ನಕಲಿ ಅಂಕಪಟ್ಟಿ ಮತ್ತು ದಾಖಲೆಗಳನ್ನು ನೀಡಿದ್ದಾರೆಂಬ ಆರೋಪದ ಮೇಲೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವು (ವಿಟಿಯು) 51 ವಿದ್ಯಾರ್ಥಿಗಳ ಪ್ರವೇಶಾತಿ ರದ್ದು ಪಡಿಸಿದೆ.
ಮೊದಲ ವರ್ಷದ ಎಂಜಿನಿಯರಿಂಗ್ ಪ್ರವೇಶಾತಿಗಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್ಐಒಎಸ್)ನಿಂದ ಅಂಕಪಟ್ಟಿ ತೆಗೆದುಕೊಂಡಿರುವದಾಗಿ 51 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಫಲಿತಾಂಶದ ಅಂಕಪಟ್ಟಿ ಸಲ್ಲಿಸಿದ್ದರು. ಆದರೆ, ಅವು ನಕಲಿ ಅಂಕಪಟ್ಟಿಗಳು ಎನ್ನಲಾಗಿದೆ.
ದಾಖಲೆಗಳ ಪರಿಶೀಲನೆಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ನಡೆಸಿದಾಗ ಅಕ್ರಮ ದೃಢಪಟ್ಟಿದೆ. ಇದಕ್ಕೂ ಮುನ್ನ ಎಲ್ಲ ಅಂಕಪಟ್ಟಿಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆ ಮಾನ್ಯ ಮಾಡಿತ್ತು. ಆದರೆ, ಕಾಲೇಜುವಾರು ಅನುಮೋದನೆ ನೀಡುವಾಗ ಆ ಅಂಕಪಟ್ಟಿಗಳನ್ನು ವಿಟಿಯು ಅಮಾನ್ಯ ಮಾಡಿದೆ.
ನಕಲಿ ಅಂಕಪಟ್ಟಿಗಳ ಹಿಂದೆ ದೊಡ್ಡ ಹಗರಣ ನಡೆದಿರುವ ಬಗ್ಗೆ ವಿಟಿಯು ಶಂಕೆ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಮತ್ತು ಎನ್ಐಓಎಸ್ಗೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಕ್ರಮವೆಸಗಿದ ವಿದ್ಯಾರ್ಥಿಗಳು ಮ್ಯಾನೇಜ್ಮೆಂಟ್ ಕೋಟಾದಡಿ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಿದ್ದರು. ವಿದ್ಯಾರ್ಥಿಗಳು ತುಮಕೂರು, ಚಿಕ್ಕಬಳ್ಳಾಪುರ ಮೂಲದವರೆಂಬ ಮಾಹಿತಿ ಸಿಕ್ಕಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನೀಡಿದ ಪ್ರಮಾಣಪತ್ರಗಳು ನಕಲಿ ಎಂದು ಸಾಬೀತಾದ ಕಾರಣ, ಪ್ರವೇಶ ಪಡೆಯಲು ಅವಕಾಶ ನೀಡಿಲ್ಲ. ಇದಕ್ಕೂ ಮುನ್ನ ತಾಂತ್ರಿಕ ಶಿಕ್ಷಣ ಇಲಾಖೆ ಈ ಎಲ್ಲ ಅಂಕಪಟ್ಟಿಗಳನ್ನೂ ಮಾನ್ಯ ಮಾಡಿದೆ. ಆದರೆ, ವಿಟಿಯು ಕಾಲೇಜುವಾರು ಅನುಮೋದನೆ ನೀಡುವಾಗ ಅಮಾನ್ಯ ಮಾಡಿದೆ.
ಈ ಸುದ್ದಿ ಓದಿದ್ದೀರಾ?: ವೇದಗಣಿತ, ಜ್ಯೋತಿಷ್ಯ ಪರಿಚಯಿಸಲು ಮುಂದಾದ ಯುಜಿಸಿ; ಎಐಡಿಎಸ್ಒ ಕಿಡಿ