- ಚುನಾವಣೆಗೆ ಸ್ಪರ್ಧಿಸುವಂತೆ 25 ಕ್ಷೇತ್ರಗಳಿಂದ ಆಹ್ವಾನ
- ವರುಣಾದಿಂದ ಸ್ಪರ್ಧಿಸುವಂತೆ ಕುಟುಂಬದ ಸಲಹೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮವಾಗಿ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಅಪಾಯ ಎಂದು ಸಲಹೆ ನೀಡಿದ್ದರು. ಅದಾದ ಬಳಿಕ ಸಿದ್ದರಾಮಯ್ಯ ಅವರ ಕ್ಷೇತ್ರ ಗೊಂದಲ ಗರಿಗೆದರಿತ್ತು.
ಕೋಲಾರ, ವರುಣಾ ಹಾಗೂ ಬದಾಮಿ ಈ ಮೂರು ಕ್ಷೇತ್ರಗಳ ಮೇಲೆ ಸಿದ್ದರಾಮಯ್ಯ ಅವರ ಒಲವಿದ್ದು, ಕೊನೆಗೆ ವರುಣಾದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೆ, ಹೈಕಮಾಂಡ್ನಿಂದ ಇನ್ನೂ ಅಂತಿಮ ತೀರ್ಮಾನ ಹೊರಬಿದ್ದಿಲ್ಲ.
ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, ಚುನಾವಣೆಗೆ ಸ್ಪರ್ಧಿಸುವಂತೆ ರಾಜ್ಯದ 25 ಕ್ಷೇತ್ರಗಳಿಂದ ಆಹ್ವಾನ ಬಂದಿದೆ. ಎಲ್ಲ ಕ್ಷೇತ್ರಗಳಿಂದ ಸ್ಪರ್ಧಿಸಲು ಸಾಧ್ಯವಿಲ್ಲ. ವರುಣಾದಿಂದ ಸ್ಪರ್ಧಿಸುವುದು ನಮ್ಮ ಕುಟುಂಬದ ಅಭಿಪ್ರಾಯ. ಎರಡು ಕ್ಷೇತ್ರಗಳಿಂದ ಸ್ಪರ್ಧೆಗೆ ಇಳಿಯುವಂತೆ ಕುಟುಂಬಸ್ಥರು ಸಲಹೆ ನೀಡಿದ್ದಾರೆ. ಸದ್ಯಕ್ಕೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಪಕ್ಷಕ್ಕೆ ತಿಳಿಸಿದ್ದೇನೆ. ಅಂತಿಮ ನಿರ್ಧಾರ ಹೈಕಮಾಂಡ್ನದು ಎಂದು ಹೇಳುವ ಮೂಲಕ ವರುಣಾ ಕ್ಷೇತ್ರದ ಪರ ಒಲವು ತೋರಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಿಂದ ಚುನಾವಣಾ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಬದಾಮಿಯಲ್ಲಿ ಅಲ್ಪಮತಗಳಿಂದ ಗೆದ್ದಿದ್ದರು. ಈ ಬಾರಿಯೂ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಮುನ್ಸೂಚನೆಗಳು ಅವರ ಮಾತುಗಳಲ್ಲಿ ಕಂಡುಬಂದಿವೆ.
ಒಟ್ಟಿನಲ್ಲಿ ಸಿದ್ದರಾಮಯ್ಯ ಅವರು ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಅಭಿಮಾನಿಗಳ ಗೊಂದಲಕ್ಕೆ ತೆರೆ ಎಳೆದಂತಾಗಿದೆ.
ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆಯ ನಿರ್ಧಾರವೀಗ ಹಳೆ ಮೈಸೂರು ಭಾಗದಲ್ಲಿ ಮಗ್ಗುಲು ಬದಲಾಯಿಸುತ್ತಿದ್ದ ಕುಟುಂಬ ರಾಜಕಾರಣದ ನಡೆಗೆ ಕೊಂಚ ಹಿನ್ನೆಡೆಯಾಗಿದೆ. ಏಕೆಂದರೆ ಹಳೆ ಮೈಸೂರು ಭಾಗದಲ್ಲಿ ಅದರಲ್ಲೂ ಕಾಂಗ್ರೆಸ್ನಲ್ಲಿ ಎರಡನೇ ತಲೆಮಾರಿನ ರಾಜಕಾರಣಕ್ಕೆ ಕಾಂಗ್ರೆಸ್ ನಾಯಕರು ವೇದಿಕೆ ಸಿದ್ಧ ಮಾಡಿಕೊಂಡಿದ್ದರು. ಈಗಾಗಲೇ ಸಿದ್ದರಾಮಯ್ಯ ಪುತ್ರ ಯತೀಂದ್ರ ಶಾಸಕರಾಗಿ ಮೊದಲ ಹೆಜ್ಜೆ ಇಟ್ಟರೆ, ಸಿದ್ದರಾಮಯ್ಯ ಆಪ್ತ ಮಹದೇವಪ್ಪ ಪುತ್ರ ಸುನೀಲ್ ಬೋಸ್, ಈ ಬಾರಿ ಟಿ ನರಸೀಪುರ ಕ್ಷೇತ್ರದಿಂದ ಚೊಚ್ಚಲ ಚುನಾವಣೆ ಎದುರಿಸಲು ಸಿದ್ಧರಾಗಿದ್ದರು. ಇಂತಹ ಸಂದರ್ಭದಲ್ಲಿ ಧ್ರುವನಾರಾಯಣ್ ಅಕಾಲಿಕ ಸಾವು, ಸಿದ್ದರಾಮಯ್ಯವರಿಗೆ ಕೋಲಾರ ಹಾಗೂ ಮಹದೇವಪ್ಪಗೆ ನಂಜನಗೂಡು ಕ್ಷೇತ್ರ ಬಿಟ್ಟುಕೊಡುವ ನಿರ್ಧಾರಕ್ಕೆ ಬರುವಂತಾಗಿದೆ.
ಸಿದ್ದರಾಮಯ್ಯ ಮರಳಿ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಮಾಡಿರುವ ಘೋಷಣೆ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಕ್ಷೇತ್ರ ಇಲ್ಲದಂತಾಗಿದೆ. ಹಾಗೆ ಮಹದೇವಪ್ಪ ಕೂಡ ನಂಜಗೂಡನ್ನು ಬಿಟ್ಟು ನರಸೀಪುರಕ್ಕೆ ಮರಳುತ್ತಿರುವುದು ಸುನೀಲ್ ಬೋಸ್ ಪಾಲಿಗೆ ವೈಯಕ್ತಿಕ ಹಿನ್ನೆಡೆಯಾಗಿದೆ. ಆದರೆ ಧ್ರುವನಾರಾಯಣ್ ಪುತ್ರ ದರ್ಶನ್ ಗೆ ನಂಜನಗೂಡು ಟಿಕೆಟ್ ಖಾತ್ರಿಯಾಗಿದೆ.