- ನೂತನ ಸಂಸತ್ ಭವನ ಉದ್ಘಾಟನೆಗೆ ಕಾಂಗ್ರೆಸ್ ಸೇರಿ 20 ಪ್ರತಿಪಕ್ಷಗಳ ಬಹಿಷ್ಕಾರ
- ಮೇ 28ಕ್ಕೆ ನಿಗದಿಯಾಗಿರುವ ಹೊಸ ಸಂಸತ್ತು ಕಟ್ಟಡದ ಉದ್ಘಾಟನಾ ಸಮಾರಂಭ
ನೂತನ ಸಂಸತ್ ಭವನ ಉದ್ಘಾಟನೆ ಸಂಬಂಧಿಸಿ ಕೇಂದ್ರ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ಜಟಾಪಟಿ ನಡುವೆ 2 ಪಕ್ಷಗಳು ಸಮಾರಂಭದ ಆಹ್ವಾನ ಸ್ವೀಕರಿಸಿವೆ.
ಹೊಸದಾಗಿ ನಿರ್ಮಾಣವಾಗಿರುವ ಸಂಸತ್ ಕಟ್ಟಡದ ಉದ್ಘಾಟನೆ ಸಮಾರಂಭವನ್ನು ಕಾಂಗ್ರೆಸ್ ಸೇರಿ 20 ಪ್ರತಿಪಕ್ಷಗಳು ಬಹಿಷ್ಕರಿಸಿವೆ.
ಈ ನಡುವೆ ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ಸಿಪಿ ಮತ್ತು ಒಡಿಶಾದ ಆಡಳಿತ ಪಕ್ಷ ಬಿಜು ಜನತಾದಳ (ಬಿಜೆಡಿ) ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಪತ್ರ ಮುಖೇನ ಎರಡೂ ಪಕ್ಷಗಳು ಬುಧವಾರ (ಮೇ 24) ತಿಳಿಸಿವೆ.
“ಹೊಸ ಸಂಸತ್ ಭವನವು ಪ್ರಜಾತಂತ್ರದ ಸಂಕೇತವಾಗಿದೆ. ಎಲ್ಲ ರಾಜಕೀಯಕ್ಕಿಂತ ಇದು ಹೆಚ್ಚಿನದಾಗಿದೆ. ಸಂಸತ್ತಿನ ಅಧಿಕಾರ ಮತ್ತು ಸ್ಥಾನವನ್ನು ಎಂದಿಗೂ ರಕ್ಷಿಸಬೇಕು” ಎಂದು ಬಿಜೆಡಿ ವಕ್ತಾರ ಲೆನಿನ್ ಮೋಹಂತಿ ಪತ್ರದಲ್ಲಿ ಹೇಳಿದ್ದಾರೆ.
“ರಾಷ್ಟ್ರಪತಿಗಳು ರಾಜ್ಯಗಳ ಮುಖ್ಯಸ್ಥರಾಗಿದ್ದಾರೆ. ಸಂಸತ್ತು ಭಾರತದ 1.4 ಶತಕೋಟಿ ಜನರನ್ನು ಪ್ರತಿನಿಧಿಸುತ್ತದೆ. ಎರಡೂ ಭಾರತೀಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆ. ಭಾರತದ ಸಂವಿಧಾನ ರಾಷ್ಟ್ರಪತಿ ಹಾಗೂ ಸಂಸತ್ತಿಗೆ ಅಧಿಕಾರ ನೀಡುತ್ತದೆ” ಎಂದು ಪತ್ರದಲ್ಲಿ ಬಿಜೆಡಿ ತಿಳಿಸಿದೆ.
ನೂತನ ಸಂಸತ್ ಭವನ ಉದ್ಘಾಟನೆಯಲ್ಲಿ ಪಾಲಗೊಳ್ಳುವುದಾಗಿ ವೈಎಸ್ಆರ್ಸಿಪಿ ಖಚಿತಪಡಿಸಿದೆ.
ಆಂಧ್ರಪ್ರದೇಶ ವಿಭಜನೆಯಾದ ನಂತರ 2014ರ ನಂತರ ಇತ್ತೀಚೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ದೊಡ್ಡ ಪ್ರಮಾಣದ ಯೋಜನೆಯೊಂದನ್ನು ಅನುಮೋದಿಸಿದೆ.
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಜೆಡಿಯು, ಎಎಪಿ, ಸಿಪಿಎಂ, ಸಿಪಿಐ, ಎಸ್ಪಿ, ಎನ್ಸಿಪಿ, ಶಿವಸೇನಾ (ಯುಬಿಟಿ), ಆರ್ಜೆಡಿ, ಐಯುಎಂಎಲ್, ಜೆಎಂಎಂ, ಎನ್ಸಿ, ಕೆಸಿ(ಎಂ), ಆರ್ಎಸ್ಪಿ, ವಿಸಿಕೆ, ಎಂಡಿಎಂಕೆ, ಆರ್ಎಲ್ಡಿ ಪಕ್ಷಗಳು ಸಂಸತ್ ಭವನದ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿವೆ.
ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡಬೇಕು ಎಂದು ಪ್ರತಿಪಕ್ಷಗಳು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿವೆ.
ಈ ಸುದ್ದಿ ಓದಿದ್ದೀರಾ? ತಾಳಿ ಕಟ್ಟದೆ ಪರಾರಿಯಾಗಲು ಯತ್ನಿಸಿದ ವರ; 20 ಕಿಮೀ ಬೆನ್ನಟ್ಟಿ ಮಂಟಪಕ್ಕೆ ಕರೆತಂದ ವಧು
“ಹೊಸ ಸಂಸತ್ ಭವನದ ಉದ್ಘಾಟನೆ ಒಂದು ಮಹತ್ವದ ಸಂದರ್ಭ. ಆದರೆ ಸರ್ಕಾರವು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುತ್ತಿದೆ. ನಮ್ಮ ಭಿನ್ನಾಭಿಪ್ರಾಯ ಬದಿಗಿಟ್ಟಿದೆ. ರಾಷ್ಟ್ರಪತಿ ಮುರ್ಮು ಅವರನ್ನು ಸಂಪೂರ್ಣವಾಗಿ ಹೊರಗಿಟ್ಟು ಹೊಸ ಸಂಸತ್ತಿನ ಕಟ್ಟಡವನ್ನು ಸ್ವತಃ ಉದ್ಘಾಟಿಸುವ ಪ್ರಧಾನಿ ಮೋದಿಯವರ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ” ಎಂದು ಪ್ರತಿಪಕ್ಷಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದವು.
ನೂತನ ಸಂಸತ್ ಭವನ ಕಟ್ಟಡದ ಉದ್ಘಾಟನೆಯನ್ನು ಭಾನುವಾರ (ಮೇ 28) ನಿಗದಿಪಡಿಸಲಾಗಿದೆ.