- ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿದ ಅಭಿಮಾನಿಗಳು
- ಐದು ದಿನಗಳ ಕಾಲ ಪ್ರಚಾರದಲ್ಲಿದ್ದ ಸೋಮಣ್ಣಗೆ ಮುಜುಗರ
ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ವಿ ಸೋಮಣ್ಣ ಅವರು ಮತ್ತೆ ಮುಜುಗರಕ್ಕೆ ಈಡಾಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಲ್ಲೇ ಮತದಾರರು ಕ್ಷೇತ್ರದಲ್ಲಿ ಬಿಜೆಪಿ ನಾಯಕರಿಗೆ ತರಾಟೆ ತೆಗೆದುಕೊಳ್ಳುತ್ತಿದ್ದಾರೆ.
ಸೋಮಣ್ಣ ಅವರು ಐದು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ಹಮ್ಮಿಕೊಂಡಿದ್ದರು. ಆದರೆ, ಪ್ರಚಾರದ ಮೊದಲ ದಿನವೇ ವರುಣಾ ಕ್ಷೇತ್ರದ ಭುಗತಗಳ್ಳಿ ಗ್ರಾಮದ ಜನರು ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿ, ಸೋಮಣ್ಣ ಅವರಿಗೆ ಘೆರಾವ್ ಹಾಕಿದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದ ಸೋಮಣ್ಣ ಭಾಷಣ ಮಾಡಲು ಮುಂದಾಗುತ್ತಿದ್ದಂತೆಯೇ ಯುವಕನೋರ್ವ ಪ್ರಶ್ನೆ ಕೇಳಲು ಪ್ರಾರಂಭಿಸಿದ. ಕಾರ್ಯಕ್ರಮ ಮುಗಿದ ಬಳಿಕ ಮಾತನಾಡುವೆ ಎಂದು ಸೋಮಣ್ಣ ಹೇಳಿದರು.
ಬಳಿಕ ಭಾಷಣ ಮುಗಿಯುತ್ತಿದ್ದಂತೆಯೇ ಸೊಮಣ್ಣ ಅವರನ್ನು ಎದುರಾದ ಗ್ರಾಮಸ್ಥರು ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿದ್ದಾರೆ. ಮತ್ತೊಂದೆಡೆ ಸೋಮಣ್ಣ ಪರವಾಗಿ ಕೆಲವು ಯುವಕರು ಘೋಷಣೆ ಕೂಗಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಈದಿನ.ಕಾಮ್ ಸಮೀಕ್ಷೆ -1: ಕರ್ನಾಟಕದಲ್ಲಿ ಸ್ಪಷ್ಟ ಆಡಳಿತ ವಿರೋಧಿ ಅಲೆ ಇದೆ
ಸ್ಥಳದಲ್ಲಿ ಬಿಗುವಿನ ವಾತವಾರಣ ನಿರ್ಮಾಣವಾಗಿತ್ತು, ಐದು ನಿಮಿಷಗಳ ಕಾಲ ಮಾತನಾಡಲು ಅವಕಾಶ ಕೊಡುವಂತೆ ಸಿದ್ದರಾಮಯ್ಯ ಅವರ ಅಭಿಮಾನಿಗಳು ಆಗ್ರಹಿಸಿದರು. ಆದರೆ, ಪೊಲೀಸರ ಮಧ್ಯೆ ಪ್ರವೇಶದೊಂದಿಗೆ ಸೋಮಣ್ಣ ಅವರು ಮತ್ತೊಂದು ಗ್ರಾಮಕ್ಕೆ ತೆರಳಿದರು.
ಮೂರನೇ ಬಾರಿ ಪ್ರಚಾರ
ಸೋಮಣ್ಣ ಅವರಿಗೆ ಕ್ಷೇತ್ರದ ಜನರು ತರಾಟೆ ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಏಪ್ರಿಲ್ 18ರಂದು ಲಲಿತಾದ್ರಿಪುರದ ಗ್ರಾಮದ ಜನರು ಸೋಮಣ್ಣ ಅವರಿಗೆ ಅಭಿವೃದ್ಧಿ ಕುರಿತು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದರು.
ಇದಾದ ಬಳಿಕ ಸೋಮಣ್ಣ ಪರ ಪ್ರಚಾರಕ್ಕೆ ತೆರಳಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೂ ಯುವಕರು ತರಾಟೆಗೆ ತೆಗೆದುಕೊಂಡಿದ್ದರು. ಪ್ರತಾಪ್ ಸಿಂಹರನ್ನು ಯುವಕರು ಪ್ರಶ್ನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.