- ಸಚಿವ ಗಜೇಂದ್ರ ಸಿಂಗ್ ವಿರುದ್ದ ಚಿತ್ತೋರ್ಗಢದಲ್ಲಿ ಪ್ರಕರಣ ದಾಖಲು
- ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾವಣನೆಂದು ಟೀಕಿಸಿದ ಸಚಿವ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ರಾವಣನಿಗೆ ಹೋಲಿಸಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ವಿರುದ್ಧ ಪೊಲೀಸರು ಭಾನುವಾರ (ಏಪ್ರಿಲ್ 30) ಪ್ರಕರಣ ದಾಖಲಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಮತ್ತು ಶಾಸಕ ಸುರೇಂದ್ರ ಸಿಂಗ್ ಅವರು ನೀಡಿದ ದೂರಿನ ಆಧಾರದಲ್ಲಿ ರಾಜಸ್ಥಾನದ ಪೊಲೀಸರು ಗಜೇಂದ್ರ ಅವರ ವಿರುದ್ಧ ಚಿತ್ತೋಗಢ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ಗಜೇಂದ್ರ ಶೇಖಾವತ್ ಅವರು ರಾಜಸ್ಥಾನ ರಾಜಕೀಯ ಹದಗೆಟ್ಟಿದೆ. ಇಲ್ಲಿಯದು ರಾವಣನ ರಾಜಕೀಯ” ಎಂದು ಹೇಳಿದ್ದರು.
ಸುರೇಂದ್ರ ಸಿಂಗ್ ಅವರು ರಾಜಸ್ಥಾನ ಪರಂಪರೆ ಸಂರಕ್ಷಣೆ ಮತ್ತು ಉತ್ತೇಜನ ಪ್ರಾಧಿಕಾರದ ಅಧ್ಯಕ್ಷರು. “ಗೇಜೇಂದ್ರ ಅವರ ಹೇಳಿಕೆಯಿಂದ ನನ್ನ ಮನಸ್ಸಿಗೆ ಘಾಸಿಯಾಗಿದೆ” ಎಂದು ದೂರಿನಲ್ಲಿ ಹೇಳಿದ್ದಾರೆ.
ಚಿತ್ತೋರ್ಗಢದಲ್ಲಿ ಏಪ್ರಿಲ್ 27ರಂದು ಬಿಜೆಪಿಯ ‘ಜನ ಆಕ್ರೋಶ’ ಸಮಾರಂಭದಲ್ಲಿ ಮಾತನಾಡಿದ್ದ ಗಜೇಂದ್ರ ಅವರು, “ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರು ರಾವಣನ ರಾಜಕೀಯ ಮಾಡುತ್ತಿದ್ದಾರೆ. ನೀವು ರಾಮರಾಜ್ಯವಾಗಿ ಮಾಡಬೇಕು” ಎಂದು ಹೇಳಿದ್ದರು.
ಗಜೇಂದ್ರ ಅವರ ಹೇಳಿಕೆ ಖಂಡಿಸಿ ಅವರ ವಿರುದ್ಧ ಕಾಂಗ್ರೆಸ್ ನಾಯಕ ಸುರೇಂದ್ರ ಸಿಂಗ್ ದೂರು ನೀಡಿದ್ದರು. “ಮುಖ್ಯಮಂತ್ರಿ ವಿರುದ್ಧ ಇಂತಹ ಅವಹೇಳನಕಾರಿ ಭಾಷೆ ಬಳಸಿದ ಗಜೇಂದ್ರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ. ಅವರು ಸಮಾವೇಶದಲ್ಲಿ ಮಾತನಾಡುವಾಗ ಧಾರ್ಮಿಕ ಭಾವನೆ ಕೆರಳಿಸುವ ಪ್ರಯತ್ನ ಮಾಡಿದ್ದಾರೆ” ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿ ವಿರುದ್ಧ ಮೋದಿ ಸರ್ನೇಮ್ ಪ್ರಕರಣ; ವಿಚಾರಣೆ ಮೇ 2ಕ್ಕೆ ಮುಂದೂಡಿಕೆ
ಗಜೇಂದ್ರ ಅವರು ಜೋಧಪುರದಲ್ಲಿ ಬಿಜೆಪಿ ಸಂಸದರು. ಈ ಹಿಂದೆ ಅಶೋಕ್ ಗೆಹ್ಲೋಟ್ ಈ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದರು. 2019ರ ಲೋಕಸಭೆ ಚುನಾವಣೆ ವೇಳೆ ಗೆಹ್ಲೋಟ್ ಅವರ ಪುತ್ರ ವೈಭವ್ ವಿರುದ್ಧ ಜಯಿಸಿ ಎರಡನೇ ಅವಧಿಗೆ ಸಂಸದರಾಗಿದ್ದಾರೆ.
ಗಜೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 143 (ಕಾನೂನು ಬಾಹಿರ ಸಭೆ), 500 (ಮಾನಹಾನಿ) ಸೇರಿದಂತೆ ನಾನಾ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ.