ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರಿಗೆ ಟಿಕೆಟ್ ಘೋಷಿಸಿಲ್ಲ. ಈ ಹಿನ್ನೆಲೆ ಅವರು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಚುನಾವಣಾ ದಿನಾಂಕ ನಿಗದಿಯಾದದ್ದೆ ತಡ ರಾಜಕೀಯ ವಿದ್ಯಾಮಾನಗಳು ಜೋರಾಗಿ ನಡೆಯುತ್ತಿವೆ. ಒಂದೆಡೆ ಬಿಜೆಪಿಯ ಘಟಾನುಘಟಿಗಳೇ ಪಕ್ಷಕ್ಕೆ ಸೆಡ್ಡು ಹೊಡೆದರೆ ಮತ್ತೊಂದೆಡೆ ಕಾಂಗ್ರೆಸ್ ಸಹ ಸಣ್ಣದಾಗಿ ಬಂಡಾಯದ ಬಿಸಿ ಎದುರಿಸುತ್ತಿದೆ.
ಹಾಲಿ ಶಾಸಕ ಶ್ರೀನಿವಾಸ್ ಮೂರ್ತಿ ಅವರು ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಅವರಿಗೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ಈ ಹಿನ್ನೆಲೆ ಟಿಕೆಟ್ ಕೈ ತಪ್ಪುವ ಸುಳಿವಿನಿಂದ ಪಕ್ಷ ತೊರೆಯಲು ಶಾಸಕ ಮುಂದಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಶ್ ಶೆಟ್ಟರ್
ಶ್ರೀನಿವಾಸ್ ಮುರ್ತಿ ಶನಿವಾರ ಈ ಬಗ್ಗೆ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ. ಯಾವುದೇ ತೀರ್ಮಾನಕ್ಕಾದರೂ ಸಿದ್ಧರಿದ್ದೇವೆ ಎಂದು ಬೆಂಬಲಿಗರು ತಿಳಿಸಿದ್ದಾರೆ ಎನ್ನಲಾಗಿದೆ. ಭಾನುವಾರ ಶ್ರೀನಿವಾಸ್ ಮೂರ್ತಿ ಅವರು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಲು ಶಿರಸಿಗೆ ತೆರಳಿದ್ದಾರೆ.
ಅಖಂಡ ಶ್ರೀನಿವಾಸ್ ಪರ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹ್ಮದ್ ಬ್ಯಾಟ್ ಬೀಸಿದ್ದರು. ಆದರೆ, ಡಿ ಕೆ ಶಿವಕುಮಾರ್ ತಮ್ಮ ಅಭ್ಯರ್ಥಿಯ ಪರ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.