- ʼದಹಿʼಯ ಕ್ರೆಡಿಟ್ ಪಡೆಯಲು ಬಿಜೆಪಿ ಹವಣಿಸುತ್ತಿರುವುದು ಪರಮಹಾಸ್ಯʼ
- ʼಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಒಮ್ಮೆಯೂ ಪ್ರಶ್ನಿಸದ ಬಿಜೆಪಿʼ
ದಹಿ ವಿವಾದ ಇಟ್ಟಕೊಂಡು ಬಿಜೆಪಿಯನ್ನು ಕುಟುಕಿರುವ ಕಾಂಗ್ರೆಸ್, “ಇನ್ಯಾರದ್ದೋ ಕೂಸಿಗೆ ಕುಲಾವಿ ಹೊಲಿಸುವಂತಹ ʼಭಂಡ ಬಾಳುʼ ಬದುಕಲು ಇವರಿಗೆ ಮಾತ್ರ ಸಾಧ್ಯ” ಎಂದಿದೆ.
ಮೊಸರು ಪ್ಯಾಕೆಟ್ ಮೇಲೆ ಹಿಂದಿ ಪದ ‘ದಹಿ’ ಎಂದು ನಮೂದಿಸುವಂತೆ ಹೊರಡಿಸಿದ್ದ ನಿರ್ದೇಶನಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್ಎಸ್ಎಸ್ಎಐ) ತನ್ನ ಆದೇಶವನ್ನು ಗುರುವಾರ ವಾಪಸ್ ಪಡೆದಿದೆ.
ಆದೇಶ ವಾಪಸ್ ಪಡೆದ ಬೆನ್ನಲ್ಲೇ ಬಿಜೆಪಿ “ನಮ್ಮ ಮನವಿಗೆ ಸ್ಪಂದಿಸಿ ನೀಡಿದ್ದ ಆದೇಶವನ್ನು ಹಿಂಪಡೆದಿದ್ದಕ್ಕೆ ಎಫ್ಎಸ್ಎಸ್ಎಐಗೆ ಧನ್ಯವಾದಗಳು” ಎಂದು ತಿಳಿಸಿ ಟ್ವೀಟ್ ಮಾಡಿದೆ.
ಈ ಸುದ್ದಿ ಓದಿದ್ದೀರಾ? ‘ದಹಿ’ ವಿವಾದ | ಕರ್ನಾಟಕ, ತಮಿಳುನಾಡು ಆಕ್ರೋಶಕ್ಕೆ ಮಣಿದ ಎಫ್ಎಸ್ಎಸ್ಎಐ; ಪರಿಷ್ಕರಿಸಿ ಆದೇಶ
ಬಿಜೆಪಿಯ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ʼದಹಿʼ ಹೇರಿಕೆಯ ವಿರುದ್ಧ ಯಾವೊಬ್ಬ ಬಿಜೆಪಿಗರೂ ಬಾಯಿ ಬಿಡಲಿಲ್ಲ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಒಮ್ಮೆಯೂ ಪ್ರಶ್ನಿಸದೆ, ಗುಲಾಮರಂತೆ ಸಮರ್ಥಿಸುವ ಬಿಜೆಪಿ ಈಗ ʼದಹಿʼಯ ಕ್ರೆಡಿಟ್ ಪಡೆಯಲು ಹವಣಿಸುತ್ತಿರುವುದು ಪರಮಹಾಸ್ಯ” ಎಂದು ಕಿಚಾಯಿಸಿದೆ.
ಇನ್ಯಾರದ್ದೋ ಕೂಸಿಗೆ ಕುಲಾವಿ ಹೊಲಿಸುವಂತಹ “ಬಂಡ ಬಾಳು” ಬದುಕಲು @BJP4Karnataka ಗೆ ಮಾತ್ರ ಸಾಧ್ಯ!
— Karnataka Congress (@INCKarnataka) March 31, 2023
“ದಹಿ” ಹೇರಿಕೆಯ ವಿರುದ್ಧ ಯಾವೊಬ್ಬ ಬಿಜೆಪಿಗರೂ ಬಾಯಿ ಬಿಡಲಿಲ್ಲ,
ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಒಮ್ಮೆಯೂ ಪ್ರಶ್ನಿಸದೆ, ಗುಲಾಮರಂತೆ ಸಮರ್ಥಿಸುವ ಬಿಜೆಪಿ ಈಗ “ದಹಿ”ಯ ಕ್ರೆಡಿಟ್ ಪಡೆಯಲು ಹವಣಿಸುತ್ತಿರುವುದು ಪರಮಹಾಸ್ಯ. pic.twitter.com/ns7e0GHAwM
“ಸರ್ಕಾರ ಕಳೆದ ಐದಾರು ತಿಂಗಳಿಂದ ಉತ್ಪಾದಕರಿಗೆ ಸಹಾಯಧನ ನೀಡಿಲ್ಲ. ಹಾಲು ಉತ್ಪಾದನೆ ಗಣನೀಯ ಕುಸಿತ ಕಂಡಿದೆ. ಮೊಸರಿಗೆ ‘ದಹಿ’ ಎಂದು ನಾಮಕರಣ ಮಾಡಲು ಇರುವ ಆಸಕ್ತಿ ಹೈನುಗಾರರ ಕಷ್ಟಕ್ಕೆ ಸ್ಪಂದಿಸುವಲ್ಲಿ ಇಲ್ಲ. ರೈತರಿಗೆ ಸಹಾಯಧನ ನೀಡಿ ಕ್ರೆಡಿಟ್ ಪಡೆಯುವ ಬದಲು ‘ದಹಿ’ಗೆ ಕ್ರೆಡಿಟ್ ಪಡೆಯುವುದು ನಾಚಿಕೆಗೇಡು ಅಲ್ಲವೇ?” ಎಂದು ಕಿಡಿಕಾರಿದೆ.
ಮೊಸರು ಮತ್ತು ಮುಂತಾದ ಹಾಲಿನ ಉತ್ಪನ್ನಗಳ ಮೇಲೆ ಕಡ್ಡಾಯವಾಗಿ ಹಿಂದಿ ಹೆಸರು ‘ದಹಿ’ ಎಂದು ಮುದ್ರಿಸಬೇಕೆಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆದೇಶಿಸಿತ್ತು. ಈ ಬಗ್ಗೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಆಕ್ರೋಶದ ಕಿಚ್ಚು ಹೆಚ್ಚಾಗಿತ್ತು. ಈ ಹಿನ್ನಲೆಯಲ್ಲಿ ಆದೇಶ ಪರಿಷ್ಕರಿಸಿ ಸುತ್ತೋಲೆ ಹೊರಡಿಸಿದ ಎಫ್ಎಸ್ಎಸ್ಎಐ, ‘ಕರ್ಡ್’ ಎಂಬ ಇಂಗ್ಲಿಷ್ ಪದನಾಮದೊಂದಿಗೆ ಆವರಣದಲ್ಲಿ ಪ್ರಚಲಿತ ಪ್ರಾದೇಶಿಕ ಸಾಮಾನ್ಯ ಹೆಸರು ಬಳಸಬಹುದು” ಎಂದು ತಿಳಿಸಿದೆ. ಜೆಡಿಎಸ್ ಕೂಡ ಈ ವಿಚಾರ ವಿರೋಧಿಸಿ ಆಕ್ರೋಶ ಹೊರಹಾಕಿತ್ತು.