ದೇಶದ ಶಿಕ್ಷಣ ವಲಯದಲ್ಲಿ ಎದ್ದಿರುವ ಪೇಪರ್ ಲೀಕ್ ಬಿರುಗಾಳಿ ನಡುವೆ ಕೋಚಿಂಗ್ ರಾಜಧಾನಿ ಎಂದೇ ಕರೆಯಲಾಗುವ ರಾಜಸ್ಥಾನದ ಕೋಟಾ ನಗರದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಹಾರ್ಯಾಲಿ ನಡೆಸಲು ಮುಂದಾಗಿದ್ದಾರೆ. ರಾಹುಲ್ ಗಾಂಧಿಯ “ಎಕೋ ಆಫ್ ಸ್ಟೂಡೆಂಟ್ಸ್” ರ್ಯಾಲಿಯ ಹಳಿ ತಪ್ಪಿಸಲು ಬಿಜೆಪಿ ಕುತಂತ್ರ ಹೆಣೆಯುತ್ತಿದೆ.
ಮೇ 3ರಂದು ನೀಟ್ ಪರೀಕ್ಷೆ ನಡೆದಿದ್ದು, ಪರೀಕ್ಷೆಯಲ್ಲಿ ಅಕ್ರಮ ಮತ್ತು ಸೋರಿಕೆಯ ಆರೋಪಗಳು ಸಾಬೀತಾದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಇದೀಗ ಜೂನ್ 21ರಂದು ಮರುಪರೀಕ್ಷೆ ನಡೆಯಲಿದೆ. ಆದರೆ ಈ ವಿದ್ಯಮಾನವು ಲಕ್ಷಾಂತರ ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದೆ. ಈಗಾಗಲೇ ಒತ್ತಡಕ್ಕೆ ಒಳಗಾಗಿ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನು ಓದಿದ್ದೀರಾ? ಹೆಚ್ಚುತ್ತಿವೆ ‘ನೀಟ್’ ಆಕಾಂಕ್ಷಿಗಳ ಆತ್ಮಹತ್ಯೆ: ಕೋಟಾದಲ್ಲಿ ಮತ್ತೋರ್ವ ಯುವಕ ಸಾವು
ಇವೆಲ್ಲವುದರ ನಡುವೆ ಪರೀಕ್ಷೆಗೆ ಇನ್ನು ಕೇವಲ ಮೂರು ದಿನ ಬಾಕಿ ಇರುವಾಗ ರಾಹುಲ್ ಗಾಂಧಿ ಕೋಟಾದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡುತ್ತಿರುವುದು ಬಿಜೆಪಿಯನ್ನು ತೀವ್ರ ಆತಂಕಕ್ಕೆ ಈಡುಮಾಡಿದೆ. ರಾಹುಲ್ ಗಾಂಧಿ ಅವರ ಕಾರ್ಯಕ್ರಮವನ್ನು ಹಳಿ ತಪ್ಪಿಸಲು ಬಿಜೆಪಿ ಮತ್ತು ಸ್ಥಳೀಯ ಆಡಳಿತ ವ್ಯವಸ್ಥಿತ ಪ್ರಯತ್ನಗಳನ್ನು ನಡೆಸುತ್ತಿವೆ.
ಕೋಟಾದಲ್ಲೇ ಏಕೆ ರಾಹುಲ್ ರ್ಯಾಲಿ?
ರಾಜಸ್ಥಾನದ ಕೋಟಾ ನಗರವನ್ನು ಕೇವಲ ಒಂದು ನಗರವಾಗಿ ನೋಡಲು ಸಾಧ್ಯವಿಲ್ಲ. ಇದು ದೇಶದ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳ ಕನಸಿನ ಕಾರ್ಖಾನೆ ಎಂದರೆ ತಪ್ಪಾಗಲಾರದು. ಕೋಟಾವನ್ನು ದೇಶದ “ಕೋಚಿಂಗ್ ರಾಜಧಾನಿ” ಎಂದೇ ಕರೆಯಲಾಗುತ್ತದೆ. ಇಲ್ಲಿ ಸಾವಿರಾರು ಸಣ್ಣ-ದೊಡ್ಡ ಕೋಚಿಂಗ್ ಸೆಂಟರ್ಗಳಿದ್ದು, ಪ್ರತಿ ವರ್ಷ ಐಐಟಿ, ಜೆಇಇ ಮತ್ತು ನೀಟ್ನಂತಹ ಕಠಿಣ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ದೇಶದ ಮೂಲೆ ಮೂಲೆಗಳಿಂದ ಸುಮಾರು 2 ರಿಂದ 2.5 ಲಕ್ಷ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಕೋಟಾದ ಆರ್ಥಿಕತೆಯೇ ಈ ವಿದ್ಯಾರ್ಥಿಗಳು ಮತ್ತು ಇಲ್ಲಿನ ಕೋಚಿಂಗ್ ಉದ್ಯಮದ ಮೇಲೆ ನಿಂತಿದೆ.
