- ರಾಹುಲ್ ಗಾಂಧಿ ಅನರ್ಹತೆ ವಿರೋಧಿಸಿದ್ದ ಪ್ರಕಾಶ್ ರಾಜ್
- ಇಡೀ ಭಾರತವೇ ನಿಮ್ಮ ಮನೆ ಎಂದ ಬಹುಭಾಷಾ ನಟ
ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭೆ ಸಚಿವಾಲಯ ಸೂಚಿಸಿದ ಬೆನ್ನಲ್ಲೇ ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮ ಮನೆಗೆ ಬರುವಂತೆ ಆಹ್ವಾನಿಸಿದ್ದಾರೆ.
ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಯವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ, ಜಾಮೀನು ನೀಡಿದ ಬಳಿಕ ಲೋಕಸಭಾ ಸಚಿವಾಲಯ ಅವರನ್ನು ಸದಸ್ಯ ಸ್ಥಾನದಿಂದ ಅರ್ನಹಗೊಳಿಸಿತ್ತು. ಇದಾದ ಕೆಲ ದಿನಕ್ಕೆ ರಾಹುಲ್ ಗಾಂಧಿ ವಾಸವಿದ್ದ ದೆಹಲಿಯ ತುಘಲಕ್ ರಸ್ತೆಯ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಸಚಿವಾಲಯ ಸೂಚಿಸಿತ್ತು. ಮಾರ್ಚ್ 28ರಂದು ಸಚಿವಾಲಯದ ಉಪ ಕಾರ್ಯದರ್ಶಿ ಮೋಹಿತ್ ರಾಜನ್ ಅವರಿಗೆ ಪತ್ರ ಬರೆಯುವ ಮೂಲಕ ಪ್ರತಿಕ್ರಿಯಿಸಿರುವ ರಾಹುಲ್, ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವುದಾಗಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಲೋಕಸಭೆಯ ಉಪ ಕಾರ್ಯದರ್ಶಿಗಳಿಗೆ ಬರೆದ ಪತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್, “ಪ್ರೀತಿಯ ರಾಹುಲ್ ಗಾಂಧಿ, ಈ ಸರ್ವಾಧಿಕಾರಿಗಳಿಂದ ದೇಶವನ್ನು ಕಾಪಾಡಲು ಪಣ ತೊಟ್ಟಿರುವ ಪ್ರತಿಯೊಬ್ಬರ ಮನೆಯೂ ನಿಮ್ಮದೇ. ಭಾರತ ನಿಮ್ಮ ಮನೆ, ನಿಮಗೆ ನನ್ನ ಮನೆಗೆ ಆದರದ ಸ್ವಾಗತ ಕೋರುತ್ತೇನೆ. ಇನ್ನು ಹೆಚ್ಚಿನ ಶಕ್ತಿ ನಿಮ್ಮದಾಗಲಿ” ಎಂದು ಹಾರೈಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊರಳಿಗೆ ಲಕ್ಷ್ಮಿದೇವಿ ಹಾರ ಧರಿಸಿದ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು
ರಾಹುಲ್ ಗಾಂಧಿಯವರನ್ನು ಅನರ್ಹತೆಗೊಳಿಸಿದ ಸಂದರ್ಭದಲ್ಲೂ ಪ್ರತಿಕ್ರಿಯಿಸಿದ್ದ ಪ್ರಕಾಶ್ ರಾಜ್, “ಈ ರೀತಿ ಕೀಳುಮಟ್ಟದ, ಪ್ರಗತಿಗೆ ಮಾರಕವಾಗುಂತಹ ರಾಜನೀತಿ ಮಾಡಲು ನಾಚಿಕೆಯಾಗಬೇಕು. ಇದು ದೇಶಕ್ಕಾಗಿ ನಾವೆಲ್ಲರೂ ಧ್ವನಿ ಎತ್ತಬೇಕಿರುವ ಸಂದರ್ಭ. ಇಂತಹ ಹೊತ್ತಿನಲ್ಲಿ ನಾವು ಸುಮ್ಮನೆ ಕೂತರೆ, ಇವತ್ತಿನ ನಮ್ಮ ಮೌನಕ್ಕೆ ನಾಳೆ ದಿನ ನಾವೇ ದುಬಾರಿ ಬೆಲೆ ತೆರಬೇಕಾಗುತ್ತದೆ” ಎಂದು ಜನಸಾಮಾನ್ಯರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದರು.