ಕರ್ನಾಟಕದಲ್ಲಿ ಎಗ್ಗಿಲ್ಲದೆ ಬೆಳೆಯತೊಡಗಿದ ಸಂಘಪರಿವಾರದ ಹತ್ತು ಹಲವು ಹಿಂಡುಗಳ ಹಿಂಸಾತ್ಮಕ ಆಕ್ರಮಣಕಾರಿ ಚಟುವಟಿಕೆಗಳು ಹಾಗೂ ಅದಕ್ಕೆ ಇಲ್ಲಿನ ಪ್ರಜ್ಞಾವಂತ, ಪ್ರಜಾಸತ್ತಾತ್ಮಕ ವಲಯ ಪ್ರತಿರೋಧ ಒಡ್ಡಲು ಹೆಣಗುತ್ತಿದ್ದ ವಾತಾವರಣವು ಆಕೆಯನ್ನು ಕೇವಲ ಪತ್ರಿಕಾ ವೃತ್ತಿಗಷ್ಟೇ ಸೀಮಿತವಾಗಿ ಉಳಿಯಲು ಬಿಡಲಿಲ್ಲ. ತಮ್ಮ ತಂದೆಯ ಕಾಲದ ‘ಲಂಕೇಶ್ ಪತ್ರಿಕೆ’ಯ ಚೌಕಟ್ಟನ್ನೂ ಮೀರಿ ಆಕೆ ತನ್ನ ಪತ್ರಿಕೆಯನ್ನು ಹೆಚ್ಚುಹೆಚ್ಚು ಸಾಮಾಜಿಕ ಚಳವಳಿಗಳ ನಡುವಿಗೆ ತಂದರು
ಇಸವಿ 2000ದಲ್ಲಿ ಪಿ ಲಂಕೇಶ್ ಮರಣದ ಬಳಿಕ ‘ಲಂಕೇಶ್ ಪತ್ರಿಕೆ’ಯನ್ನು ಮುನ್ನಡೆಸುವ ಹೊಣೆಯನ್ನು ಗೌರಿ ಹೊತ್ತಾಗ ಅವರು ಕನ್ನಡ ಪತ್ರಿಕಾ ಲೋಕದಲ್ಲಿ ಅಷ್ಟೇನೂ ಪರಿಚಿತರಾಗಿರಲಿಲ್ಲ, ಸಾಹಿತ್ಯ ವಲಯದಲ್ಲೂ ಗುರುತಾದವರಲ್ಲ. ಅವರಿಗೆ ಕನ್ನಡ ಬರವಣಿಗೆ ಅಷ್ಟೇನೂ ಸಿದ್ಧಿಸಿರಲಿಲ್ಲ. ಆದರೆ ಸುಮಾರು 17 ವರ್ಷ ಅವರು ಪಟ್ಟು ಬಿಡದೆ ಪತ್ರಿಕೆ ನಡೆಸುತ್ತಲೇ ತಮ್ಮ ಕನ್ನಡ ಬರವಣಿಗೆಯನ್ನು ಆಶ್ಚರ್ಯವೆನ್ನಿಸುವಷ್ಟು ಉತ್ತಮಪಡಿಸಿಕೊಂಡಿದ್ದಷ್ಟೇ ಅಲ್ಲ, ತಮ್ಮ ವ್ಯಕ್ತಿತ್ವವನ್ನೂ ಅದ್ಭುತವಾಗಿ ಮಾರ್ಪಡಿಸಿಕೊಂಡಿದ್ದು ಸಣ್ಣ ವಿಷಯವಲ್ಲ.
ಗೌರಿ ಪ್ರತಿಷ್ಠಿತ ವರ್ಗದ ಹಿನ್ನೆಲೆಯಿಂದ ಬಂದವರು; ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದು, ರಾಷ್ಟ್ರೀಯ ಮಟ್ಟದ ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲಸ ಮಾಡಿ ಹೆಸರು ಗಳಿಸಿದ್ದವರು. ಅದರ ಜೊತೆಗೆ ಲಂಕೇಶರು ಆಕೆಯೊಂದಿಗೆ ಪತ್ರಗಳ ಮೂಲಕ ನಡೆಸುತ್ತಿದ್ದ ನಿರಂತರ ಚರ್ಚೆ-ಜಿಜ್ಞಾಸೆಗಳು ಅವರಲ್ಲಿ ಸಾಮಾಜಿಕ ನ್ಯಾಯದ ಗ್ರಹಿಕೆಯನ್ನು ಸಾಕಷ್ಟು ಆಳವಾಗಿ ಬೇರೂರಿಸಿದ್ದವು. ಭಾರತದ ಸಂವಿಧಾನ ಮತ್ತು ಅಹಿಂಸಾ ಮಾರ್ಗ ಅವರ ಧೋರಣೆಗಳಿಗೆ ಭದ್ರವಾದ ತಳಹದಿಯಾಗಿತ್ತು.
