ದೇಶದ ಶಿಕ್ಷಣ ವ್ಯವಸ್ಥೆಯು ಮಕ್ಕಳ ಮೇಲೆ ಅಪಾರ ಒತ್ತಡ ಹೇರುತ್ತದೆ. ಅವರ ಭವಿಷ್ಯವನ್ನು ಹೊಸಕಿ ಹಾಕುತ್ತಿದೆ. ವೃತ್ತಿಜೀವನದ ಆಯ್ಕೆಗಳನ್ನು ಸೀಮಿತಗೊಳಿಸುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು.
ಜೂನ್ 17ರಂದು ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಎಂಬ ಹೆಸರಿನಲ್ಲಿ ರಾಜಸ್ಥಾನದ ಕೋಚಿಂಗ್ ಹಬ್ ಆದ ಕೋಟಾ ನಗರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದರು. ದೇಶದ ಶಿಕ್ಷಣ ವ್ಯವಸ್ಥೆ ಮತ್ತು ನೀಟ್ ಪೇಪರ್ ಸೋರಿಕೆ ಹಗರಣಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇದನ್ನು ಓದಿದ್ದೀರಾ? ಪೇಪರ್ ಲೀಕ್: ಕೋಚಿಂಗ್ ರಾಜಧಾನಿ ಕೋಟಾದಲ್ಲಿ ರಾಹುಲ್ ರ್ಯಾಲಿ; ಹಳಿ ತಪ್ಪಿಸಲು ಬಿಜೆಪಿ ತಂತ್ರ
ಕೋಟಾದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಮಾನಸಿಕ ಒತ್ತಡದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ರಾಹುಲ್, ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಆಕಾಂಕ್ಷಾ ಎಂಬ ವಿದ್ಯಾರ್ಥಿನಿಯ ಘಟನೆಯನ್ನು ನೆನೆದರು. “ಇದು ದೇಶಕ್ಕೆ ಒಳ್ಳೆಯದಲ್ಲ. ಈ ದೇಶದಲ್ಲಿ ಯಾವುದೇ ವಿದ್ಯಾರ್ಥಿಯು ಈ ಹುಡುಗಿ ಅನುಭವಿಸಿದ ಯಾತನೆ ಅನುಭವಿಸದಂತೆ ನೋಡಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.
ಇನ್ನು ಭಾಷಣದ ಆರಂಭದಲ್ಲೇ ಈ ಸಮಾವೇಶದ ಬಗ್ಗೆ ಸ್ಪಷ್ಟಪಡಿಸಿದ ರಾಹುಲ್ ಗಾಂಧಿ, “ಇದು ಯಾವುದೇ ರಾಜಕೀಯ ಸಭೆಯಲ್ಲ. ನಾನು ಇಲ್ಲಿ ಬಿಜೆಪಿ, ಕಾಂಗ್ರೆಸ್, ಚುನಾವಣೆ ಎಂಬ ಪದಗಳನ್ನು ಬಳಸುವುದಿಲ್ಲ. ಈ ಸಂಜೆ ಕೇವಲ ನಿಮ್ಮ ಸಂಕಷ್ಟಗಳು, ನೀವು ದಿನನಿತ್ಯ ಎದುರಿಸುತ್ತಿರುವ ಸವಾಲುಗಳು ಮತ್ತು ನಿಮ್ಮ ಭವಿಷ್ಯದ ಕುರಿತು ಮಾತನಾಡಲು ಮೀಸಲಾಗಿಟ್ಟಿದ್ದೆನೆ” ಎಂದು ಹೇಳಿದರು.
ರಾಹುಲ್ ಗಾಂಧಿ ಮಾತನಾಡಿದ ಬಳಿಕ ಐವರು ವಿದ್ಯಾರ್ಥಿಗಳನ್ನು (ಮೂವರು ಹುಡುಗಿಯರು ಮತ್ತು ಇಬ್ಬರು ಹುಡುಗರು – ಸೌಮ್ಯಾ ಮೀನಾ, ಸಾನಿಯಾ ಗುಪ್ತಾ, ಈಶಾನ್ ಆಲಂ, ಅಶ್ವಿ ಮತ್ತು ಹಿಮಾಂಶು ಡಾಂಗಿ) ವೇದಿಕೆಗೆ ಆಹ್ವಾನಿಸಲಾಗಿತ್ತು. ನೀಟ್, ಜೆಇಇ ಮತ್ತು ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಆಕಾಂಕ್ಷೆಗಳು, ಸವಾಲುಗಳು ಮತ್ತು ತರಬೇತಿಗಾಗಿ ಖರ್ಚು ಮಾಡಿದ ಹಣದ ಬಗ್ಗೆ ಮಾತನಾಡಿದರು.
ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವಾಗ ಮಾತನಾಡಿದ ರಾಹುಲ್ ಗಾಂಧಿ, “ದೇಶದ ಶಿಕ್ಷಣ ವ್ಯವಸ್ಥೆಯ ದೊಡ್ಡ ದೌರ್ಬಲ್ಯವೆಂದರೆ ಅದು ಮಕ್ಕಳ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪ್ರೋತ್ಸಾಹಿಸುವಲ್ಲಿ ವಿಫಲವಾಗಿರುವುದು” ಎಂದು ಅಭಿಪ್ರಾಯಿಸಿದರು.
“ದೇಶದ ಇಂದಿನ ಶಿಕ್ಷಣ ವ್ಯವಸ್ಥೆಯು ಕೋಟ್ಯಂತರ ಯುವಕರ ಕನಸುಗಳನ್ನು ಹೊಸಕಿ ಹಾಕುವ ಮತ್ತು ಅವರಿಂದ ಹಣ ವಸೂಲಿ ಮಾಡುವ ದಂಧೆಯಾಗಿದೆ” ಎಂದು ರಾಹುಲ್ ಆರೋಪಿಸಿದರು. “ದೇಶದ 22 ಲಕ್ಷ ಕುಟುಂಬಗಳಿಂದ ಸುಮಾರು 1.32 ಲಕ್ಷ ಕೋಟಿ ರೂಪಾಯಿಗಳನ್ನು ಕೋಚಿಂಗ್ ಮತ್ತು ಶಿಕ್ಷಣದ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಪಾವತಿಸುವ ಈ ಬೃಹತ್ ಮೊತ್ತವು ದೇಶದ ಸರ್ಕಾರದ ಒಟ್ಟು ಶಿಕ್ಷಣ ಬಜೆಟ್ಗೆ ಸಮಾನವಾಗಿದೆ” ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು.
ಈ ಸಂದರ್ಭದಲ್ಲೇ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ತಮ್ಮ ಭಾರತ್ ಜೋಡೋ ಯಾತ್ರೆಯನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, “4,000 ಕಿಲೋಮೀಟರ್ಗಳ ಪಾದಯಾತ್ರೆಯು ದೇಶದ ಯುವಕರ ನೈಜ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಹೇಗೆ ಸಹಕಾರಿಯಾಯಿತು. ಸಾವಿರಾರು ಯುವಕರು ಭೇಟಿಯಾಗಿ ದೇಶದಲ್ಲಿ ಉದ್ಯೋಗಾವಕಾಶಗಳ ಕೊರತೆ ಮತ್ತು ಪರೀಕ್ಷಾ ವ್ಯವಸ್ಥೆಯ ಮೇಲಿರುವ ನಂಬಿಕೆ ಕುಸಿಯುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು” ಎಂದು ಹೇಳಿದರು.




