ಕೇರಳದಲ್ಲಿ ಸಂಚಾರ ಆರಂಭಿಸಿದ ಒಂದು ವಾರದೊಳಗೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ.
ಕಾಸರಗೋಡಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಸೋಮವಾರ ಸಂಜೆ 5 ಗಂಟೆಯ ವೇಳೆಗೆ, ಮಲಪ್ಪುರಂ ಜಿಲ್ಲೆಯ ತಿರುನಾವಯ ಮತ್ತು ತಿರೂರ್ ನಡುವೆ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಸೆಮಿ ಹೈಸ್ಪೀಡ್ ರೈಲಿನ ಸಿ4 ಕೋಚ್ನ 62 ಮತ್ತು 63 ಆಸನಗಳ ಕಿಟಕಿಗಳ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದಾರೆ. ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಗಾಜಿನ ಕಿಟಕಿಯಲ್ಲಿ ಬಿರುಕುಗಳನ್ನು ಕಂಡು ಲೊಕೊ ಪೈಲಟ್ಗೆ ಮಾಹಿತಿ ನೀಡಿದ್ದರು. ಅದಾಗಿಯೂ ರೈಲು ಪ್ರಯಾಣ ಮುಂದುವರಿಸಿತ್ತು.
ಈ ಸುದ್ದಿ ಓದಿದ್ದೀರಾ?: 2002ರ ಗುಜರಾತ್ ಗಲಭೆ ಆರೋಪಿಗಳೇಕೆ ಸರದಿಯಂತೆ ನ್ಯಾಯಾಲಯದಿಂದ ಬಿಡುಗಡೆಯಾಗುತ್ತಿದ್ದಾರೆ?
ಪಾಲಕ್ಕಾಡ್ ಜಿಲ್ಲೆಯ ಶೊರ್ನೂರ್ಗೆ ಈ ರೈಲು ಆಗಮಿಸಿದ ವೇಳೆ, ರೈಲ್ವೇ ರಕ್ಷಣಾ ಪಡೆ ಗಾಜಿನಲ್ಲಿ ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಿದ್ದು, ಮಲಪ್ಪುರಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಲ್ಲು ತೂರಾಟ ನಡೆಸಲಾದ ಪ್ರದೇಶದಲ್ಲಿ ಶೋಧಕಾರ್ಯ ನಡೆಸಿದ್ದಾರೆ. ರೈಲ್ವೆ ಪೊಲೀಸರು ಸಹ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಏಪ್ರಿಲ್ 25 ರಂದು ಎರಡು ದಿನಗಳ ಭೇಟಿಗಾಗಿ ಕೇರಳಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜಧಾನಿ ತಿರುವನಂತಪುರನಲ್ಲಿ ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದ್ದರು.
ತೆಲಂಗಾಣ, ಬಿಹಾರ, ಉತ್ತರ ಪ್ರದೇಶ, ಛತ್ತೀಸ್ಗಢ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಮೇಲೆ ಕಲ್ಲು ತೂರಾಟದ ಘಟನೆಗಳು ಈ ಹಿಂದೆ ನಡೆದಿದ್ದವು.