- ಮೋದಿಯಿಂದ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ ಎಂದ ಸುರ್ಜೇವಾಲ
- ರಾಹುಲ್ ಪ್ರಶ್ನೆಗೆ ಉತ್ತರಿಸಲಾಗದ ಮೋದಿ ಒಬ್ಬ ರಣಹೇಡಿ: ಬಿ ಕೆ ಹರಿಪ್ರಸಾದ್
“ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ ಈ ದೇಶದ ಪ್ರಜಾಪ್ರಭುತ್ವಕ್ಕೆ ಆಘಾತ ನೀಡಿದೆ. ರಾಜಕೀಯ ದ್ವೇಷದಿಂದ ತರಾತುರಿಯಲ್ಲಿ ರಾಹುಲ್ ಗಾಂಧಿಯವರರ ಸದಸ್ಯತ್ವ ಅನರ್ಹ ಮಾಡಲಾಗಿದೆ” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದ ಸ್ಥಾನದ ಅನರ್ಹತೆ ಖಂಡಿಸಿ ಬೆಂಗಳೂರು ಕೇಂದ್ರ, ಉತ್ತರ ಹಾಗೂ ದಕ್ಷಿಣ ಜಿಲ್ಲಾ ಕಾಂಗ್ರೆಸ್ ‘ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿ’ ಎನ್ನುವ ಬ್ಯಾನರ್ನಡಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ಇದು ಹಿಟ್ಲರ್ನ ಜರ್ಮನಿ ಅಥವಾ ಮುಸಲೋನಿ ಆಡಳಿತವಿರುವ ದೇಶ ಅಲ್ಲ. ಪ್ರಧಾನಿ ಮೋದಿ ಅವರು ಮಾತು ಎತ್ತಿದರೆ ದೇಶ ಭಕ್ತಿ ಎನ್ನುತ್ತಾರೆ. ಅವರೇನು ದೇಶ ಭಕ್ತಿಯನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆಯೇ? ಹಿಟ್ಲರ್, ಮುಸಲೋನಿಯ ಸಂತತಿಯವರಲ್ಲಿ ಯಾವ ದೇಶ ಭಕ್ತಿ ಇದೆ” ಎಂದು ವಾಗ್ದಾಳಿ ನಡೆಸಿದರು.
ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪ್ರಬಲವಾದ ವಿರೋಧ ಪಕ್ಷ ಇರಬೇಕು ಎಂದು ಜವಾಹರ್ ಲಾಲ್ ನೆಹರು ಹೇಳುತ್ತಿದ್ದರು. ಆದರೆ, ಇಂದು ಪ್ರಜಾಪ್ರಭುತ್ವವನ್ನು ದಮನ ಮಾಡುವ ಸಂಸ್ಕೃತಿ ಎದುರಾಗುತ್ತಿದೆ. ಬಹಳ ಜನ ಮೋದಿಗಳು ಬ್ಯಾಂಕ್ನಲ್ಲಿ ಇರುವ ಜನರ ಹಣ ಲೂಟಿ ಮಾಡಿ ಲಂಡನ್ನಂತಹ ವಿದೇಶಕ್ಕೆ ಹೋಗಿದ್ದಾರೆ. ಇವರೆಲ್ಲ ಕಳ್ಳರು ಅನ್ನದೆ ಸಮಾಜ ಸುಧಾರಕರು, ಸಾಧು ಸಂತರು ಎಂದು ಕರೆಯಬೇಕಾ?. ಕಳ್ಳರನ್ನು ಕಳ್ಳರು ಎನ್ನುವ ಸ್ವಾತಂತ್ರ್ಯ ನಮಗಿಲ್ವಾ? ಅದನ್ನೆ ರಾಹುಲ್ ಮಾಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿ ಅನರ್ಹತೆ | ನರೇಂದ್ರ ಮೋದಿ ಒಬ್ಬ ಹೇಡಿ: ಪ್ರಿಯಾಂಕ ವಾದ್ರಾ ಕಿಡಿ
