ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿನ ಲೋಪದೋಷಗಳು ಹಾಗೂ ಮತದಾರರ ಹೆಸರು ಕೈಬಿಟ್ಟಿರುವುದರ ವಿರುದ್ಧ ಧ್ವನಿ ಎತ್ತಿದ ಸಾಮಾಹಿಕ ಹೋರಾಟಗಾರರು, ಕಾರ್ಯಕರ್ತರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿದೆ.
ಪ್ರಮುಖವಾಗಿ ‘ಫೆಮಿನಿಸ್ಟ್ಸ್ ಇನ್ ರೆಸಿಸ್ಟೆನ್ಸ್’ (Feminists in Resistance) ಸಂಘಟನೆಯ ಪ್ರಮುಖ ಸದಸ್ಯೆ ಮತ್ತು ಸಂಶೋಧಕಿ ಝೀಲುಮ್ ರಾಯ್, ‘ರೆವಲ್ಯೂಷನರಿ ಸ್ಟೂಡೆಂಟ್ಸ್ ಫ್ರಂಟ್’ (RSF) ಸಂಘಟನೆಯ ಪ್ರಧಾನ ಕಾರ್ಯದರ್ಶಿ ತಥಾಗತ ರಾಯ್ ಚೌಧರಿ ಹಾಗೂ ಶಿಕ್ಷಕ ಸುಕುಮಾರ್ ಕಯಾಲ್ ಅವರ ನಿವಾಸಗಳ ಮೇಲೆ ದಾಳಿ ನಡೆದಿದೆ.
ಈ ಕಾರ್ಯಕರ್ತರು ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆಯಡಿ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕೋಲ್ಕತ್ತಾದ ಪಾರ್ಕ್ ಸರ್ಕಸ್ ಸೇರಿದಂತೆ ಹಲವು ಕಡೆಗಳಲ್ಲಿ ನಡೆದ ಪ್ರತಿಭಟನೆಗಳನ್ನು ಮುನ್ನಡೆಸಿದ್ದರು.
ಇನ್ನು 2022ರಲ್ಲಿ ಜಾರ್ಖಂಡ್ನ ರಾಂಚಿಯಲ್ಲಿ ದಾಖಲಾಗಿದ್ದ ಮಾವೋವಾದಿ ಚಳವಳಿಯ ಮರುಸಂಘಟನೆಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ದಾಳಿ ನಡೆಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಹಾಗೆಯೇ ತಥಾಗತ ರಾಯ್ ಚೌಧರಿ ಅವರಿಗೆ ರಾಂಚಿಯಲ್ಲಿರುವ ಎನ್ಐಎ ಕಚೇರಿಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.
ಇನ್ನು ದಾಳಿಯ ವೇಳೆ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ತಿಳಿಸಿದ್ದಾರೆ. ಬದಲಿಗೆ, ಸಾರ್ವಜನಿಕವಾಗಿ ಲಭ್ಯವಿರುವ ಕೆಲವು ನಿಯತಕಾಲಿಕೆಗಳು ಎಸ್ಐಆರ್ ಮತ್ತು ಎನ್ಆರ್ಸಿ ವಿರುದ್ಧದ ಕರಪತ್ರಗಳು ಹಾಗೂ ರಾಜಕೀಯ ಕೈದಿಗಳ ಸಹಾಯಕ್ಕಾಗಿ ಹಣ ಸಂಗ್ರಹಿಸಿದ ರಶೀದಿ ಪುಸ್ತಕಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಎಸ್ಐಆರ್ ವಿಚಾರಣೆ ವೇಳೆ ತೀವ್ರ ಕಿರುಕುಳ ನೀಡಲಾಗಿದೆ: ಪಶ್ಚಿಮ ಬಂಗಾಳ ಸಚಿವೆ ಶಶಿ ಪಂಜಾ ಆರೋಪ
ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣಾ ಸಂಸ್ಥೆ (APDR) ಸೇರಿದಂತೆ ಹಲವು ಸಂಘಟನೆಗಳು ಈ ದಾಳಿಯನ್ನು ತೀವ್ರವಾಗಿ ಖಂಡಿಸಿವೆ. ಎಸ್ಐಆರ್ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಿರುವ ಜನಸಾಮಾನ್ಯರ ಮತ್ತು ಹೋರಾಟಗಾರರ ಧ್ವನಿಯನ್ನು ಅಡಗಿಸಲು ಕೇಂದ್ರ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದೆ.
ಇನ್ನು 2022ರಲ್ಲಿ ರಾಂಚಿಯಲ್ಲಿ ದಾಖಲಾಗಿದ್ದ ಮಾವೋವಾದಿ ಮರುಸಂಘಟನೆ ಪ್ರಕರಣದಲ್ಲಿ ಈಗಾಗಲೇ ಪ್ರಮುಖ ನಾಯಕರ ಬಂಧನವಾಗಿದೆ. ಆದರೆ ಇಷ್ಟು ವರ್ಷಗಳ ನಂತರ ಬಂಗಾಳದ ಈ ತಳಮಟ್ಟದ ಹೋರಾಟಗಾರರನ್ನು ಅದಕ್ಕೆ ಲಿಂಕ್ ಮಾಡಿರುವುದು ಕೇವಲ ತನಿಖಾ ಸಂಸ್ಥೆಗಳ ‘ಸಮರ್ಥನೆ’ಗಾಗಿ ಮಾತ್ರ. ಯಾವುದೇ ಗಂಭೀರ ಆಧಾರಗಳಿಲ್ಲದಿದ್ದರೂ, ಕಠಿಣವಾದ ಯುಎಪಿಎ ಕಾಯ್ದೆಯಡಿಯಿರುವ ಹಳೆಯ ಪ್ರಕರಣವನ್ನು ಬಳಸಿಕೊಂಡರೆ ನ್ಯಾಯಾಲಯಗಳಿಂದ ತಕ್ಷಣಕ್ಕೆ ಪರಿಹಾರ ಸಿಗುವುದಿಲ್ಲ, ಹೋರಾಟಗಾರರನ್ನು ದೀರ್ಘಕಾಲ ಸಿಲುಕಿಸಬಹುದು ಎಂಬ ತಂತ್ರ ಇದರ ಹಿಂದಿದೆ ಎಂದು APDR ದೂರಿದೆ.




