- ದೇವಸ್ಥಾನದ ಬಳಿ ಮಲಗಿದ್ದ ವೇಳೆ ದಾಳಿ ಮಾಡಿರುವ ಕಾಡಾನೆ
- ಜಾತ್ರೆ ಹಿನ್ನೆಲೆ ದೇವಸ್ಥಾನದ ಮುಂದಿನ ಚಪ್ಪರದಲ್ಲಿ ಮಲಗಿದ್ದರು
ದೇವಾಲಯದ ಬಳಿ ಮಲಗಿದ್ದ ನಾಲ್ವರು ಬಾಲಕರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಬಾಲಕರು ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಸಮೀಪದ ಎತ್ತೆಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಣಿಕಂಠ (17), ಅರಸ (12), ಸ್ವಾಮಿ (11) ಹಾಗೂ ಅಭಿ (12) ಗಾಯಗೊಂಡಿದ್ದು, ಎಲ್ಲರನ್ನೂ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರು ಬಾಲಕರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎತ್ತೆಗೌಡನದೊಡ್ಡಿ ಗ್ರಾಮದಲ್ಲಿ ಜಡೇಸ್ವಾಮಿ ದೇವಾಲಯದ ಜಾತ್ರೆ ನಡೆಯಲಿದೆ. ಈ ಹಿನ್ನೆಲೆ ದೇವಸ್ಥಾನದ ಮುಂದೆ ಚಪ್ಪರ ಹಾಕಿ ಗ್ರಾಮಸ್ಥರು ಜಾತ್ರೆಗೆ ಸಿದ್ಧತೆ ನಡೆಸುತ್ತಿದ್ದರು. ದೇವಾಲಯದ ಕೆಲಸ ಮುಗಿಸಿ 20ಕ್ಕೂ ಹೆಚ್ಚು ಗ್ರಾಮಸ್ಥರ ಜೊತೆಗೆ ಈ ಬಾಲಕರು ದೇವಸ್ಥಾನದ ಬಳಿ ಮಲಗಿದ್ದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ನೆರವಿಗೆ ಧಾವಿಸುವಂತೆ ಸುಡಾನ್ನಲ್ಲಿ ಸಿಲುಕಿರುವ ಹಕ್ಕಿಪಿಕ್ಕಿ ಸಮುದಾಯದ ಜನ ಮನವಿ
ದಿಢೀರನೇ ಕಾಡಾನೆಯೊಂದು ದಾಳಿ ಮಾಡಿದ್ದು, ದೇಗುಲಕ್ಕೆ ಹಾಕಿದ್ದ ಚಪ್ಪರ ದ್ವಂಸ ಮಾಡಿ ಮಲಗಿದ್ದವರ ಮೇಲೆ ಎರಗಿದೆ. ಈ ವೇಳೆ ನಾಲ್ವರು ಬಾಲಕರು ಗಾಯಗೊಂಡಿದ್ದಾರೆ. ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.