- ಕೃತಕ ಬುದ್ಧಿಮತ್ತೆ ಚಾಟ್ಜಿಪಿಟಿ ಬಳಸಿ ಬ್ಲೂಟೂತ್ ಮೂಲಕ ಉತ್ತರ ರವಾನೆ
- ಪ್ರತಿಯೊಬ್ಬ ಅಭ್ಯರ್ಥಿಗಳಿಂದ ರಮೇಶ್ ತಲಾ ₹40 ಲಕ್ಷ ಪಡೆದ ಆರೋಪಿ
ಕಳೆದ ಕೆಲವು ತಿಂಗಳಿನಿಂದ ಚಾಟ್ಜಿಪಿಟಿ ಎಂಬ ಕೃತಕ ಬುದ್ಧಿಮತ್ತೆಯ ಬುದ್ಧಿವಂತಿಕೆ ಜನಪ್ರಿಯವಾಗುತ್ತಿದೆ. ಆದರೆ, ಕೃತಕ ಬುದ್ಧಿಮತ್ತೆ ಇತ್ತೀಚೆಗೆ ಒಳಿತಿಗಿಂತ ಹೆಚ್ಚು ಕೆಡುಕಿಗೆ ಸುದ್ಧಿಯಾಗುತ್ತಿದೆ. ತೆಲಂಗಾಣದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಸರ್ಕಾರಿ ಪರೀಕ್ಷೆಯೊಂದರಲ್ಲಿ ಅಕ್ರಮ ಎಸಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ತೆಲಂಗಾಣದಲ್ಲಿ ನಾಗರಿಕ ಸೇವೆ ಪರೀಕ್ಷೆ ಬರೆಯಲು ಚಾಟ್ಜಿಪಿಟಿ ನೆರವು ಪಡೆಯಲಾಗಿದೆ. ಭಾರತದಲ್ಲಿ ಈ ರೀತಿ ಪ್ರಕರಣ ನಡೆದಿರುವುದು ಇದೇ ಮೊದಲು.
ತೆಲಂಗಾಣ ರಾಜ್ಯ ನಾಗರಿಕ ಸೇವಾ ಆಯೋಗದ (ಟಿಎಸ್ಪಿಎಸ್ಸಿ) ಪರೀಕ್ಷೆಯಲ್ಲಿ ಬ್ಲೂಟೂತ್ ಮೂಲಕ ವಂಚನೆ ನಡೆದಿರುವ ಪ್ರಕರಣದಲ್ಲಿ ಚಾಟ್ಜಿಪಿಟಿಯ ಬಳಕೆಯಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಜಾಲವು ಹಣ ನೀಡಿರುವ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ನೀಡುತ್ತಿತ್ತು. ಈ ರೀತಿ ಉತ್ತರ ಹುಡುಕಲು ಚಾಟ್ಜಿಪಿಟಿಯ ನೆರವು ಪಡೆಯಲಾಗಿತ್ತು.
ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ ಮತ್ತು ಡಿವಿಷನಲ್ ಅಕೌಂಟ್ ಆಫೀಸರ್ ಹುದ್ದೆಗಳಿಗೆ ನಡೆದ ಪರೀಕ್ಷೆಗಳಿಗೆ ಉತ್ತರಗಳನ್ನು ಚಾಟ್ಜಿಪಿಟಿ ಮೂಲಕ ಕಂಡುಕೊಂಡು ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ರವಾನಿಸಲಾಗಿತ್ತು.
ಎಸ್ಐಟಿ ತನಿಖಾಧಿಕಾರಿಗಳು ಪೆದ್ದಪಲ್ಲಿಯಲ್ಲಿ ತೆಲಂಗಾಣ ರಾಜ್ಯ ಉತ್ತರ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ನ ವಿಭಾಗೀಯ ಇಂಜಿನಿಯರ್ ಅನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ಪೂಲಾ ರಮೇಶ್, ಈ ವರ್ಷದ ಆರಂಭದಲ್ಲಿ ನಡೆದ ಎರಡು ಪರೀಕ್ಷೆಗಳಲ್ಲಿ ಏಳು ಆಕಾಂಕ್ಷಿಗಳಿಗೆ ಉತ್ತರಗಳನ್ನು ನೀಡಲು ಚಾಟ್ಜಿಪಿಟಿ ಬಳಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ನವ್ಐಸಿ ಉಪಗ್ರಹ | ಪ್ರಾದೇಶಿಕ ನೇವಿಗೇಶನ್ ವ್ಯವಸ್ಥೆ ಪ್ರಬಲಗೊಳಿಸಿದ ಇಸ್ರೋ
ಸೋರಿಕೆಯಾದ ಪ್ರಶ್ನೆಪತ್ರಿಕೆ ನೋಡಿಕೊಂಡು ಪರೀಕ್ಷೆ ಆರಂಭವಾದ ಹತ್ತು ನಿಮಿಷದ ಬಳಿಕ ಉತ್ತರಗಳನ್ನು ನೀಡಲು ಆರಂಭಿಸಿದ್ದ. ಪ್ರತಿಯೊಬ್ಬ ಅಭ್ಯರ್ಥಿಗಳಿಂದ ರಮೇಶ್ ತಲಾ ₹40 ಲಕ್ಷ ಪಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.