯೇ ಹೊರತು ಸ್ವಯಂಪ್ರೇರಿತವಾಗಿ ನೀರು ಬಿಡುತ್ತಿಲ್ಲ” ಎಂದು ದೂರಿದ್ದಾರೆ.
“ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಇಂತಹ ಪರಿಸ್ಥಿತಿ ಇರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ, ತಮಿಳುನಾಡಿಗೆ ಕಾವೇರಿ ಸಮಸ್ಯೆ ಎದುರಾಗುತ್ತದೆ. ತಮಿಳುನಾಡಿನ ಕಾಂಗ್ರೆಸ್ ಸಚಿವರಾಗಲಿ, ರಾಹುಲ್ ಗಾಂಧಿ ಹಾಗೂ ಟಿಎನ್ಸಿಸಿ ಅಧ್ಯಕ್ಷ ಮಾಣಿಕ್ಕಂ ಟಾಗೋರ್ ಅವರಾಗಲಿ ತಕ್ಷಣವೇ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರಿ ತಮಿಳುನಾಡಿಗೆ ಬರಬೇಕಾದ ಕಾವೇರಿ ನೀರನ್ನು ಬಿಡುಗಡೆ ಮಾಡಿಸಬೇಕು” ಎಂದು ಆಗ್ರಹಿಸಿದ್ದಾರೆ.