ಇದರೊಂದಿಗೆ ಕೋಟಾ ನಗರಕ್ಕೆ ಮತ್ತೊಂದು ಕರಾಳ ಮುಖವೂ ಇದೆ. ಇಲ್ಲಿನ ಅತ್ಯಂತ ಕಠಿಣ ಸ್ಪರ್ಧೆ, ಪೋಷಕರ ಅತಿಯಾದ ನಿರೀಕ್ಷೆ ಹಾಗೂ ಕೋಚಿಂಗ್ ಸಂಸ್ಥೆಗಳ ಹಗಲಿರುಳು ನಡೆಸುವ ಒತ್ತಡದ ತರಬೇತಿಯಿಂದಾಗಿ ವಿದ್ಯಾರ್ಥಿಗಳು ತೀವ್ರ ಖಿನ್ನತೆಗೆ ಒಳಗಾಗುತ್ತಾರೆ. ಪ್ರತಿ ವರ್ಷ ಹತ್ತಾರು ವಿದ್ಯಾರ್ಥಿಗಳು ಇಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೀಗ ಪೇಪರ್ ಲೀಕ್ನಂತಹ ಹಗರಣಗಳು ಈ ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿವೆ. ಅದರಿಂದಾಗಿ ಇಲ್ಲೇ ರಾಹುಲ್ ಗಾಂಧಿ ರ್ಯಾಲಿ ನಡೆಸುತ್ತಿದ್ದಾರೆ.
ಆದರೆ ಈ ರ್ಯಾಲಿಯ ಹಳಿ ತಪ್ಪಿಸಲು ಬಿಜೆಪಿ ತಂತ್ರ ನಡೆಸುತ್ತಿದೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರ ಪ್ರಕಾರ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ (ಕೋಟಾ ಇವರದೇ ಕ್ಷೇತ್ರ) ಅವರ ಕಚೇರಿಗೆ ನಿಕಟವಾಗಿರುವ ಕೆಲವರು ಸ್ಥಳೀಯ ಕೋಚಿಂಗ್ ಸಂಸ್ಥೆಗಳು, ಪೇಯಿಂಗ್ ಗೆಸ್ಟ್ (PG) ಮಾಲೀಕರು ಮತ್ತು ಹಾಸ್ಟೆಲ್ ನಡೆಸುವವರ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಸಂವಾದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸದಂತೆ ಮತ್ತು ಕಳುಹಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪರೋಕ್ಷವಾಗಿ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪಗಳಿವೆ.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ಸೇರಿ 25 ಕಾಂಗ್ರೆಸ್ ಸಂಸದರಿಗೆ ಗುಂಡಿಕ್ಕುವ ಬೆದರಿಕೆ ಹಾಕಿದಾತನ ಬಂಧನ
ಇನ್ನು ಕೋಟಾ ನಗರದಾದ್ಯಂತ ರಾಹುಲ್ ಗಾಂಧಿ ಅವರ ಕಾರ್ಯಕ್ರಮವನ್ನು ಸ್ವಾಗತಿಸಲು ಹಾಕಲಾಗಿದ್ದ ಬ್ಯಾನರ್ಗಳು ಮತ್ತು ಹೋರ್ಡಿಂಗ್ಸ್ಗಳನ್ನು ಸ್ಥಳೀಯ ಮುನ್ಸಿಪಲ್ ಆಡಳಿತವು ರಾತ್ರೋರಾತ್ರಿ ತೆರವುಗೊಳಿಸಿದೆ. ಅದೇ ಸಮಯದಲ್ಲಿ, ಬಿಜೆಪಿ ಕಾರ್ಯಕ್ರಮಗಳ ಬ್ಯಾನರ್ಗಳಿಗೆ ಯಾವುದೇ ಅಡ್ಡಿ ಮಾಡದೆ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ಸುಧಾಂಶು ತ್ರಿವೇದಿ ಮತ್ತು ಗೌರವ್ ಭಾಟಿಯಾ ಅವರು ದೆಹಲಿ ಹಾಗೂ ಕೋಟಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಾಹುಲ್ ಗಾಂಧಿ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. “ಮರು ಪರೀಕ್ಷೆಗೆ ಇನ್ನು ಕೇವಲ ಮೂರು ದಿನಗಳಿರುವಾಗ ರಾಜಕೀಯ ಪ್ರವಾಸ ಕೈಗೊಂಡು ರಾಹುಲ್ ಗಾಂಧಿ ವಿದ್ಯಾರ್ಥಿಗಳ ಗಮನವನ್ನು ಕೆಡಿಸುತ್ತಿದ್ದಾರೆ, ಅವರ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ” ಎಂದು ಬಿಜೆಪಿ ಬಿಂಬಿಸುತ್ತಿದೆ. ಆ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಕಾಂಗ್ರೆಸ್ ರ್ಯಾಲಿ ಬಗ್ಗೆ ನಕಾರಾತ್ಮಕ ಭಾವನೆ ಮೂಡಿಸಲು ಬಿಜೆಪಿ ಹವಣಿಸುತ್ತಿದೆ.
ಒಂದೆಡೆ ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ 89ಕ್ಕೂ ಹೆಚ್ಚು ಪೇಪರ್ ಲೀಕ್ ಆಗಿ ಯುವಕರ ಭವಿಷ್ಯ ಹರಾಜಾಗಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರಮಟ್ಟದ ಆಂದೋಲನವನ್ನು ಕೋಟಾದಿಂದಲೇ ಆರಂಭಿಸುತ್ತಿದ್ದರೆ; ಇನ್ನೊಂದೆಡೆ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸರ್ಕಾರವೇ ಮರು ಪರೀಕ್ಷೆ ನಡೆಸುತ್ತಿರುವಾಗ ಕಾಂಗ್ರೆಸ್ ‘ಅಗ್ಗದ ರಾಜಕೀಯ’ ಮಾಡುತ್ತಿದೆ ಎಂದು ಬಿಂಬಿಸಿ ಇಡೀ ಹೋರಾಟದ ತೇಜೋವಧೆ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ.




