ಬೆಂಗಳೂರಿನ ರಾಜಕೀಯದಲ್ಲಿ ಜಮೀರ್ ಅಹ್ಮದ್ ಖಾನ್ ಕೂಡ ಪ್ರಭಾವಿಯಾಗಿದ್ದಾರೆ. 2015ರಲ್ಲಿ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿತ್ತು. ಆದರೆ ಮೇಯರ್ ಪಟ್ಟವನ್ನು ಬಿಜೆಪಿ ಕೈ ತಪ್ಪಿಸುವುದರ ಹಿಂದೆ ಜಮೀರ್ ಅಹ್ಮದ್ ತಂತ್ರ ಕೆಲಸ ಮಾಡಿತ್ತು
ತುಮಕೂರಿನ ಕುಣಿಗಲ್ ಮೂಲದವರಾದ ಜಮೀರ್ ಅಹ್ಮದ್ ಖಾನ್ ಅವರು ತಾತ ಸ್ಥಾಪಿಸಿದ್ದ ನ್ಯಾಷನಲ್ ಟ್ರಾವೆಲ್ಸ್ ವ್ಯವಹಾರವನ್ನು ಚಾಮರಾಜಪೇಟೆಯಲ್ಲಿ ಸೋದರರೊಟ್ಟಿಗೆ ನೋಡಿಕೊಂಡು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಜೆಡಿಎಸ್ನೊಂದಿಗೆ ಒಂದಿಷ್ಟು ನಂಟಿದ್ದರೂ ರಾಜಕೀಯವಾಗಿ ಸಕ್ರಿಯವಾಗಿರಲಿಲ್ಲ. ಹೀಗಿದ್ದಾಗ ಆಕಸ್ಮಿಕವಾಗಿ ರಾಜಕಾರಣದ ತೆಕ್ಕೆಗೆ ಬಂದದ್ದು 2005ನೇ ಇಸವಿಯಲ್ಲಿ.
ಆಗ ಚಾಮರಾಜಪೇಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಅಂದಿನ ಯುಪಿಎ ಸರ್ಕಾರ ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಿಸಿತು. ದೊಡ್ಡ ಹುದ್ದೆ ದೊರೆತ ಕಾರಣದಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದೇ ಸಂದರ್ಭದಲ್ಲಿ ಕೊಳಗೇರಿ ವಾಸಿಗಳು ಮತ್ತು ಬಡವರನ್ನು ಸಂಘಟಿಸಿ ಭೂಗಳ್ಳರ ವಿರುದ್ಧ ಸಮರ ಸಾರಿದ್ದ ಮಾಜಿ ಪ್ರಧಾನಿ ದೇವೇಗೌಡರು ದರಿದ್ರ ನಾರಾಯಣ ಎಂಬ ಅಭಿಯಾನ ಹಮ್ಮಿಕೊಂಡಿದ್ದರು. ಚಾಮರಾಜಪೇಟೆಯಲ್ಲಿ ಉಪ ಚುನಾವಣೆ ದಿನಾಂಕ ಘೋಷಣೆಯಾದ ಕಾರಣ ದೇವೇಗೌಡರ ಕಣ್ಣಿಗೆ ಬಿದ್ದಿದ್ದು 35ರ ಹರೆಯದ ಯುವಕ ಜಮೀರ್ ಅಹಮ್ಮದ್ ಖಾನ್.
ಆಗ ಜೆಡಿಎಸ್ನಿಂದ ಜಮೀರ್ ಅವರನ್ನು ದೇವೇಗೌಡರು ಚಾಮರಾಜಪೇಟೆಯಿಂದ ಕಣಕ್ಕಿಳಿಸಿದರು. 80ರ ದಶಕದಲ್ಲಿ ಮೂರು ಬಾರಿ ಗೆಲುವು ಪಡೆದಿದ್ದು ಹೊರತುಪಡಿಸಿದರೆ ಚಾಮರಾಜಪೇಟೆ ರಾಜಕೀಯವಾಗಿ ಜನತಾ ಪರಿವಾರದ ಭದ್ರಕೋಟೆಯಾಗಿರಲಿಲ್ಲ. ಕ್ಷೇತ್ರವನ್ನು ಕಾಂಗ್ರೆಸ್ ನಾಯಕರೆ ಬಹುತೇಕ ಪ್ರತಿನಿಧಿಸಿದ್ದರು. ಆಗ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದರೂ ಕಾಂಗ್ರೆಸ್ ಮಾಜಿ ಶಾಸಕ ಆರ್ ವಿ ದೇವರಾಜ್ ಅವರನ್ನು ಕಣಕ್ಕಿಳಿಸಿತ್ತು.
ಈ ಸುದ್ದಿ ಓದಿದ್ದೀರಾ? ನಮ್ಮ ಸಚಿವರು | ದಿನೇಶ್ ಗುಂಡೂರಾವ್: ವರ್ಚಸ್ಸಷ್ಟೇ ಸಾಲದು; ಅಭಿವೃದ್ಧಿಗೂ ಬೇಕಿದೆ ಒತ್ತು
ಉಪಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ ದೇವೇಗೌಡರು ದರಿದ್ರ ನಾರಾಯಣ ಅಭಿಯಾನದ ಜೊತೆಯಲ್ಲಿ ಜಮೀರ್ ಪರ ಮನೆಮನೆಗೂ ಹೋಗಿ ಪ್ರಚಾರ ನಡೆಸಿದರು.ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿದರೂ ಕಡಿಮೆ ಅಂತರದಿಂದ ಜಮೀರ್ ಗೆದ್ದುಬಿಟ್ಟರು. ದಿನಗಳು ಕಳೆದಂತೆ ಜೆಡಿಎಸ್ ಮಾತ್ರವಲ್ಲದೆ ರಾಜ್ಯದ ಅಲ್ಪಸಂಖ್ಯಾತ ನಾಯಕರಾಗಿ ಚಾಮರಾಜಪೇಟೆ ಶಾಸಕ ಬೆಳೆಯುತ್ತ ಬಂದರು. 2006ರಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸಿದ ಕಾರಣ ಕಾಂಗ್ರೆಸ್ – ಜೆಡಿಎಸ್ ಸರ್ಕಾರ ಪತನವಾಗಿ ಟ್ವೆಂಟಿ ಟ್ವೆಂಟಿ ಸರ್ಕಾರ ರಚನೆಯಾಗಿತ್ತು. ಬಿಜೆಪಿ ಸರ್ಕಾರ ರಚನೆಯಾಗಲು ಹೆಚ್ಡಿಕೆಯೊಂದಿಗೆ ಜಮೀರ್ ಪಾತ್ರವೂ ಪ್ರಮುಖವಾಗಿತ್ತು.
ಹೆಚ್ಚಾದ ಜಮೀರ್ ವರ್ಚಸ್ಸು, ಕಾಂಗ್ರೆಸ್ ಸೇರ್ಪಡೆ
ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಜಮೀರ್ ಅವರು ಹಜ್ ಮತ್ತು ವಕ್ಫ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಚಿವರಾದ ನಂತರ ಇವರ ವರ್ಚಸ್ಸು ಇನ್ನಷ್ಟು ಹೆಚ್ಚಾಯಿತು. 2008, 2013ರಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಜಮೀರ್ ಅಹಮದ್ ಖಾನ್ ಗೆಲುವು ಸಾಧಿಸಿದ್ದರು. ಪ್ರಭಾವಿ ನಾಯಕರಾಗಿದ್ದ ಜಮೀರ್ ಮುಂದಿನ ದಿನಗಳಲ್ಲಿ ಹೆಚ್ಡಿಕೆ ಜೊತೆ ವೈಮನಸ್ಸು ಶುರುವಾಯಿತು. ಅಲ್ಲದೆ 2016ರಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ವಿರುದ್ಧವಾಗಿ ಅಡ್ಡ ಮತದಾನ ಮಾಡಿದರು. ಈ ಕಾರಣದಿಂದ ಜೆಡಿಎಸ್ನಿಂದ ಜಮೀರ್ ಅವರನ್ನು ಅಮಾನತು ಮಾಡಲಾಯಿತು.
ಅಮಾನತು ಮಾಡಿದ ಕಾರಣದಿಂದ ಜೆಡಿಎಸ್ ವಿರುದ್ಧ ಸಿಡಿದೆದ್ದ ಜಮೀರ್ ತಮ್ಮ ಇತರೆ ಬೆಂಬಲಿಗೆ ಶಾಸಕರ ಜೊತೆಗೂಡಿ ಸಿದ್ದರಾಮಯ್ಯ ನೇತೃತ್ವದಲ್ಲಿ 2016ರಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು. ಅಂದಿನಿಂದ ಸಿದ್ದರಾಮಯ್ಯ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. 2018ರ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸಿದರು. ಸಿದ್ದರಾಮಯ್ಯನವರ ಮೊದಲ ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅನ್ನ ಭಾಗ್ಯದ ನಂಟಿನಲ್ಲಿ ಜಮೀರ್ ಪಾಲು ಒಂದಿಷ್ಟು ಇದೆ.
ಈ ಸುದ್ದಿ ಓದಿದ್ದೀರಾ ನಮ್ಮ ಸಚಿವರು | ಕೆ ಎಚ್ ಮುನಿಯಪ್ಪ: ದಲಿತ ರಾಜಕಾರಣದ ಅನಪೇಕ್ಷಿತ ಮಾದರಿಯೇ?