ಆದರೆ ಸರಿಸುಮಾರು 2000ದಿಂದಲೇ ಕರ್ನಾಟಕದಲ್ಲಿ ಎಗ್ಗಿಲ್ಲದೆ ಬೆಳೆಯತೊಡಗಿದ ಸಂಘಪರಿವಾರದ ಹತ್ತು ಹಲವು ಹಿಂಡುಗಳ ಹಿಂಸಾತ್ಮಕ ಆಕ್ರಮಣಕಾರಿ ಚಟುವಟಿಕೆಗಳು ಹಾಗೂ ಅದಕ್ಕೆ ಇಲ್ಲಿನ ಪ್ರಜ್ಞಾವಂತ, ಪ್ರಜಾಸತ್ತಾತ್ಮಕ ವಲಯ ಪ್ರತಿರೋಧ ಒಡ್ಡಲು ಹೆಣಗುತ್ತಿದ್ದ ವಾತಾವರಣವು ಆಕೆಯನ್ನು ಕೇವಲ ಪತ್ರಿಕಾ ವೃತ್ತಿಗಷ್ಟೇ ಸೀಮಿತವಾಗಿ ಉಳಿಯಲು ಬಿಡಲಿಲ್ಲ. ತಮ್ಮ ತಂದೆಯ ಕಾಲದ ‘ಲಂಕೇಶ್ ಪತ್ರಿಕೆ’ಯ ಚೌಕಟ್ಟನ್ನೂ ಮೀರಿ ಆಕೆ ತನ್ನ ಪತ್ರಿಕೆಯನ್ನು ಹೆಚ್ಚುಹೆಚ್ಚು ಸಾಮಾಜಿಕ ಚಳವಳಿಗಳ ನಡುವಿಗೆ ತಂದರು; ಅದರಲ್ಲಿ ಸಾಮಾನ್ಯವಾಗಿ ಮುಖ್ಯವಾಹಿನಿ ಮಾಧ್ಯಮಗಳು ನಡೆಸುವ ‘ಬ್ಯಾಲೆನ್ಸಿಂಗ್ ಆ್ಯಕ್ಟ್’ಅನ್ನು ದಾಟಿ, ಶೋಷಿತ, ದಮನಿತ, ಪೀಡಿತ ಜನಸಮುದಾಯಗಳ ಪರವಾಗಿ – ಮುಖ್ಯವಾಗಿ ದಲಿತರು, ರೈತ-ಕಾರ್ಮಿಕರು, ಮಹಿಳೆಯರು, ಲಿಂಗತ್ವ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಮುಂತಾದವರ ಪರವಾಗಿ – ದಿಟ್ಟವೂ ನಿಖರವೂ ಆದ ನಿಲುವುಗಳನ್ನು ತೆಗೆದುಕೊಂಡರು. ಕೇವಲ ಒಬ್ಬ ಪತ್ರಕರ್ತೆಯಷ್ಟೇ ಆಗಿ ಉಳಿಯದೆ, ಒಬ್ಬ ಸಾಮಾಜಿಕ ಆ್ಯಕ್ಟಿವಿಸ್ಟ್ ಕೂಡ ಆಗಿ ರೂಪುಗೊಂಡರು. ಅದರಲ್ಲೂ ಸಂಘ ಪರಿವಾರ ಮತ್ತು ಬಿಜೆಪಿಯ ಹಿಂಸೆ ಮತ್ತು ದ್ವೇಷ ರಾಜಕಾರಣದ ವಿರುದ್ಧ ನಿರ್ಭಯವಾಗಿ ತಮ್ಮ ನಿಲುವುಗಳನ್ನು ಬರಹದಲ್ಲೂ ಭಾಷಣಗಳಲ್ಲೂ ವ್ಯಕ್ತಪಡಿಸಿದರು. ಅದಕ್ಕಾಗಿ, ಅದರ ಫಲವಾಗಿ ಅತ್ಯುನ್ನತ ಬಲಿದಾನವನ್ನೇ ನೀಡಿದರು.

