- ‘ಸಾರ್ವಜನಿಕರ ತೊಂದರೆ ಆಲಿಸಲು ಪ್ರತಿ ತಾಲೂಕಿನಲ್ಲಿ ಕಚೇರಿ ತೆರೆಯಲಾಗುವುದು‘
- ‘ಚುನಾವಣೆಗೂ ಮೊದಲು ಭಾಷಣದಲ್ಲಿ ಯಾವುದೇ ಷರತ್ತು ಇಲ್ಲ ಎಂದು ಹೇಳಿದ್ದರು‘
ವಿಧಾನಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿ ಮಾಡಬೇಕು. ಇಲ್ಲದಿದ್ದರೆ, ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಅಭಿಯಾನಕ್ಕೆ ಕರೆ ನೀಡಲಾಗುವುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮತದಾನಕ್ಕೂ ಮೊದಲು ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ನೀಡಿದೆ. ಕಾಂಗ್ರೆಸ್ ನಾಯಕರು ತಮ್ಮ ಭಾಷಣದಲ್ಲಿ ಯಾವುದೇ ಷರತ್ತುಗಳಿಲ್ಲದೆ ಐದೂ ಗ್ಯಾರಂಟಿಗಳು, ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲೇ ಅನುಮೋದಿಸಿ ಜಾರಿಗೆ ತರಲಾಗುವುದು ಎಂದು ಹೇಳಿದ್ದರು. ಆದರೆ, ಈಗ ಷರತ್ತುಗಳನ್ನು ವಿಧಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ರಾಜ್ಯದ ಹಲವೆಡೆ ಮಹಿಳೆಯರು ಬಸ್ ಟಿಕೇಟ್ ಪಡೆಯದೆ ನಿರ್ವಾಹಕರ ಜೊತೆಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಅಲ್ಲದೆ ಕೆಇಬಿ ಸಿಬ್ಬಂದಿ ಮೇಲೆ ಹಲ್ಲೆಗಳೂ ನಡೆಯುತ್ತಿವೆ. ಹಾಗಾಗಿ ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ರಾಜ್ಯದ ಜನರಿಗೆ ಕಾಂಗ್ರೆಸ್ ವಿರುದ್ಧ ಅಭಿಯಾನ ಆರಂಭಿಸಲು ಕರೆ ಕೊಡಲು ನಿರ್ಧರಿಸಿದ್ದೇನೆ. ಯಾರೂ 200 ಯುನಿಟ್ ವರೆಗಿನ ವಿದ್ಯುತ್ಗೆ ಬಿಲ್ ಕಟ್ಟಬೇಡಿ. ಯಾರಾದರೂ ತೊಂದರೆ ಕೊಡಲು ಮುಂದಾದರೆ ಸಾರ್ವಜನಿಕರಿಗೆ ರಕ್ಷಣೆ ಕೊಡಲು ಪಕ್ಷದ ವತಿಯಿಂದ ಪ್ರತಿ ತಾಲೂಕಿನಲ್ಲಿ ಕಚೇರಿ ತೆರೆಯುತ್ತೇವೆ” ಎಂದು ಹೇಳಿದರು.