ಬೆಂಗಳೂರಿನ ರಾಜಕೀಯದಲ್ಲಿ ಜಮೀರ್ ಅಹ್ಮದ್ ಖಾನ್ ಕೂಡ ಪ್ರಭಾವಿಯಾಗಿದ್ದಾರೆ. 2015ರಲ್ಲಿ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿತ್ತು. ಆದರೆ ಮೇಯರ್ ಪಟ್ಟವನ್ನು ಬಿಜೆಪಿ ಕೈ ತಪ್ಪಿಸುವುದರ ಹಿಂದೆ ಜಮೀರ್ ಅಹ್ಮದ್ ತಂತ್ರ ಕೆಲಸ ಮಾಡಿತ್ತು ಎನ್ನಲಾಗಿದೆ.
ಈಗ ಸತತ ಐದನೇ ಬಾರಿ ಗೆದ್ದಿರುವ ಜಮೀರ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಮತ್ತೊಮ್ಮೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾರ ವ್ಯವಹಾರಗಳ ಸಚಿವರಾಗಿದ್ದಾರೆ. ಸಚಿವರಾದ ವೇಳೆಯಲ್ಲಿ ಇಲಾಖೆ ಹಾಗೂ ಸಾರ್ವಜನಿಕರಿಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ್ದಾರೆ. ಜೊತೆಗೆ ಸಹಾಯ ಕೋರಿ ಬಂದವರಿಗೆ ಯಾವುದೇ ಭೇದ ಭಾವ ಮಾಡುವುದಿಲ್ಲ ಎಂಬುದು ಜಮೀರ್ ಅಹ್ಮದ್ ಒಳ್ಳೆಯ ಗುಣವಾಗಿದೆ ಎನ್ನುತ್ತಾರೆ ಕಾರ್ಯಕರ್ತರು.
ಎಸಿಬಿ ದಾಳಿ, ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷ್ಯ
ಪ್ರಭಾವಿ ಸಚಿವರಾದ ಜಮೀರ್ ಅವರಿಗೆ ಜನಪ್ರಿಯತೆಯಷ್ಟೆ ವಿವಾದಗಳು ಕೂಡ ಸುತ್ತಿಕೊಂಡಿವೆ. ಬೆಂಗಳೂರಿನಲ್ಲಿ ಅವರು ಕಟ್ಟಿಸಿರುವ ಕೋಟ್ಯಂತರ ಬೆಲೆ ಬಾಳುವ ಬೃಹತ್ ಬಂಗಲೆಯಂತಹ ಮನೆ ಹಲವು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಈ ಐಷಾರಾಮಿ ಮನೆಯ ವಿಚಾರವಾಗಿಯೇ ಜಮೀರ್ ನಿವಾಸದ ಮೇಲೆ ಇಡಿ, ಎಸಿಬಿ ದಾಳಿಯೂ ಕೂಡ ನಡೆದಿದೆ.
ಮಧ್ಯಮ ವರ್ಗದ ಜನರೇ ನೆಲೆಸಿರುವ ಚಾಮರಾಜಪೇಟೆ ಕ್ಷೇತ್ರದಲ್ಲಿ ಹೇಳಿಕೊಳ್ಳುವಂಥ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂಬ ಅಭಿಪ್ರಾಯ ಕೂಡ ಇದೆ. ಸಂಚಾರ, ತ್ಯಾಜ್ಯ ವಿಲೇವಾರಿ, ರಸ್ತೆ ವಿಸ್ತರಣೆಯಂತಹ ಸಮಸ್ಯೆಗಳು ಹೆಚ್ಚಿವೆ. ಕಿರಿದಾದ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ ಎಂಬುದು ಸ್ಥಳೀಯರ ಬೇಸರ. ಕ್ಷೇತ್ರದಲ್ಲಿ ಸುಮಾರು 30ಕ್ಕೂ ಹೆಚ್ಚು ಕೊಳಗೇರಿಗಳಿದ್ದು, ಆ ಎಲ್ಲ ನಿವಾಸಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಸೂಕ್ತ ರೀತಿ ಸ್ಲಂ ಅಭಿವೃದ್ಧಿಗೊಂಡಿಲ್ಲ. ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಕ್ಷೇತ್ರದ ಅಭಿವೃದ್ಧಿಗಿಂತ ವೈಯಕ್ತಿಕವಾಗಿ ಸಹಾಯ ಮಾಡಿ ಸಮಾಧಾನಪಡಿಸಲು ಯತ್ನಿಸುತ್ತಾರೆ ಎನ್ನುವ ಆರೋಪ ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ.