ಭಾರತ ನನ್ನನ್ನು ಯಾವಾಗಲೂ ರಾಜನಂತೆ ನೋಡಿಕೊಂಡಿದೆ. ಮುಂಬೈ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ನುಡಿದಿದ್ದಾರೆ. ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದ ಬ್ರೆಟ್ ಲೀ, ಮುಂಬೈ ಮಳೆಗಾಲ, ನಗರದ ಚೈತನ್ಯ ಹಾಗೂ ಭಾರತೀಯ ಅಭಿಮಾನಿಗಳ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
“1994ರಲ್ಲಿ ಆಸ್ಟ್ರೇಲಿಯಾ ಅಂಡರ್-19 ತಂಡದೊಂದಿಗೆ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೇನೆ. ಆಗ ಮೊದಲ ಬಾರಿಗೆ ಕಾಲಿಟ್ಟ ನಗರವೇ ಮುಂಬೈ. ಬಳಿಕ ದೇಶದ ಹಲವೆಡೆ ಪ್ರವಾಸ ಮಾಡಿದ್ದರೂ, ಮುಂಬೈನ ಉತ್ಸಾಹ, ಗದ್ದಲ ಮತ್ತು ಜೀವಂತಿಕೆ ಬೇರೆಲ್ಲೂ ಸಿಗುವುದಿಲ್ಲ. ಅದಕ್ಕಾಗಿಯೇ ಈ ನಗರ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಮಳೆ ಎಷ್ಟೇ ಜೋರಾಗಿ ಬಂದರೂ ಈ ನಗರ ಎಂದಿಗೂ ನಿಲ್ಲುವುದಿಲ್ಲ. ಮಳೆ ನಗರವನ್ನು ತಂಪಾಗಿಸುತ್ತದೆ. ಮುಂಬೈನ ಶಕ್ತಿ, ಚೈತನ್ಯವನ್ನು ಮಳೆ ಮತ್ತಷ್ಟು ಹೆಚ್ಚಿಸುತ್ತದೆ. ಮಳೆಗಾಲವೇ ಮುಂಬೈನ ವಿಶೇಷ ಅನುಭವದ ಭಾಗವಾಗಿದೆ. ಮಳೆ ಇರಲಿ, ಬಿಸಿಲಿರಲಿ, ಇಲ್ಲಿಗೆ ಬರಲು ನನಗೆ ಯಾವಾಗಲೂ ಇಷ್ಟ” ಎಂದು ಬ್ರೆಟ್ ಲೀ ಹೇಳಿದ್ದಾರೆ.
“ಇತ್ತೀಚಿನ ಫೋಟೋಶೂಟ್ ವೇಳೆ ಆಟೋರಿಕ್ಷಾದಲ್ಲಿ ಕುಳಿತ ಅನುಭವ ತಮ್ಮ ಹಳೆಯ ದಿನಗಳನ್ನು ನೆನಪಿಸಿತು ಎಂದ ಅವರು, “1994ರಲ್ಲಿ ನಾವು ಕ್ರಿಕೆಟ್ ಕಿಟ್ಗಳನ್ನು ಆಟೋದಲ್ಲಿ ಹಾಕಿಕೊಂಡು ಅಭ್ಯಾಸಕ್ಕೆ ಹೋಗುತ್ತಿದ್ದೆವು. ಆಗ ಮೊದಲ ಬಾರಿಗೆ ಆಟೋದಲ್ಲಿ ‘ಮುಕಾಬಲಾ’ ಹಾಡನ್ನು ಕೇಳಿದ್ದೆ. ಹಿಂದಿ ಅರ್ಥವಾಗದಿದ್ದರೂ ಆ ಸಂಗೀತ ತುಂಬಾ ಇಷ್ಟವಾಗಿತ್ತು. ನಂತರ ಅದರ ಅರ್ಥ ತಿಳಿದುಕೊಂಡೆ. ಈಗ ಭಾರತಕ್ಕೆ ಬಂದಾಗಲೆಲ್ಲ ಆ ಹಾಡನ್ನು ಕೇಳುತ್ತೇನೆ. ಬಳಿಕ ಎ.ಆರ್. ರೆಹಮಾನ್ ಅವರನ್ನು ಸಂದರ್ಶನ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ವಿಶೇಷ ಕ್ಷಣವಾಗಿತ್ತು” ಎಂದು ಸ್ಮರಿಸಿದ್ದಾರೆ.
“ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಹಲವು ವರ್ಷಗಳಾದರೂ ಭಾರತದಲ್ಲಿ ಅಭಿಮಾನಿಗಳಿಂದ ಸಿಗುತ್ತಿರುವ ಪ್ರೀತಿ ಇಂದಿಗೂ ಅಚ್ಚರಿ ಮೂಡಿಸುತ್ತದೆ. ಆಡುವಾಗ ಪ್ರತಿಯೊಂದು ಪಂದ್ಯವನ್ನೂ ಗೆಲ್ಲಬೇಕೆಂಬ ಗುರಿಯೊಂದಿಗೆ ಮೈದಾನಕ್ಕಿಳಿಯುತ್ತಿದ್ದೆ. ಆದರೆ ಆಟ ಮುಗಿದ ಬಳಿಕ ಅದು ಜೀವನದ ಒಂದು ಅಧ್ಯಾಯ ಮಾತ್ರ. ಆಸ್ಟ್ರೇಲಿಯಾ ಅಥವಾ ದುಬೈನಲ್ಲಿ ಓಡಾಡುವಾಗ ನಾನು ಕ್ರಿಕೆಟಿಗ ಎಂಬುದನ್ನೇ ಮರೆತುಬಿಡುತ್ತೇನೆ. ಆದರೆ ಮುಂಬೈಗೆ ಬಂದಾಗ ಅಭಿಮಾನಿಗಳು ತೋರುವ ಪ್ರೀತಿ ಅದನ್ನು ನೆನಪಿಸುತ್ತದೆ. ಭಾರತದಲ್ಲಿ ಸಿಗುವ ಪ್ರೀತಿಯನ್ನು ಇಲ್ಲಿ ಬರದವರಿಗೆ ವಿವರಿಸುವುದು ಕಷ್ಟ” ಎಂದಿದ್ದಾರೆ.
ಭಾರತದ ಬಗ್ಗೆ ವಿದೇಶಿಯರು ಕೇಳಿದಾಗ, “ಇಲ್ಲಿ ಅತ್ಯುತ್ತಮ ಹೋಟೆಲ್ಗಳಿವೆ, ಸುಂದರ ಪ್ರವಾಸಿ ತಾಣಗಳಿವೆ. ಮುಂಬೈನ ಕ್ವೀನ್ಸ್ ನೆಕ್ಲೇಸ್ನಲ್ಲಿ ನಡೆಯುವುದೇ ಒಂದು ಅದ್ಭುತ ಅನುಭವ. ಆದರೆ ಭಾರತವನ್ನು ವಿಶೇಷವಾಗಿಸುವುದು ಇಲ್ಲಿನ ಜನ. ಅವರ ಆತ್ಮೀಯತೆ, ಪ್ರೀತಿ, ಉತ್ಸಾಹ ಮತ್ತು ಕರುಣೆ ನನ್ನನ್ನು ಯಾವಾಗಲೂ ಸೆಳೆಯುತ್ತದೆ. ಭಾರತದಲ್ಲಿ ನನಗೆ ರಾಜನಂತೆ ಗೌರವ ಸಿಗುತ್ತದೆ” ಎಂದು ಬ್ರೆಟ್ ಲೀ ಹಂಚಿಕೊಂಡಿದ್ದಾರೆ.