ನನಗೆ ಗೌರಿ ವ್ಯಕ್ತಿಗತವಾಗಿ ಪರಿಚಯವಾಗಿದ್ದು ನಾವು ಅಜ್ಞಾತವಾಸದಿಂದ ಮುಖ್ಯವಾಹಿನಿಗೆ ಬಂದ ಮೇಲೆಯೇ. ಅದಕ್ಕೆ ಮೊದಲು ಅವರ ಬರಹಗಳ ಮೂಲಕವೇ ಪರಿಚಯ. ಬಹುಶಃ ಅವರಿಗೂ ನಾನು ಮಲ್ಲಿಗೆಯ ತಂದೆ ಎಂಬುದಕ್ಕಿಂತ ಹೆಚ್ಚಿನ ಪರಿಚಯ ಇದ್ದಿರಲಿಲ್ಲ. ಜೊತೆಗೆ ನಮ್ಮ ಒಟ್ಟು ಬಳಗದ ಹೋರಾಟಗಳ ಭಾಗವಾಗಿ ನನ್ನ ಹೆಸರೂ ಗೊತ್ತಿದ್ದಿರಬಹುದು ಅಷ್ಟೇ. ಅದಕ್ಕಿಂತ ಸುಮಾರು ಎರಡು-ಎರಡೂವರೆ ವರ್ಷ ಮೊದಲು ನಾನು ಅವರಿಗೆ ಬರೆದಿದ್ದ ಒಂದು ಪತ್ರದ ಮೂಲಕವೂ ನಮ್ಮ ಪರೋಕ್ಷ ಪರಿಚಯ ಆಗಿತ್ತು.
ಇದನ್ನು ಓದಿ ಗೌರಿ ನೆನಪು | ಗೌರಿ ಲಂಕೇಶ್ ಎಂಬ ಬೆಳಕಿನ ಕಿರಣ; ಬಡವರ ಸಂಗಾತಿ ನನ್ನವ್ವ
ಗೌರಿಯ ಹತ್ಯೆ ವಿರೋಧಿಸಿ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ ನಡೆದ ದಿನ ಅದನ್ನು ಮುಗಿಸಿ ನಾನು ಕೆಂಗೇರಿಯ ಮನೆಗೆ ಹೋಗಲು ಮೆಟ್ರೋ ರೈಲಿನಲ್ಲಿ ನಾಯಂಡಹಳ್ಳಿಯಲ್ಲಿ ಇಳಿದಾಗ ನನ್ನ ಅಂಗಿಯ ಮೇಲೆ ಹಚ್ಚಿಕೊಂಡಿದ್ದ ಗೌರಿಯ ಚಿತ್ರವಿದ್ದ ಬ್ಯಾಡ್ಜ್ ನೋಡಿ ಅಲ್ಲಿನ ಸಿಬ್ಬಂದಿಯೊಬ್ಬ ಅದನ್ನು ತನಗೆ ಕೊಡುವಂತೆ ಕೇಳಿದ. ನಾನು ತಮಾಷೆ ಮಾಡಲು, “ಅದಕ್ಕೆ ಇಪ್ಪತ್ತು ರೂಪಾಯಿ ಕೊಟ್ಟು ಕೊಂಡಿದ್ದೀನಪ್ಪ” ಎಂದಾಗ ಆತ ಹಿಂದೆಮುಂದೆ ನೋಡದೆ ಇಪ್ಪತ್ತು ರೂಪಾಯಿ ಕೊಡಲು ಮುಂದಾಗಿದ್ದ. ನಾನು ಅವನಿಗೆ ಬ್ಯಾಡ್ಜ್ ಕೊಟ್ಟು, ಗೌರಿಯ ಬಗ್ಗೆ ಆತನಿಗೆ ಹೇಗೆ ಗೊತ್ತು ಎಂದಾಗ, “ಸಾರ್, ನಾನೇನೂ ಹೆಚ್ಚಿಗೆ ಓದಿದವನಲ್ಲ. ಆದರೆ ಆಕೆ ಒಬ್ಬರು ಬಡವರ ಪರವಾಗಿ ಹೋರಾಟ ಮಾಡುತ್ತಿದ್ದವರು ಎನ್ನುವಷ್ಟು ಗೊತ್ತಿದೆ. ಅವರನ್ನು ಕೊಂದವರಿಗೆ ಎಂದೂ ಶಾಂತಿ ಸಿಗಬಾರದು ಸಾರ್!” ಎಂದು ಭಾವುಕವಾಗಿ ಹೇಳಿದ್ದು ನನ್ನನ್ನೂ ಭಾವುಕಗೊಳಿಸಿತ್ತು
ಗೌರಿ ಇಂದೂ ಮುಂದೂ ಬದುಕಿರುವುದು ಇಂತಹ ಅದೆಷ್ಟೋ ಅನಾಮಿಕ ಅಮಾಯಕ ಜನಗಳ ಮನದಾಳದಲ್ಲೇ ಅಲ್ಲವೆ?

ಸಿರಿಮನೆ ನಾಗರಾಜ್
ಲೇಖಕ, ಸಾಮಾಜಿಕ ಚಿಂತಕ