ಗದಗ ಜಿಲ್ಲೆಯ ಹಿರಿಯ ಶಾಸಕ ಎಚ್ ಕೆ ಪಾಟೀಲ್ ಮತ್ತು ರೋಣ ಶಾಸಕ ಜಿ ಎಸ್ ಪಾಟೀಲ್ ಅವರ ನಡುವಿನ ಸಚಿವ ಸ್ಥಾನಕ್ಕಾಗಿನ ಪೈಪೋಟಿ ನಡೆಯುತ್ತಿರುವುದು, ರಾಜ್ಯ ಕಾಂಗ್ರೆಸ್ನಲ್ಲಿ ಜಿಲ್ಲಾ ಮತ್ತು ವ್ಯಕ್ತಿ ನಿಷ್ಠೆಯ ರಾಜಕೀಯವನ್ನು ಮತ್ತೊಮ್ಮೆ ಬಯಲು ಮಾಡಿದೆ. ಕಾರ್ಯಕರ್ತರು ಹಾಗೂ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆಗಳು, ಅಭಿಯಾನಗಳು ಪಕ್ಷದ ವರಿಷ್ಠರ ಮೇಲೆ ಗಣನೀಯ ಒತ್ತಡವನ್ನು ಹೇರಿದ್ದು, ಡಿ ಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರಕ್ಕೆ ಸವಾಲು ಒಡ್ಡುತ್ತಿವೆ.
ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಿ ನೂತನ ಸಚಿವ ಸಂಪುಟ ರಚನೆ ಮತ್ತು ಸಂಪುಟ ವಿಸ್ತರಣೆ ವೇಳೆ ಅನೇಕ ಚರ್ಚೆಗಳಾಗುತ್ತಿರುವಾಗಲೇ ಗದಗ ಜಿಲ್ಲೆಯ ಇಬ್ಬರು ನಾಯಕರ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸಿದಿದೆ.
ಸಿದ್ದರಾಮಯ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ಪ್ರಭಾವಿ ಹಾಗೂ ಪ್ರಮುಖ ಸಚಿವರಾಗಿ ಗುರುತಿಸಿಕೊಂಡಿದ್ದ ಎಚ್ ಕೆ ಪಾಟೀಲ್ ಅವರಿಗೆ ನೂತನ ಸಿಎಂ ಡಿ ಕೆ ಶಿವಕುಮಾರ ಸಚಿವ ಸಂಪುಟದ ಮೊದಲ ಹಂತದಲ್ಲಿ ಸಚಿವ ಸ್ಥಾನ ದೊರೆತಿಲ್ಲ.
ಗದಗ ಶಾಸಕ ಎಚ್ ಕೆ ಪಾಟೀಲ್ ಮತ್ತು ರೋಣ ಶಾಸಕ ಜಿ ಎಸ್ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಇಬ್ಬರು ಶಾಸಕರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಗಮನ ಸೆಳೆಯಲು ವಿವಿಧ ರೀತಿಯ ಪ್ರತಿಭಟನೆ, ಅಭಿಯಾನಗಳನ್ನು ನಡೆಸಿದ್ದು, ಕಾಂಗ್ರೆಸ್ ಪಕ್ಷದ ವರಿಷ್ಠರ ಮೇಲೆ ಒತ್ತಡ ತರುತ್ತಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಎಚ್ ಕೆ ಪಾಟೀಲರು ಪ್ರಭಾವಿ ನಾಯಕರಾಗಿದ್ದು, ಕಾನೂನು ಮತ್ತು ಸಂಸದೀಯ ಸಚಿವರಾಗಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ವಿವಿಧ ಖಾತೆಗಳನ್ನು ನಿಭಾಯಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ರಾಜಕಾರಣಿ ಹಾಗೂ ಮುತ್ಸದ್ದಿ ನಾಯಕರಾಗಿ ಗುರುತಿಸಿಕೊಂಡಿದ್ದ ಎಚ್ ಕೆ ಪಾಟೀಲ್ ಅವರಿಗೆ ಮೊದಲ ಹಂತದ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಅಪಾರ ನಿರೀಕ್ಷೆ ಇತ್ತು.
