- ಕಳ್ಳತನ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲು
- ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ್ದ ಯೆಮನ್ ಪ್ರಜೆ
ಬೆಂಗಳೂರಿನ ಕಮ್ಮನಹಳ್ಳಿಯ ಎಂಪೈರ್ ಸರ್ಕಲ್ ಬಳಿ 63 ವರ್ಷದ ಯೆಮನ್ ಪ್ರಜೆಯೊಬ್ಬರಿಂದ ಮೂವರು ದುಷ್ಕರ್ಮಿಗಳ ತಂಡವೊಂದು ತಾವು ಪೊಲೀಸರೆಂದು ಹೇಳಿಕೊಂಡು 5,000 ಡಾಲರ್ (ಅಂದಾಜು ₹4 ಲಕ್ಷ) ದರೋಡೆ ಮಾಡಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗೇದ್ ಸೈಫ್ ಮೊಕ್ಬೆಲ್ ಹಣ ಕಳೆದುಕೊಂಡವರು. ಏಪ್ರಿಲ್ 22 ರಂದು ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಇವರು ಕಮ್ಮನಹಳ್ಳಿ ಎಂಪೈರ್ ಹೋಟೆಲ್ನಲ್ಲಿ ತಂಗಿದ್ದರು.
ಏಪ್ರಿಲ್ 30 ರಂದು ಸಂಜೆ 7 ಗಂಟೆ ಸುಮಾರಿಗೆ ಕಮ್ಮನಹಳ್ಳಿಯ ಎಂಪೈರ್ ಹೋಟೆಲ್ಗೆ ತೆರಳುತ್ತಿದ್ದ ಅವರನ್ನು ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ‘ನೀವು ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಕಾರಣ ನಿಮ್ಮನ್ನು ಪರೀಕ್ಷಿಸಬೇಕು’ ಎಂದು ಹೇಳಿ, ಅವರನ್ನು ಕೆಳಗಿಳಿಸಿದ್ದಾರೆ. ಬಳಿಕ, ಅವರ ಜೇಬಿನಿಂದ $5,000 ತಕಿತ್ತುಕೊಮಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
“ಸರಳ ಉಡುಪಿನಲ್ಲಿದ್ದ ಮೂವರು ತಮ್ಮನ್ನು ತಾವು ಪೋಲೀಸ್ ಎಂದು ಪರಿಚಯಿಸಿಕೊಂಡಿದ್ದಾರೆ. ಬಿಳಿ ಕಾರಿನಲ್ಲಿ ಬಂದಿದ್ದರು. ಹತ್ತಿರದ ಹೋಟೆಲ್ಗೆ ಕರೆದೊಯ್ದು ಐಸ್ ಕ್ರೀಮ್ ಖರೀದಿಸಿದರು. ಅವರು ನಿಜವಾದ ಪೊಲೀಸರು ಎಂದು ನಂಬುವಂತೆ ಗುರುತಿನ ಚೀಟಿಗಳನ್ನು ತೋರಿಸಿದರು. ನನ್ನೋಡನೆ ಕೆಲಕಾಲ ಮಾತನಾಡಿದರು” ಎಂದು ಮಗೇದ್ ಸೈಫ್ ಮೊಕ್ಬೆಲ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜಧಾನಿಯಲ್ಲಿ ಮೇ 6ರವರೆಗೂ ಮಳೆ: ಹವಾಮಾನ ಇಲಾಖೆ
ಶಂಕಿತರ ಬಗ್ಗೆ ನಮಗೆ ಕೆಲವು ಸುಳಿವು ಸಿಕ್ಕಿದೆ. ಆದಷ್ಟು ಬೇಗ ಅವರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಣಸವಾಡಿ ಪೊಲೀಸರು ಕಳ್ಳತನ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.