- ಸಚಿನ್ ಚೌಧರಿ ವಿರುದ್ಧ ಅಕ್ಷಿತ್ ಅಗರ್ವಾಲ್ ದೂರು
- ಹಿಂದೂ ಧರ್ಮದ ವಿರುದ್ಧವೂ ಸಚಿನ್ ಟೀಕೆ ಆರೋಪ
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಸಂಬಂಧ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಚೌಧರಿ ವಿರುದ್ಧ ರಾಜ್ಯ ಪೊಲೀಸರು ಶನಿವಾರ (ಏಪ್ರಿಲ್ 1) ಪ್ರಕರಣ ದಾಖಲಿಸಿದ್ದಾರೆ.
ಬಿಜೆಪಿ ಯುವ ಘಟಕದ ನಾಯಕ ಅಕ್ಷಿತ್ ಅಗರ್ವಾಲ್ ನೀಡಿದ ದೂರಿನ ಆಧಾರದಲ್ಲಿ ಸಂಭಾಲ್ ಕೊತ್ವಾಲಿ ಠಾಣೆಯಲ್ಲಿ ಸಚಿನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ತಿಳಿಸಿದ್ದಾರೆ.
ಸಂಭಾಲ್ನಲ್ಲಿ ಶುಕ್ರವಾರ (ಮಾರ್ಚ್ 31) ಮಾಧ್ಯಮಗೋಷ್ಠಿಯೊಂದರಲ್ಲಿ ಕಾಂಗ್ರೆಸ್ ನಾಯಕ ಸಚಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಅಕ್ಷಿತ್ ಸುದ್ದಿಗಾರರಿಗೆ ತಿಳಿಸಿದರು.
ಅಕ್ಷಿತ್ ಅಗರ್ವಾಲ್ ಅವರು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಜಿಲ್ಲಾ ಘಟಕದ ಉಸ್ತುವಾರಿಯಾಗಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಸಚಿನ್ ಅವರು ಅದಾನಿ ಹಿಂಡನ್ಬರ್ಗ್ ವರದಿ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಚಿನ್ ಹೇಳಿದ ಅಸಭ್ಯ ಮತ್ತು ಆಕ್ಷೇಪಾರ್ಹ ನುಡಿಗಳ ದೃಶ್ಯಾವಳಿಯ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಈ ಸುದ್ದಿ ಓದಿದ್ದೀರಾ? ಬಾಂಗ್ಲಾದೇಶದಲ್ಲಿ ವಿವಾದ ಸೃಷ್ಟಿಸಿರುವ ಅದಾನಿ ವಿದ್ಯುತ್ ಒಪ್ಪಂದ
ಸಚಿನ್ ಚೌಧರಿ ಅವರು ಮೋದಿ ಅವರನ್ನು ಟೀಕಿಸುತ್ತ ಹಿಂದೂ ಧರ್ಮದ ಕುರಿತೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ಅಕ್ಷಿತ್ ಆರೋಪಿಸಿದರು.
ಸಚಿನ್ ಅವರ ಆಕ್ಷೇಪಾರ್ಹ ಹೇಳಿಕೆಗಳ ವಿಡಿಯೊ ತುಣುಕನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಅಕ್ಷಿತ್ ಅಗರ್ವಾಲ್ ಹೇಳಿದರು.