ಹೊಸ ಸಚಿವ ಸಂಪುಟದಲ್ಲಿ ಎಚ್ ಕೆ ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗಬೇಕು. ಉಪಮುಖ್ಯಮಂತ್ರಿ ಮಾಡಬೇಕೇಂದು ಜಿಲ್ಲೆಯ ರಾಜಕೀಯ ದುರೀಣರು, ವಿವಿಧ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಮೊದಲ ಹಂತದ ಸಚಿವ ಸಂಪುಟದಲ್ಲಿ ಎಚ್ ಕೆ ಪಾಟೀಲ್ ಅವರ ಹೆಸರು ಇಲ್ಲದಿರುವುದರಿಂದ ಬೆಂಬಲಿಗರು, ಅಭಿಮಾನಿಗಳು, ಸಮುದಾಯದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ಎರಡನೇ ಹಂತದಲ್ಲಾರೂ ಸಚಿವ ಸ್ಥಾನ ಸಿಗಬೇಕು ಎಂದು ಆಗಹಿಸಿದ್ದಾರೆ.
2024ರಲ್ಲಿ ವಿವಿಧ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮಕ್ಕೆಂದು ರೋಣ ಕ್ಷೇತ್ರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯನವರು ಜಿ ಎಸ್ ಪಾಟೀಲ್ ಅವರು ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ ಎಂದು ಹೇಳಿದ್ದರು. ಈಗ ಡಿ ಕೆ ಶಿವಕುಮಾರ ಅವರು ನೂತನವಾಗಿ ಸಿಎಂ ಆದ ನಂತರ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕೆ ಶಾಸಕ ಜಿ ಎಸ್ ಪಾಟೀಲ ಬೆಂಬಲಿಗರು, ಕಾರ್ಯಕರ್ತರು ಸಚಿವ ಸ್ಥಾನ ಕೊಡಲೇಬೇಕೇಂದು ರೋಣ ಕ್ಷೇತ್ರದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಜಿ ಎಸ್ ಪಾಟೀಲ್ ಅವರು ರೋಣ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅನುಭವ ಹೊಂದಿದ ಹಿರಿಯ ರಾಜಕಾರಣಿಗಳಾಗಿದ್ದು, ಈ ಬಾರಿಯಾದಾರೂ ಜಿ ಎಸ್ ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗಲೇಬೇಕೇಂದು ಹಠಕ್ಕೆ ಬಿದ್ದ ಅವರ ಬೆಂಬಲಿಗರು, ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ, ತುಮಕೂರಿನಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಹೊರಟು ವರಿಷ್ಟರ ಮೇಲೆ ಒತ್ತಡ ತರುತ್ತಿದ್ದಾರೆ.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಯುವ ಮುಖಂಡ ಸಿದ್ದು ಪಾಟೀಲ್ ಅವರು ಈ ದಿನ.ಕಾಮ್ ಜತೆಗೆ ಮಾತನಾಡಿ, “ಅಖಂಡ ಕರ್ನಾಟಕ್ಕೆ ಎಚ್ ಕೆ ಪಾಟೀಲರು ಕೊಡುಗೆ ನೀಡಿದ್ದು, ಈ ಸಚಿವ ಸಂಪುಟದಲ್ಲಿ ಕಡೆಗಣಿಸಿರುವುದು ನೋವಿನ ಸಂಗತಿ. ಎರಡನೇ ಹಂತದ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡುವ ಜೊತೆಗೆ ಸಚಿವ ಸ್ಥಾನ ಕೊಟ್ಟು, ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಬೇಕು. ಮತ್ತೆ ಈಗ ಒಂದೊಂದು ಜಿಲ್ಲೆಗೆ ಎರಡು ಸಚಿವ ಸ್ಥಾನ ಕೊಡುತ್ತಿದ್ದಾರೆ. ಎಚ್ ಕೆ ಪಾಟೀಲ್ ಅವರ ಜತೆಗೆ ರೋಣ ಶಾಸಕ ಜಿ ಎಸ್ ಪಾಟೀಲರಿಗೂ ಸಚಿವ ಸ್ಥಾನ ಕೊಡಲಿ. ಆಗ ಗದಗ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಜಿ ಎಸ್ ಪಾಟೀಲರೂ ಕೂಡ ಹಿರಿಯ ನಾಯಕರಾಗಿದ್ದು, ಸಾಕಷ್ಟು ಕೆಲಸ ಮಾಡಿದ್ದಾರೆ. ಇಬ್ಬರಿಗೂ ಸಚಿವ ಸ್ಥಾನ ನೀಡಿದರೆ ಜಿಲ್ಲೆಗೆ ಹೆಚ್ಚು ಅನುಕೂಲವಾಗಲಿದೆ” ಎಂದು ಪ್ರತಿಕ್ರಿಯೆ ನೀಡಿದರು.

