- ಭಜರಂಗದಳ ನಿಷೇಧದ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಗೃಹಸಚಿವ
- ಕಾನೂನುಭಂಗ ಮಾಡುವ ಸಂಘಟನೆಗಳ ನಿಷೇಧ ಖಾತರಿ ಎಂದ ಸಚಿವರು
ರಾಜ್ಯದಲ್ಲಿ ಕಾನೂನು ಭಂಗ ಮಾಡುವ ಹಾಗೂ ಸಮಾಜದ ಶಾಂತಿ ಕದಡುವ ಸಂಘಟನೆಗಳ ನಿಷೇಧ ಮಾಡುವುದರಲ್ಲಿ ಎರಡು ಮಾತಿಲ್ಲ, ಈ ಮಾತು ಭಜರಂಗದಳಕ್ಕೂ ಅನ್ವಯಿಸುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.
ವಿಧಾನಸೌಧದಲ್ಲಿ ತಮ್ಮ ಕೊಠಡಿ ಪೂಜೆ ನೆರವೇರಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಜರಂಗದಳದವರಿಗೆ ತಮ್ಮ ಸಂಘಟನೆ ನಿಷೇಧದ ಬಗ್ಗೆ ಅಷ್ಟೇಕೆ ಆತಂಕ ಎಂದರು.
ನಾನು ನಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ವಿಚಾರವನ್ನು ಅವರು ಸರಿಯಾಗಿ ನೋಡಿ, ಓದಿ ತಿಳಿದುಕೊಳ್ಳಬೇಕು. ನಾವೆಲ್ಲೂ ಆ ಸಂಘಟನೆಯನ್ನು ಬ್ಯಾನ್ ಮಾಡುವುದಾಗಿ ಹೇಳಿಲ್ಲ.
ಯಾರು ಸಮಾಜದ ಶಾಂತಿಯನ್ನ ಕದಡುತ್ತಾರೆ, ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದೇವೆ. ಹೀಗಿರುವಾಗ ಅವರು ಆ ಕಾರ್ಯ ಮಾಡುವುದಿಲ್ಲ ಎಂದಾದ ಮೇಲೆ ಅವರಿಗೆ ನಿಷೇಧದ ಬಗ್ಗೆ ಚಿಂತೆ ಯಾಕೆ ಎಂದ ಅವರು, ಈ ವಿಚಾರ ಅವರಿಗೆ ಅರ್ಥವಾದರೆ ಸಾಕು ಎಂದರು.
ಈ ಮಾತುಕತೆಗೂ ಮುನ್ನ ತಮ್ಮ ಕಚೇರಿ ಪೂಜೆ ವಿಚಾರದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿದ ಪರಮೇಶ್ವರ್, ನಮ್ಮ ಕಚೇರಿಯ ಪೂಜೆ ಮಾಡಿದ್ದೇವೆ, ಅನೇಕ ಜನ ಇದಕ್ಕೆ ಟೀಕೆ-ಟಿಪ್ಪಣೆ ಮಾಡಬಹುದು. ದೇವರ ಹೆಸರಲ್ಲಿ ಪ್ರಮಾಣ ವಚನ ತೆಗೆದುಕೊಂಡಿದ್ದೇವೆ. ಅದರಂತೆ ದೇವರನ್ನ ನೆನೆಸಿಕೊಂಡು ಕಚೇರಿ ಪೂಜೆ ಮಾಡಿದ್ದೇವೆ, ಇದು ನಮ್ಮೆಲ್ಲರಿಗೂ ಶಕ್ತಿ ಕೊಡುವಂತಹ ವಿಚಾರ ಎಂದರು.
ಈ ಸುದ್ದಿ ಓದಿದ್ದೀರಾ?: ಖಾತೆ ಮರು ಹಂಚಿಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ತಮ್ಮ ಇಲಾಖೆ ಮತ್ತು ಜವಾಬ್ದಾರಿ ಕುರಿತು ಅಭಿಪ್ರಾಯ ಹಂಚಿಕೊಂಡ ಗೃಹ ಸಚಿವರು, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ, ಪೊಲೀಸ್ ಇಲಾಖೆಯಲ್ಲಿ ಸಲ್ಯೂಟ್ ಸಿಗುತ್ತದೆ, ಒದೆನೂ ಸಿಗುತ್ತದೆ, ಮುಂದುವರಿದು ಗುಂಡು ಹಾರಿಸೋದು ಇರುತ್ತದೆ. ಆದರೆ ಯಾರಿಗೆ ಯಾವುದು ಬೇಕೋ ತೀರ್ಮಾನ ಮಾಡಿ ಎಂದರು.
ಸರ್ಕಾರದ ಮುಖವಾಣಿಯಲ್ಲಿರುವ ಗೃಹ ಖಾತೆ ಬಹಳ ಪ್ರಮುಖ ಖಾತೆ. ಇಲ್ಲಿ ಏನೇ ವಿದ್ಯಮಾನಗಳು ನಡೆದರೂ ಅದು ಜನತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ಇಲ್ಲಿಂದ ಒಳ್ಳೆಯ ಕೆಲಸಗಳಾಗಲಿ ಎಂದು ಆಶಿಸುತ್ತೇನೆ. ಹಾಗೆಯೇ ರಾಜ್ಯದ ಕಾನೂನು ವ್ಯವಸ್ಥೆಯನ್ನ ಮತ್ತಷ್ಟು ಬಲಗೊಳಿಸುವ ಕಾರ್ಯವನ್ನೂ ಮಾಡುತ್ತೇನೆ. ಎಂದು ಹೇಳಿದರು.
ಇನ್ನು ಗ್ಯಾರಂಟಿ ಯೋಜನೆ ಬಗ್ಗೆ ವಿವರ ನೀಡಿದ ಅವರು, ಕ್ಯಾಬಿನೆಟ್ ನಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಬ್ರೀಫ್ ಮಾಡ್ತಿವಿ, ಇನ್ನೆರಡು ದಿನ ಕಾದು ನೋಡಿ ಎಂದರು.