- ಉತ್ತಮ ಪ್ರಜಾಕೀಯ ಅಭ್ಯರ್ಥಿಯ ವಿನೂತನ ಪ್ರಯೋಗ
- ಕ್ಷೇತ್ರದ ಮತದಾರರಿಗೆ ಬಾಂಡ್ ಪೇಪರ್ ಮೂಲಕ ಭರವಸೆ
ಅಕ್ರಮ, ಭ್ರಷ್ಟಾಚಾರ, ಪ್ರಜಾ ವಿರೋಧಿ ನಡೆಯ ಇಂದಿನ ರಾಜಕಾರಣದೊಳಗೆ ಬದಲಾವಣೆಯ ಹೆಜ್ಜೆಯೊಂದನ್ನು ಉತ್ತಮ ಪ್ರಜಾಕೀಯ ಪಕ್ಷ ದಾಖಲಿಸಿದೆ.
ನಟ ನಿರ್ದೇಶಕ ಉಪೇಂದ್ರ ಸ್ಥಾಪಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಅಶ್ವತ್ ಕುಮಾರ್ ಈ ಹೊಸ ಪ್ರಯೋಗ ನಡೆಸುತ್ತಿದ್ದಾರೆ.
ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯದ ಅಭ್ಯರ್ಥಿಯಾಗಿರುವ ಅಶ್ವತ್ ಕುಮಾರ್ ತಮ್ಮ ಕ್ಷೇತ್ರದ ಮತದಾರರಿಗೆ ಪ್ರಚಾರದ ಕರಪತ್ರ ಹಂಚುವ ಬದಲು, “ಬಾಂಡ್ ಪೇಪರ್” ಹಂಚುತ್ತಿದ್ದಾರೆ.
ಹೌದು, ಅಶ್ವತ್ಥ ಕುಮಾರ್ ಬಾಂಡ್ ಪೇಪರ್ ಮೂಲಕ ಕ್ಷೇತ್ರದ ಮತದಾರರಿಗೆ ತಮ್ಮನ್ನು ಆಯ್ಕೆ ಮಾಡಿದರೆ ನಿಮಗೆ ನಾನೇನು ಮಾಡಿಕೊಡುತ್ತೇನೆ ಎನ್ನುವುದನ್ನು ಬಾಂಡ್ ಪೇಪರ್ ನಲ್ಲಿ ಮುದ್ರಿಸಿ ಸಹಿ ಹಾಕಿ ಎಲ್ಲರಿಗೂ ವಿತರಿಸುತ್ತಿದ್ದಾರೆ.
ಜೊತೆಗೆ ಇದಕ್ಕೆ ತಪ್ಪಿ ನಡೆದರೆ ಮತದಾರರು ಪಕ್ಷದ ವರಿಷ್ಠರಿಗೆ ದೂರು ನೀಡಬಹುದು, ಶಿಸ್ತುಕ್ರಮಕ್ಕೆ ಬದ್ಧನಾಗುವುದು ಅಥವಾ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಅವರು ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಮಂಗಳವಾರ ಮೈಸೂರು ಭಾಗದಲ್ಲಿ ಪ್ರಿಯಾಂಕಾ ಗಾಂಧಿ ಮೋಡಿ : ಕೈ ಅಭ್ಯರ್ಥಿಗಳ ಪರ ಪ್ರಚಾರ
ಇತ್ತ ತಮ್ಮ ಅಭ್ಯರ್ಥಿ ತೆಗೆದುಕೊಂಡಿರುವ ನಡೆಯನ್ನು ಪಕ್ಷದ ಸಂಸ್ಥಾಪಕಾಧ್ಯಕ್ಷ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿಹಾಕಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಹಾಗೆಯೇ ನಾಗರಿಕರಿಗೂ ಪ್ರಶ್ನೆ ಹಾಕಿರುವ ಅವರು ಪ್ರಜಾಕೀಯದ ಎಲ್ಲ ಅಭ್ಯರ್ಥಿಗಳೂ ಸ್ವಯಂ ಪ್ರೇರಿತರಾಗಿ ಈ ರೀತಿ ಬಾಂಡ್ ಅಗ್ರಿಮೆಂಟ್ ಬರೆದುಕೊಟ್ಟ ನಂತರ ತಪ್ಪಿದರೆ ಮತದಾರರು ಕಾನೂನು ಕ್ರಮ ಕೈಗೊಳ್ಳಬಹುದೇ? ಈ ರೀತಿ ಕಾನೂನು ಬರಲು ಇದು ಬೇಡಿಕೆಯಾದರೂ ಆಗುವುದೇ? ತಿಳಿದವರು ತಿಳಿಸಿ ಎಂದಿದ್ದಾರೆ.
ಇನ್ನೊಂದೆಡೆ ಪ್ರಜಾಕೀಯ ಅಭ್ಯರ್ಥಿ ನಡೆಗೆ ಟ್ವೀಟಿಗರು ಮಿಶ್ರ ಪ್ರತಿಕ್ರಿಯೆ ದಾಖಲಿಸಿದ್ದಾರೆ. ಕೆಲವರು ಒಳ್ಳೆಯ ಪ್ರಯತ್ನ ಯಾಕೆ ಕಾರ್ಯಗತವಾಗಬಾರದು ಎಂದರೆ, ಮತ್ತೆ ಹಲವರು ಬದಲಾಗದ ವ್ಯವಸ್ಥೆಯೊಳಗೆ ಏನು ಮಾಡಿದರೂ ವ್ಯರ್ಥವೇ ಬಿಡಿ ಎಂದಿದ್ದಾರೆ.
ಒಟ್ಟಿನಲ್ಲಿ ಯಾರು ಏನೇ ಹೇಳಲಿ, ಬದಲಾವಣೆ ಬಯಸಿರುವ ರಾಜಕೀಯ ವ್ಯವಸ್ಥೆಯೊಳಗೆ ರಾಷ್ಟ್ರೀಯ ಪಕ್ಷಗಳೆಂದು ಹೇಳಿಕೊಳ್ಳುವವರು ಮಾಡಬಹುದೆಂದು ಯೋಚಿಸದೇ ಇರುವ ಯೋಚನೆಯೊಂದನ್ನು ಪ್ರಜಾಕೀಯ ಪಾರ್ಟಿ ಹುಟ್ಟು ಹಾಕಿ ಇತರರಿಗಿಂತ ತಾನೇಕೆ ಭಿನ್ನ ಎಂದು ತೋರಿಸಿದೆ.