ಗದಗ ಜಿಲ್ಲೆಯ ಹಿರಿಯ ಶಾಸಕ ಎಚ್ ಕೆ ಪಾಟೀಲ್ ಮತ್ತು ರೋಣ ಶಾಸಕ ಜಿ ಎಸ್ ಪಾಟೀಲ್ ಅವರ ನಡುವಿನ ಸಚಿವ ಸ್ಥಾನಕ್ಕಾಗಿನ ಪೈಪೋಟಿ ನಡೆಯುತ್ತಿರುವುದು, ರಾಜ್ಯ ಕಾಂಗ್ರೆಸ್ನಲ್ಲಿ ಜಿಲ್ಲಾ ಮತ್ತು ವ್ಯಕ್ತಿ ನಿಷ್ಠೆಯ ರಾಜಕೀಯವನ್ನು ಮತ್ತೊಮ್ಮೆ ಬಯಲು ಮಾಡಿದೆ. ಕಾರ್ಯಕರ್ತರು ಹಾಗೂ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆಗಳು, ಅಭಿಯಾನಗಳು ಪಕ್ಷದ ವರಿಷ್ಠರ ಮೇಲೆ ಗಣನೀಯ ಒತ್ತಡವನ್ನು ಹೇರಿದ್ದು, ಡಿ ಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರಕ್ಕೆ ಸವಾಲು ಒಡ್ಡುತ್ತಿವೆ.
ಇದನ್ನೂ ಓದಿದ್ದೀರಾ? ಪರಿಷತ್ನಲ್ಲಿ ಬಹುಮತ: ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ವಾಪಸಾತಿಗೆ ಸರ್ಕಾರ ನಿರ್ಧಾರ ಸಾಧ್ಯತೆ
ಸಚಿವ ಸಂಪುಟ ರಚನೆಯಲ್ಲಿ ಜಾತಿ, ಪ್ರದೇಶ ಮತ್ತು ಅನುಭವದ ಸಮತೋಲನ ಸಾಧಿಸುವುದು ಡಿ ಕೆ ಶಿವಕುಮಾರ್ ಅವರಿಗೆ ಪ್ರಮುಖ ಪರೀಕ್ಷೆಯಾಗಿದೆ. ಗದಗ ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ನೀಡುವ ಮೂಲಕ ಪಕ್ಷದ ಐಕ್ಯತೆಯನ್ನು ಕಾಯ್ದುಕೊಳ್ಳುವುದರ ಜತೆಗೆ, 2028ರ ಚುನಾವಣೆಗೆ ಬಲವಾದ ಬೆಂಬಲವನ್ನು ತಯಾರಿಸುವ ನಿಟ್ಟಿನಲ್ಲಿ ಈ ನಿರ್ಧಾರಗಳು ಮಹತ್ವದ್ದಾಗುತ್ತವೆ. ಈ ಹಿನ್ನೆಲೆಯಲ್ಲಿ ಎರಡನೇ ಹಂತದ ಸಚಿವ ಸಂಪುಟದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