ಸಂಸತ್ ಸೇರಿದಂತೆ ದೇಶ ವಿದೇಶಗಳಲ್ಲಿ ಅದಾನಿ-ಅಂಬಾನಿ ಹಾಗೂ ಮೋದಿಯ ಸಂಬಂಧದ ಕುರಿತು ಮಾತನಾಡಲು ಆರಂಭಿಸಿದ್ದು ಮೋದಿಗೆ ಭಯ ಹುಟ್ಟಿಸಿತು ಅದಿಕ್ಕೆ ಸದಸ್ಯತ್ವ ರದ್ದು ಮಾಡಿದ್ದಾರೆ. ಕೋಲಾರದಲ್ಲಿ ಏಪ್ರಿಲ್ 5ರಂದು ಬೃಹತ್ ಸಮಾವೇಶ ಮಾಡಲಾಗುವುದು. ಆ ಮೂಲಕ ದೇಶದ ಜನರೆಲ್ಲ ಒಟ್ಟಾಗಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾದ್ರೆ ಬಿಡಲ್ಲ ಎಂಬ ಸಂದೇಶ ಸಾರೋಣ” ಎಂದು ಕರೆ ನೀಡಿದರು.
“ರಾಜಕೀಯದಲ್ಲಿ ಭಾಷಣ ಮಾಡುವಾಗ ವಿರೋಧ ಪಕ್ಷ, ಸರ್ಕಾರದ ತಪ್ಪುಗಳನ್ನು ಟೀಕಿಸುವುದು ಸಹಜ. ಆದರೆ, ಅದಕ್ಕೆ ಜೈಲು ಶಿಕ್ಷೆನಾ? ಈ ಹಿಂದೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಬಿಜೆಪಿಯ ಒಬ್ಬ ಮಂತ್ರಿ ಭಾಷಣ ಮಾಡಿದ್ದ ಅವರ ವಿರುದ್ಧ ಕ್ರಮ ಏಕಿಲ್ಲ” ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
“ಕಳ್ಳರನ್ನು ಕಳ್ಳರು ಎಂದಿರುವ ರಾಹುಲ್ ಗಾಂಧಿ ಅವರು ಮಾಡಿದ ತಪ್ಪು ಏನು ಎಂಬುದಕ್ಕೆ ನರೇಂದ್ರ ಮೋದಿ ಉತ್ತರ ಕೊಡಬೇಕು. ಅದಾನಿ-ಮೋದಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ ಅವರ ಮೈಕ್ ಆಪ್ ಮಾಡ್ತಾರೆ. ಒಂಬತ್ತು ವರ್ಷದಲ್ಲಿ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲದ ಮೋದಿ, ರಾಹುಲ್ ಅವರ ಪ್ರಶ್ನೆಗೆ ಉತ್ತರಿಸಲಾಗದ 52 ಇಂಚಿನ ಎದೆ ಇರುವ ರಣಹೇಡಿ” ಎಂದು ಹರಿಪ್ರಸಾದ್ ಕಿಡಿ ಕಾರಿದರು.
“ಲಲಿತ್ ಮೋದಿ, ನೀರವ್ ಮೋದಿ, ನಿಶಲ್ ಮೋದಿ ಇವರೆಲ್ಲ ದೇಶವನ್ನು ದೋಚಿ, ಇಂಗ್ಲೆಂಡ್ಗೆ ಹಾರಿದ್ದಾರೆ. ಇವರೆನ್ನೆಲ್ಲ ಕಳ್ಳರು ಅಂತ ಕರೆಯದೆ ಮತ್ತೇನು ಹೇಳಬೇಕು. ಮೋದಿ ಅವರೇ ನೀವು ಭಾರತದ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದೀರಿ” ಎಂದು ಎಐಸಿಸಿ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹರಿಹಾಯ್ದರು.