“ರಾಜ್ಯದ ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಎಂದು ಭಾಷಣ ಮಾಡಿದ ಕಾಂಗ್ರೆಸ್ ನಾಯಕರಿಗೆ ಅಂದು ತಲೆ ಇರಲಿಲ್ಲವೇ? ಎಲ್ಲ ನಿರುದ್ಯೋಗಿ ಪದವಿಧರರಿಗೆ ಯುವ ನಿಧಿ ಯೋಜನೆ ಅಡಿ 3,000 ರೂ. ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ಗ್ಯಾರಂಟಿ ನೀಡಿದ್ದಿರಿ. ಆದರೆ, ಈಗ 2022-23 ಸಾಲಿಗೆ ಮಾತ್ರ ಎಂದು ಷರತ್ತುಗಳನ್ನು ವಿಧಿಸಿದ್ದೀರಿ. ಉಳಿದವರು ನಿರುದ್ಯೋಗಿಗಳಲ್ಲವೇ? ಚುನಾವಣೆಗೂ ಮೊದಲೇ ಯಾಕೆ ಷರತ್ತುಗಳ ಬಗ್ಗೆ ಹೇಳಲಿಲ್ಲ. ಎಲ್ಲರಿಗೂ ಉಚಿತ ಎಂದು ಹೇಳಿ ಈಗ ಯಾಕೆ ಷರತ್ತುಗಳನ್ನು ವಿಧಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಬಿಳುತ್ತದೆ ಎಂದು ಹೇಳಿಲ್ಲ
ಸೆಪ್ಟೆಂಬರ್ ಅಂತ್ಯದ ವೇಳೆಗೆ ರಾಜಕೀಯ ಬೆಳವಣಿಗೆಗಳು ಆಗುತ್ತವೆ ಎಂದು ಹೇಳಿದ್ದೇನೆಯೇ ಹೊರತು ಸರ್ಕಾರವೇ ಬೀಳಲಿದೆ ಎಂದು ನಾನು ಹೇಳಿಲ್ಲ. ಅಧಿಕಾರ ಹಂಚಿಕೆ ವಿಷಯ ಈಗ ಚರ್ಚೆಯಲ್ಲಿದೆ, ಅದನ್ನ ನಾವು ಸೃಷ್ಟಿ ಮಾಡಿರೋದಾ? ಅವರೇ ಮಾಡಿಕೊಳ್ಳುತ್ತಿದ್ದಾರೆ ತಾನೆ? ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಿಂದ ಯಾವ ರೀತಿ ಹೇಳಿಕೆ ಕೊಡಿಸುತ್ತಿದ್ದರು. ಅದು ಯಾರು ಕೊಡಿಸುತ್ತಿದ್ದರು, ಅದೆಲ್ಲ ನೋಡಿಲ್ಲವಾ? ಅದೇ ಒಂದು ವ್ಯವಸ್ಥೆಯನ್ನು ಈಗಲೂ ಪ್ರಾರಂಭ ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ವಿಧಾನಸಭೆ ನೂತನ ಸಭಾಧ್ಯಕ್ಷರಾಗಿ ಯು ಟಿ ಖಾದರ್ ಅಧಿಕಾರ ಸ್ವೀಕಾರ
ಬೆಂಗಳೂರು ನಗರಕ್ಕೆ ರಾಷ್ಟ್ರೀಯ ಪಕ್ಷಗಳ ಕೊಡುಗೆ ಏನು?
ಕಳೆದ ಎರಡು ದಿನ ಸುರಿದ ಮಳೆಗೆ ಬೆಂಗಳೂರು ಜನ ಯಾವ ರೀತಿ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಎಲ್ಲರೂ ನೋಡಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಅಂದರೆ 2008-09 ರಿಂದ ಬೆಂಗಳೂರು ನಗರ ಆಡಳಿತ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರ ನಡೆಸಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ರೀತಿ ಸಮಸ್ಯೆ ಎದುರಾಗುತ್ತಿದ್ದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಎರಡೂ ರಾಜಕೀಯ ಪಕ್ಷಗಳಿಗೆ ಚಿಂತನೆ ಇಲ್ಲ. ಬೆಂಗಳೂರು ನಗರಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳ ಕೊಡುಗೆ ಏನು ಎಂದು ಪ್ರಶ್ನಿಸಿದರು.
ತಳ ಮಟ್ಟದಿಂದ ಪಕ್ಷ ಸಂಘಟನೆ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಮಟ್ಟದ ನಿರೀಕ್ಷೆ ಇಟ್ಟಿದ್ದೆವು. ಯಾಕೆಂದರೆ ನಮ್ಮ ಪಕ್ಷದ ಪಂಚರತ್ನ ಯಾತ್ರೆಗೆ ಜನರು ಪ್ರತಿಕ್ರಿಯೆ ನೋಡಿ ನಿರೀಕ್ಷೆ ಇತ್ತು. ಆದರೆ, ಚುನಾವಣಾ ಫಲಿತಾಂಶ ಎಲ್ಲವನ್ನು ಹುಸಿ ಮಾಡಿದೆ. ಆದ್ದರಿಂದ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವುದು ಅನಿವಾರ್ಯವಾಗಿದೆ. ಈ ಕುರಿತು ನಾಳೆ ನಡೆಯುವ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಅದೆಲ್ಲಾ ಇರಲಿ…. ತಾವು ತಮ್ಮ ಪಕ್ಷ ಯಾವಾಗ ಮುಚ್ಚುವುದು