ನಿರ್ಮಾಣ ಹಂತದಲ್ಲಿದ್ದ ಹನುಮನ ದೇವಾಲಯದ ಮೇಲ್ಛಾವಣಿ ಕುಸಿದು ಬಿದ್ದು, 7 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ದುರ್ಘಟನೆ ಮಹಾರಾಷ್ಟ್ರದ ಪರಭಣಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇಂದು (ಜೂ.20) ಮಧ್ಯಾಹ್ನ ಪರಭಣಿ ಜಿಲ್ಲೆಯ ಮಾನವತ್ ತಾಲೂಕಿನ ಯಶವಾಡಿ ಎಂಬಲ್ಲಿ ಈ ಅವಘಡ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಹನುಮಾನ್ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದು ನಡೆಯುತ್ತಿದ್ದಾಗ, ದೇವಾಲಯದ ಮೇಲ್ಛಾವಣಿ ಏಕಾಏಕಿ ಕುಸಿದುಬಿದ್ದಿದೆ. ಈ ವೇಳೆ ಅಲ್ಲಿ ನೆರೆದಿದ್ದ ಭಕ್ತರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿ, ಅವಶೇಷಗಳಡಿ ಸಿಲುಕಿದ್ದ ಭಕ್ತರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿವೆ. ಗಾಯಗೊಂಡಿರುವ 30 ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾನವತ್ ತಹಸೀಲ್ದಾರ್ ಪಾಂಡುರಂಗ ಮೊಚೆವಾಡ್ ಅವರ ಮಾಹಿತಿ ಪ್ರಕಾರ, ಗಾಯಾಳುಗಳ ಪೈಕಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ.
ಪರಭಣಿ ಜಿಲ್ಲೆಯ ಉಸ್ತುವಾರಿ ಸಚಿವೆ ಮೇಘನಾ ಬೋರ್ಡಿಕರ್ ಅವರು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಮೃತಪಟ್ಟವರ ಕುಟುಂಬಗಳಿಗೆ ಮತ್ತು ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಆರ್ಥಿಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಬಡವರ ಪಾಲಿಗೆ ಉಳ್ಳವರ ಕನ್ನ; ಯುಪಿಎಸ್ಸಿ ‘EWS’ ಮೀಸಲಾತಿಯಲ್ಲಿ ಶ್ರೀಮಂತರ ದರ್ಬಾರು
ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರ ಭಾವನೆಗಳನ್ನು ತಲುಪುವುದು ಅಥವಾ ರಾಜಕೀಯ ಮೈಲೇಜ್ ಪಡೆಯುವುದು ಒಂದು ಕಡೆಯಾದರೆ, ಅದರಾಚೆಗಿನ ಪ್ರಾಣದ ರಕ್ಷಣೆ ಮತ್ತು ಕನಿಷ್ಠ ಸುರಕ್ಷತೆಯ ಮಾನದಂಡಗಳನ್ನು ಪಾಲಿಸುವುದು ಹೊಣೆಗಾರಿಕೆ. ಅಮಾಯಕರ ಜೀವ ಬಲಿ ತೆಗೆದುಕೊಳ್ಳುತ್ತಿರುವ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳಬೇಕಿದೆ. ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲೂ, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ನಡೆದ ಆತುರದ ಉದ್ಘಾಟನೆಯ ಕುರಿತು ಇದೇ ರೀತಿಯ ಚರ್ಚೆಗಳು ಕೇಳಿಬಂದಿದ್ದವು. ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದಿರುವ ದೇವಾಲಯದ ಕಾಮಗಾರಿಯಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.




