“ಸುರಕ್ಷಿತ ಪಾದಚಾರಿ ಮಾರ್ಗಗಳಲ್ಲಿ ಕಳವಳವಿಲ್ಲದೆ ನಡೆಯುವುದು ನಾಗರಿಕರ ಮೂಲಭೂತ ಹಕ್ಕು” ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶವನ್ನು ಪ್ರಕಟಿಸಿದೆ.
ವ್ಯಕ್ತಿಯೊಬ್ಬರು ತಮ್ಮ 5 ವರ್ಷದ ಮಗನನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ನೀರಿನ ಟ್ಯಾಂಕರ್ ಲಾರಿಯೊಂದು ಮಗುವಿನ ಮೇಲೆ ಹರಿದು, ಮಗು ಸ್ಥಳದಲ್ಲೇ ಸಾವನ್ನಪ್ಪಿತ್ತು. ಈ ಪ್ರಕರಣದ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಇದನ್ನೂ ಓದಿ: ಆರು ದಶಕಗಳ ನರಕಯಾತ್ರೆಗೆ ಮುಕ್ತಿ: ಸಿಗಂದೂರು ಸೇತುವೆಗೆ ದೇಶದ 2ನೇ ಸ್ಥಾನದ ಖ್ಯಾತಿ
ಈ ಘಟನೆ ನಡೆದ ಸ್ಥಳದಲ್ಲಿ ಯಾವುದೇ ಪಾದಚಾರಿ ಮಾರ್ಗ ಅಥವಾ ಕ್ರಾಸಿಂಗ್ ಇರಲಿಲ್ಲ. ಮಗುವಿನ ಕುಟುಂಬಕ್ಕೆ ₹11.44 ಲಕ್ಷ ಪರಿಹಾರ ಘೋಷಿಸುವುದರ ಜತೆಗೆ ದೇಶಾದ್ಯಂತ ಪಾದಚಾರಿಗಳ ಸುರಕ್ಷತೆಗೆ ಹೊಸ ಕಾನೂನು ತರಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಇನ್ನು ಅಪಘಾತ ಪರಿಹಾರ ನ್ಯಾಯಾಧಿಕರಣ (MACT) ನೀಡಿದ್ದ ರೂ. 7.82 ಲಕ್ಷ ಪರಿಹಾರವನ್ನು ಹೈಕೋರ್ಟ್ ರೂ. 4.70 ಲಕ್ಷಕ್ಕೆ ಇಳಿಸಿತ್ತು. ಇದನ್ನು ತೀವ್ರವಾಗಿ ಖಂಡಿಸಿದ ಸುಪ್ರೀಂ ಕೋರ್ಟ್, ಪರಿಹಾರವನ್ನು ರೂ. 11,44,628 ಕ್ಕೆ ಹೆಚ್ಚಿಸಿ ಆದೇಶಿಸಿದೆ. ಅಲ್ಲದೆ ಇಂತಹ ದುರಂತಗಳಿಗೆ ರಸ್ತೆ ವ್ಯವಸ್ಥೆಯೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದೆ.
“ರಸ್ತೆಯ ಮೇಲೆ ಮೋಟಾರು ವಾಹನಗಳು ಚಲಿಸುವುದಕ್ಕಿಂತ, ಪಾದಚಾರಿಗಳು ಸುರಕ್ಷಿತವಾಗಿ ನಿರ್ಮಿಸಲಾದ ಪಾದಚಾರಿ ಮಾರ್ಗಗಳಲ್ಲಿ ನಡೆಯುವ ಹಕ್ಕಿಗೆ ಮೊದಲ ಆದ್ಯತೆ ಇರಬೇಕು. ವಾಹನಗಳ ಸವಲತ್ತಿಗಿಂತ ನಾಗರಿಕರ ನಡಿಗೆಯ ಹಕ್ಕು ಮಿಗಿಲಾದದ್ದು.” ಎಂದು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರು ತೀರ್ಪಿನಲ್ಲಿ ಬರೆದಿದ್ದಾರೆ.
ಸಂವಿಧಾನದ ವಿಧಿ 19(1)(d) ದೇಶಾದ್ಯಂತ ಮುಕ್ತವಾಗಿ ಸಂಚರಿಸುವ ಹಕ್ಕು ನೀಡುತ್ತದೆ. ವಿಧಿ 21 ಗೌರವಯುತವಾಗಿ ಬದುಕುವ ಮತ್ತು ಜೀವಿಸುವ ಹಕ್ಕು ನೀಡುತ್ತದೆ. ನಡಿಗೆ ಎಂಬುದು ಮಾನವನ ಅತ್ಯಂತ ಸರಳ ಮತ್ತು ದೈನಂದಿನ ಪ್ರಕ್ರಿಯೆಯಾಗಿದ್ದು, ಇದು ನೇರವಾಗಿ ಜೀವಿಸುವ ಹಕ್ಕಿನೊಂದಿಗೆ ಬೆಸೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇನ್ನು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಸಿಕೊಂಡಿದ್ದಾರೆ. “ನಮ್ಮ ಇತಿಹಾಸದಲ್ಲಿ ನಡಿಗೆಗೆ ಆಳವಾದ ಸಾಮಾಜಿಕ ಮತ್ತು ರಾಜಕೀಯ ಮಹತ್ವವಿದೆ. ದಂಡಿ ಯಾತ್ರೆಯಂತಹ ನಡಿಗೆಗಳೇ ನಮ್ಮ ಸ್ವಾತಂತ್ರ್ಯದ ಆಶಯಗಳನ್ನು ಜಾಗೃತಗೊಳಿಸಿದವು. ನಡಿಗೆ ಕೇವಲ ಚಲನೆಯಲ್ಲ, ಅದು ಅಭಿವ್ಯಕ್ತಿ ಸ್ವಾತಂತ್ರ್ಯವೂ ಹೌದು” ಎಂದು ಕೋರ್ಟ್ ಮಾರ್ಮಿಕವಾಗಿ ಹೇಳಿದೆ.
ಹಾಗೆಯೇ ಈ ಹಕ್ಕನ್ನು ಹೇಗೆ ಕಾಯ್ದೆಯಾಗಿಸಬಹುದು ಎಂಬುದನ್ನು ಪರಿಶೀಲಿಸಲು ಭಾರತೀಯ ಕಾನೂನು ಆಯೋಗಕ್ಕೆ ತೀರ್ಪಿನ ಪ್ರತಿಯನ್ನು ರವಾನಿಸಲಾಗಿದೆ.




