ಬೆಂಗಳೂರಿನಲ್ಲಿ ಕೆಲಸ ಮುಗಿಸಿ ಮನೆ ತಲುಪಿದರೇ ಸಾಕಪ್ಪಾ ಎಂದು ಉದ್ಯೋಗಿಗಳು ಮನೆ ಕಡೆ ಮುಖ ಮಾಡುವ ಹೊತ್ತಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಬೆಂಗಳೂರು ಒಟ್ಟು 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ತಮ್ಮ ಅಭ್ಯರ್ಥಿಗಳ ಬೆಂಬಲಕ್ಕಾಗಿ ರಾಷ್ಟ್ರೀಯ ಪಕ್ಷದ ರಾಜಕೀಯ ದಿಗ್ಗಜರು ರಾಜಧಾನಿಯತ್ತ ದಾಪುಗಾಲಿಡುತ್ತಾ ಮತಯಾಚನೆಗಾಗಿ ಬರುತ್ತಿದ್ದಾರೆ. ಆದರೆ, ಈ ಪ್ರಚಾರ ನಗರದ ಜನರ ಸಂಚಾರಕ್ಕೆ ಸಂಕಷ್ಟ ತರುತ್ತಿದೆ.
ಬೆಂಗಳೂರು ಸಂಚಾರ ದಟ್ಟಣೆಗೆ ಹೆಸರುವಾಸಿಯಾದ ನಗರ. ಈ ನಗರದಲ್ಲಿ ಒಮ್ಮೆ ಟ್ರಾಫಿಕ್ನಲ್ಲಿ ಸಿಲುಕಿದರೆ ತಾಸುಗಟ್ಟಲೆ ರಸ್ತೆಯಲ್ಲೇ ಕಾಯಬೇಕಾಗುತ್ತದೆ. ಅದರಲ್ಲೂ ಪೀಕ್ ಅವರ್ನಲ್ಲಿ ಸವಾರನ ಪರಿಸ್ಥಿತಿ ಹೇಳತೀರದು. ಈ ನಗರದಲ್ಲಿ ಹೆಚ್ಚಾಗಿ ಐಟಿ-ಬಿಟಿ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯ ನಿರ್ವಹಿಸುವವರ ಪೈಕಿ ಹೆಚ್ಚಿನ ಜನ ಸ್ವಂತ ವಾಹನದ ಮೇಲೆ ಒಲುವು ಹೊಂದಿದ್ದಾರೆ. ನಗರದಲ್ಲಿ ವಾಹನಗಳ ಸಂಖ್ಯೆ, ಜನಸಂಖ್ಯೆ ಹೆಚ್ಚಾದಂತೆ ಸಂಚಾರ ದಟ್ಟಣೆಯೂ ಹೆಚ್ಚಾಗುತ್ತಿದೆ.
ಇಂತಹ ಸಮಯದಲ್ಲಿ ಚುನಾವಣೆ ಪ್ರಚಾರವೆಂದು ಅಭ್ಯರ್ಥಿಗಳ ಪರವಾಗಿ ದಿನಕ್ಕೊಬ್ಬರು ನಾಯಕರು ಮತಯಾಚನೆಗಾಗಿ ನಗರದತ್ತ ಬರುತ್ತಿದ್ದಾರೆ. ಏ.29ರಂದು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮತಯಾಚನೆಗಾಗಿ ಬೆಂಗಳೂರಿಗೆ ಬರುತ್ತಿದ್ದು, ಈ ವೇಳೆ, ಮಧ್ಯಾಹ್ನ 2ರಿಂದ ಸಂಜೆ 7.30ರವರೆಗೆ ಮಾಗಡಿ ರಸ್ತೆಯ ನೈಸ್ ಜಂಕ್ಷನ್ನಿಂದ ಸುಮನಹಳ್ಳಿ ಸರ್ಕಲ್ವರೆಗೂ ನಗರ ಸಂಚಾರ ಪೊಲೀಸ್ ಇಲಾಖೆ ವಾಹನಗಳ ಸಂಚಾರವನ್ನು ರದ್ದುಪಡಿಸಿದೆ. ಪ್ರಧಾನಿ ಮೋದಿ ಅವರು ಬೆಂಗಳೂರಿನ ಹೃದಯ ಭಾಗದ ರಸ್ತೆಯಲ್ಲಿ 8 ರಿಂದ 10 ಕಿ.ಮೀ ವರೆಗೂ ರ್ಯಾಲಿ ಹಮ್ಮಿಕೊಂಡಿದ್ದಾರೆ.
ಓಲ್ಡ್ ಏರ್ಪೋರ್ಟ್ ರಸ್ತೆ, ಕಬ್ಬನ್ ರಸ್ತೆ, ಅಂಬೇಡ್ಕರ್ ರಸ್ತೆ, ಕೃಂಬಿಗಲ್ ರಸ್ತೆ, ದೇವಾಂಗ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಡಿಕನ್ಸನ್ ರಸ್ತೆ, ಲಾಲ್ಬಾಗ್ ವೆಸ್ಟ್ ಗೇಟ್ ರಸ್ತೆ, ಕೆ.ಆರ್.ಸರ್ಕಲ್, ಆರ್.ವಿ.ಕಾಲೇಜ್ ರಸ್ತೆ, ಲಾಲ್ಬಾಗ್ ಮುಖ್ಯ ರಸ್ತೆ, ಬಸನವಗುಡಿ 50 ಅಡಿ ರಸ್ತೆ, ಕೆನರಾ ಬ್ಯಾಂಕ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಪ್ರದೇಶಗಳು ಸಂಪೂರ್ಣ ಜನನಿಬಿಡ ಪ್ರದೇಶಗಳಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ನಾಗರಿಕರು ದೂರುತ್ತಿದ್ದಾರೆ.
ಅದರಲ್ಲೂ ನಗರದಲ್ಲಿ ಕೆಲಸ ಮುಗಿಸಿ ಮನೆ ತಲುಪಿದರೇ ಸಾಕಪ್ಪಾ ಎಂದು ಉದ್ಯೋಗಿಗಳು ಮನೆ ಕಡೆ ಮುಖ ಮಾಡುವ ಹೊತ್ತಿನಲ್ಲಿ ರ್ಯಾಲಿ ನಡೆಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಉದ್ಯೋಗಿ ಸಂತೋಷ್, “ಬೆಂಗಳೂರಿನ ಹೃದಯ ಭಾಗದಲ್ಲಿ ಪೀಕ್ ಅವರ್ ನಲ್ಲಿ ಪ್ರಧಾನಿ ಮೋದಿ ಅವರು ರೋಡ್ ಶೋ ನಡೆಸುತ್ತಿದ್ದಾರೆ. ಈ ಮಾರ್ಗದಲ್ಲಿ ದಿನನಿತ್ಯ ಕನಿಷ್ಠ 10 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಶಾಲಾ ಮಕ್ಕಳು, ಐಟಿ ಉದ್ಯೋಗಿಗಳು ದಿನಗೂಲಿ ನೌಕರರು ಸೇರಿದಂತೆ ಎಲ್ಲ ಉದ್ಯೋಗಿಗಳು ಮನೆಗೆ ತೆರಳುವ ಸಮಯದಲ್ಲಿ ಮೋದಿ ಅವರು ರೋಡ್ ಶೋ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಪ್ರಧಾನಿ ಮೋದಿ: ಎಲ್ಲೆಲ್ಲಿ ಸಂಚಾರ ನಿರ್ಬಂಧ? ಇಲ್ಲಿದೆ ನೋಡಿ!
“ರೋಡ್ ಶೋ ಕಾರಣ ರಸ್ತೆ ಬಂದ್ ಮಾಡಿರುವುದರಿಂದ ದಿನದ ಅರ್ಧ ದಿನ ಸುತ್ತಿ ಬಳಸಿ ನಮ್ಮ ಮನೆಗೆ ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ಅವಲಂಬಿಸಿ ಸಾವಿರಾರು ಬೀದಿ ಬದಿ ವ್ಯಾಪಾರಸ್ಥರು ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಭದ್ರತೆಯ ದೃಷ್ಟಿಯಿಂದ ಅವರೆಲ್ಲರಿಗೂ ನೋಟಿಸ್ ನೀಡಿ ಅವರೆಲ್ಲರ ಒಂದು ದಿನದ ಅನ್ನಕ್ಕೆ ಕೊಳ್ಳಿ ಇಟ್ಟಿದ್ದಾರೆ” ಎಂದು ದೂರಿದರು.
ಆಟೋ ಚಾಲಕ ಧನಂಜಯ ಈ ದಿನ.ಕಾಮ್ ಜತೆಗೆ ಮಾತನಾಡಿ, “ಮೋದಿ ರೋಡ್ ಶೋ ಎಂದು ನಮ್ಮ ದಿನನಿತ್ಯದ ವೇತನಕ್ಕೆ ಕಡಿತ ಹಾಕಿದ್ದಾರೆ. ಪ್ರತಿ ದಿನ ಎನಿಲ್ಲವೆಂದರೂ 1 ಸಾವಿರಿಂದ 1,500 ದಷ್ಟು ಬಾಡಿಗೆ ದುಡಿಯುತ್ತಿದ್ದೆ, ಆದರೆ ಇಂದು ಇನ್ನೂ ₹200 ಸಂಪಾದನೆಯೂ ಆಗಿಲ್ಲ” ಎಂದರು.
5 ಗಂಟೆಗಳ ಕಾಲ traffic jam ಅಂದರೆ, PM ಬರುವ ಸಮಯದಲ್ಲಿ lockdown ಮಾಡಿದ್ದರೆ ಚೆನ್ನಾಗಿತ್ತು…